ರಂಜಾನ್ ಮತ್ತು ಶ್ರಾವಣ
ಮೆಹಬೂಬ್ ಮಠದ
ರಂಜಾನ್ ಮತ್ತು
ಶ್ರಾವಣ
ಭಕ್ತಿಯ ಹೊತ್ತು
ತರುತ್ತವೆ.
‘ಸೆಹರಿ’ ‘ಇಫ್ತಾರ್’ ನ
ಕನ್ನಡಿಯಲ್ಲಿ
ಉಪವಾಸದ
ಬಿಂಬ ಕಾಣುತ್ತದೆ.
ಭಜನೆಯ ಗೀತೆಗಳಿಗೆ
‘ತರಾವಿ’ಯ
ಆತ್ಮ ತಲೆದೂಗುತ್ತದೆ.
‘ಝಕಾತ್’ ನ ಹಣ
‘ಬಾಗಿನ’ ದ ವಸ್ತು
ಬಡವನ ಹೊಟ್ಟೆಗೆ
ಲಾಲಿ ಹಾಡುತ್ತವೆ.
‘ಸುರ್ ಕರ್ಮಾ’ ದ ಸಿಹಿ
‘ಗೋಧಿ ಹುಗ್ಗಿ’ ಯ ರುಚಿ
ಎರಡರಲ್ಲೂ
‘ಅವನ ಸಹಿ’ ಇದೆ.
ಚಟಗಳ ಎಸೆದು
ಇಂದ್ರಿಯಗಳ ಕಟ್ಟಿ ಹಾಕಿ
ಆಧ್ಯಾತ್ಮದ ದಾರಿಯಲಿ
ಇಬ್ಬರ ನಡಿಗೆ.
ಗೆಳೆಯರ ಬರುವಿಕೆಗೆ
ಪ್ರತಿ
ಬೀದಿಯೂ
ಶಬರಿಯಾಗುತ್ತದೆ.
ಗುಡಿಯ ಹಸಿರು ಸೀರೆ
ದರ್ಗಾದ ಕೇಸರಿ ಚಾದಾರ
ಸ್ನೇಹದ ಸನ್ನದು
ನವೀಕರಣ ಮಾಡಿಕೊಳ್ಳುತ್ತವೆ.
ಸಹಿಷ್ಣುತೆಯ ಸಹಬಾಳ್ವೆ ನಮ್ಮ ಗ್ರಾಮೀಣ ಬದುಕಿನ ಸಹಜ ಅಂಗ ಅದನ್ನು ಸರಳ ಪದಗಳಲ್ಲಿ ಕಟ್ಟಿಕೊಟ್ಟ ಮೆಹಬೂಬ್ ಸರ್ ಗೆ ಧನ್ಯವಾದಗಳು ಅಭಿನಂದನೆಗಳು.
ಸದಾಶಯದ ಕವಿತೆ. ಚೆನ್ನಾಗಿದೆ. ಇಷ್ಟವಾಯಿತು.