ಬಿ ಎಂ ಬಷೀರ್
ಎನ್ ಡಿ ಟಿವಿ ಯನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲು ಕೇಂದ್ರ ಸರಕಾರ ಹೊರಟಿದೆ. ಯಾಕೋ ಹಳೆ ಸ್ಟೇಟಸ್ ಒಂದು ನೆನಪಾಯಿತು.
ಮೋದಿ ಗೆದ್ದಾಗ May 24, 2014 5:11pm ರಂದು ನಾನು ಹಾಕಿದ ಸ್ಟೇಟಸ್ ನ್ನು, ಮತ್ತೆ ಕಾಪಿ ಮಾಡಿ ಇಲ್ಲಿ ಹಾಕಿದ್ದೇನೆ.
ನಾಲ್ವರು ಶಿಷ್ಯರ ಕತೆ
ಮೋದಿ ಗೆದ್ದಾಗ ನನಗೆ ನೆನಪಾದ ಕತೆ ಇದು.
ನಾಲ್ವರು ಶಿಷ್ಯರು ಅದಾಗಲೇ ಶಿಕ್ಷಣ ಮುಗಿಸಿ ಗುರುಕುಲದಿಂದ ತಮ್ಮ ಗುರಿಯೆಡೆಗೆ ಹೊರಟಿದ್ದರು. ನಾಲ್ವರಲ್ಲಿ ಒಬ್ಬ ಮಾತ್ರ ಶತ ದಡ್ಡ. ಉಳಿದವರೆಲ್ಲ ಪ್ರಾಜ್ಞರು. ಅಪಾರ ಜ್ಞಾನವುಳ್ಳವರು. ಹೀಗೆ ದಾರಿ ಸಾಗುತ್ತಿದ್ದಂತೆ…ಒಂದೆಡೆ ಅವರಿಗೆ ಅದೇನೋ ಎಲುಬುಗಳ ಅವಶೇಷ ಕಂಡಿತು.
ಒಬ್ಬ ಶಿಷ್ಯ ತನ್ನ ಶಕ್ತಿಯನ್ನು ಪ್ರದರ್ಶಿಸುವುದಕ್ಕೆ ಮುಂದಾದ. ಚೂರು ಚೂರಾಗಿರುವ ಎಲುಬುಗಳನ್ನೆಲ್ಲ ಅವನು ಮರು ಜೋಡಿಸಿದ. ನೋಡುತ್ತಲೇ ಗೊತ್ತಾಗಿ ಹೋಯಿತು ಅದೊಂದು ಹುಲಿಯ ಎಲುಬುಗಳು ಎನ್ನುವುದು. ಇನ್ನೊಬ್ಬ ಶಿಷ್ಯ ಇನ್ನೂ ಶಕ್ತಿವಂತ. ಅವನು ಅದಕ್ಕೆ ರಕ್ತಮಾಂಸವನ್ನು ನೀಡಿದ. ಈಗ ಅದು ಸಂಪೂರ್ಣ ಹುಲಿಯೇ ಆಗಿತ್ತು. ಪ್ರಾಣ ಒಂದು ಇರಲಿಲ್ಲ. ಆಗ ಮೂರನೇಯವ ತನ್ನ ಶಕ್ತಿ ಪ್ರದರ್ಶಿಸಲು ಹೊರಟ. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಅದಕ್ಕೆ ಪ್ರಾಣ ಅಥವಾ ಜೀವ ಕೊಡಲು ಹೊರಟ.
ಆದರೆ ದಡ್ಡ ಶಿಷ್ಯನಿಗೆ ಇಷ್ಟೆಲ್ಲ ಜ್ಞಾನ, ಶಕ್ತಿ ಇರಲಿಲ್ಲ. ಅವನು ‘ಒಂದು ನಿಮಿಷ’ ಎಂದವನೇ ಪಕ್ಕದಲ್ಲೇ ಒಂದು ಮರವನ್ನು ನೋಡಿದ. ನೇರವಾಗಿ ಅವನು ಆ ಮರವನ್ನು ಹೋಗಿ ಹತ್ತಿಕೊಂಡ. ಇದೀಗ ಮೂರನೇ ಶಿಷ್ಯ ಹುಲಿಗೆ ಜೀವವನ್ನು ನೀಡಿದ. ಹುಲಿ ಜೀವ ಪಡೆದದ್ದೇ ಗರ್ಜಿಸಿ ಮೂವರ ಮೇಲೆ ಹಾರಿ ಅವರನ್ನು ತಿಂದು ಹಾಕಿ, ಕಾಡಿನ ಕಡೆಗೆ ನಡೆಯಿತು. ದಡ್ಡ ಶಿಷ್ಯ ಮರದಿಂದ ಇಳಿದು ತನ್ನ ಊರಿನ ಕಡೆಗೆ ಹೊರಟ.
ಮೋದಿಗೆ ಜೀವ ಕೊಡುವ ಮೂಲಕ ಮಾಧ್ಯಮಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿವೆ. ಆದರೆ ಸರ್ವಾಧಿಕಾರ ಮನಸ್ಥಿತಿ ಮೊತ್ತ ಮೊದಲು ಎರಗುವುದು, ಅದುಮಿ ಹಿಡಿಯುವುದು ಮಾಧ್ಯಮಗಳ ಶಕ್ತಿಯನ್ನೇ. ಇದು ನಿಜ ಆಗದಿರಲಿ ಎನ್ನುವುದು ನನ್ನ ಆಶಯ.
kathe channagide sir… super