ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ 'ಋಗ್ವೇದ'

ಎಚ್.ಎಸ್. ವೆಂಕಟೇಶಮೂರ್ತಿ

ಹಿರಿಯ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಹೊಸ ಪುಸ್ತಕ ‘ಋಗ್ವೇದ ಸ್ಫುರಣ’ ಅಭಿನವ ಪ್ರಕಟಿಸಿದೆ.
ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ…

ಋಗ್ವೇದವು ನಮ್ಮ ದೇಶದ ಅತ್ಯಂತ ಪ್ರಾಚೀನವಾದ ಭಾಷಿಕ ದಾಖಲೆ. ಸುಮಾರು 3500 ವರ್ಷಗಳ ಹಿಂದೆ ಋಗ್ವೇದದ ನಿರ್ಮಾಣ ಆಗಿರಬಹುದು ಎಂದು ವಿದ್ವಾಂಸರು ಹೇಳುತ್ತಾರೆ.
ರೂಢಿಗತ ನಂಬಿಕೆಯ ಪ್ರಕಾರ ಇದೊಂದು ಅಪೌರುಷೇಯ ಕೃತಿ (ಮನುಷ್ಯರು ಬರೆದದ್ದಲ್ಲ ಎಂದು ಅರ್ಥ). ಇದರ ಪ್ರಾಚೀನತೆ, ಬೃಹತ್ ಸ್ವರೂಪ, ಸರ್ವ ವ್ಯಾಪಕತೆ, ಧಾರ್ಮಿಕ ಸಂಗತತೆ, ಯಜ್ಞಯಾಗಾದಿಗಳಲ್ಲಿ ಅದನ್ನು ಸ್ತುತಿರೂಪದಲ್ಲಿ ಬಳಸಲಾಗುವ ಪದ್ಧತಿ-ಈ ಎಲ್ಲ ಕಾರಣಗಳಿಂದ ವೇದವು ಅಪೌರುಷೇಯ ಎಂಬ ಗ್ರಹಿಕೆ ಉಂಟಾಗಿರಬಹುದು.
ಹತ್ತು ಮಂಡಲಗಳಲ್ಲಿ ಹರಡಿಕೊಂಡಿರುವ ಋಗ್ವೇದದಲ್ಲಿ 1028 ಸೂಕ್ತಗಳಿವೆ. ಪ್ರತಿಯೊಂದು ಸೂಕ್ತದಲ್ಲೂ ಅನೇಕ ಋಕ್ಕುಗಳು ಇರುತ್ತವೆ. ಅನೇಕ ಬಿಡಿ ಪದ್ಯಗಳಿಂದ ಕೂಡಿ ಒಂದು ಕವಿತೆ ಆದಂತೆ ಇದು. ಪದ್ಯಗಳ ಸಂಖ್ಯೆ ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಪದ್ಯಗಳನ್ನೇ ಲೆಕ್ಖ ಹಿಡಿದು ಹೇಳುವುದಾದರೆ 10,552 ಋಕ್ಕುಗಳು ಅಂದರೆ ಪದ್ಯಗಳು ಋಗ್ವೇದ ಒಂದರಲ್ಲಿಯೇ ಇವೆ. ಪ್ರತಿಯೊಂದು ಋಕ್ಕೂ ಛಂದೋಬದ್ಧವಾಗಿರುತ್ತದೆ. ಗಾಯತ್ರಿ, ಅನುಷ್ಟುಪ್, ಬೃಹತೀ, ತ್ರಿಷ್ಟುಪ್, ಜಗತೀ ಈ ಮೊದಲಾದ ಏಳು ಪ್ರಧಾನ ವೃತ್ತಗಳಲ್ಲಿ ಹೆಚ್ಚಿನ ಋಕ್ಕುಗಳು ಸಂಯೋಜಿತವಾಗಿವೆ.
ಸುಮಾರು ಇನ್ನೂರು ಮಂದಿ ಸಮಾಜದ ಬೇರೆ ಬೇರೆ ಸ್ತರಗಳಿಂದ ಬಂದ ಋಷಿಗಳು ತಮ್ಮ ದರ್ಶನದಿಂದ ಈ ಋಕ್ಕುಗಳನ್ನು ಪಡೆದಿದ್ದಾರೆ. ಕುತೂಹಲಕ್ಕಾಗಿ ಗಮನಿಸಬಹುದಾದ ಕೆಲವು ಹೆಸರುಗಳು: ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭರದ್ವಾಜ, ವಸಿಷ್ಠ ಮತ್ತು ಅವರ ವಂಶಪರಂಪರೆ. ಅಂದರೆ ಋಕ್ಕುಗಳು ರಚಿತವಾದುವಲ್ಲ. ತಪಸ್ವಿಗಳಾದ ಋಷಿಕವಿಗಳಿಗೆ ಅವರ ಧ್ಯಾನ ಸ್ಥಿತಿಯಲ್ಲಿ ಬೋಧೆಯಾದಂಥವು ಎಂಬುದು ನಂಬಿಕೆ.

ಆ ಋಷಿಗಳಲ್ಲಿ 25ಕ್ಕೂ ಮಿಕ್ಕು ಸ್ತ್ರೀ ಋಷಿಗಳೂ ಇದ್ದಾರೆ (ಉದಾಹರಣೆಗೆ-ಲೋಪಾಮುದ್ರೆ, ರೋಮಶಾ, ಅಪಾಲಾ, ವಿಶ್ವವಾರಾ, ಘೋಷಾ, ಯಮಿ, ಪೌಲಮಿ ಇತ್ಯಾದಿ). ಕ್ಷತ್ರಿಯ ವೃತ್ತಿಯ ರಾಜರ್ಷಿಗಳೂ ಇದ್ದಾರೆ (ಸುದಾಸ ಪೈಜವನ, ಮಾಂಧಾತ್ರಿ ಯೌವನಾಶ್ವ, ಅರುಣ ವೈತಹವ್ಯ).
ಋಕ್ಕುಗಳ ಪ್ರಧಾನ ಬಳಕೆಯಾಗುತ್ತಿದ್ದುದು ಯಜ್ಞ ಯಾಗಾದಿಗಳಲ್ಲೇ. ಋಕ್ಕುಗಳನ್ನು ಪಠಿಸಿ ಬೇರೆ ಬೇರೆ ದೇವತೆಗಳನ್ನು ಆಹ್ವಾನಿಸಲಾಗುತ್ತಿತ್ತು. ಇಂದ್ರ, ಅಗ್ನಿ, ವರುಣ, ಮರುತ್ ಮೊದಲಾದ ದೇವತೆಗಳು ತಮಗೆ ಸ್ತುತಿಗಳನ್ನು ವಿನಿಯೋಗಿಸಿ ಹೋತೃಗಳು ಆಹ್ವಾನ ನೀಡಿದಾಗ ಯಜ್ಞಮಂಟಪಕ್ಕೆ ಆಗಮಿಸಿ ಅಗ್ನಿಯ ಮೂಲಕ ತಮಗೆ ಅರ್ಪಿತವಾಗುವ ಹವಿಸ್ಸು ಮತ್ತು ಸೋಮರಸವನ್ನು ಸ್ವೀಕರಿಸಿ, ಸಂತೃಪ್ತರಾಗಿ ಯಜ್ಞಕರ್ತರ ಕೋರಿಕೆಗಳನ್ನು ಈಡೇರಿಸುವರು ಎಂಬುದು ವೈದಿಕ ಯುಗದ ನಂಬಿಕೆಯಾಗಿತ್ತು.
ಮುಖ್ಯವಾಗಿ ನಾವು ಗ್ರಹಿಸಬೇಕಾದದ್ದು ಋಗ್ವೇದದ ಋಕ್ಕುಗಳು ಯಜ್ಞ ಸಂದರ್ಭದಲ್ಲಿ ದೇವತೆಗಳಿಗೆ ವಿನಿಯೋಗಿಸಲು ಸಾಂಗತ್ಯದ ಒಂದು ಭಾಗವಾಗಿ ಬಳಕೆಯಾಗುತ್ತಿದ್ದವು ಎಂಬುದನ್ನು.
ಈ ಕಾರಣದಿಂದಾಗಿಯೇ ಋಕ್ಕುಗಳ ಅರ್ಥಕ್ಕೆ ಸಿಗಬೇಕಾದ ಪ್ರಾಶಸ್ತ್ಯ ಸಿಗದೆ ಅವುಗಳ ಪಠಣಕ್ಕೆ ಹೆಚ್ಚು ಒತ್ತು ಬಿತ್ತು. ಮಂತ್ರಾರ್ಥಕ್ಕಿಂತ ಮಂತ್ರ ಮುಖ್ಯವಾಯಿತು. ಯಾವ ದೇವತೆಗೆ ಯಾವ ಮಂತ್ರ ವಿನಿಯೋಗವಾಗಬೇಕು,
ಅದನ್ನು ಉಚ್ಚರಿಸುವ ಕ್ರಮ ಯಾವುದು ಮೊದಲಾದ ತಂತ್ರಾಂಶಗಳಿಗೆ ಹೆಚ್ಚಿನ ಒತ್ತು ಬಿತ್ತು.
ಋಗ್ವೇದದ ಮೊದಲ ವಿವರಣೆಕಾರರಾದ ಯಾಸ್ಕರು ತಮ್ಮ ನಿರುಕ್ತದಲ್ಲಿ ಮಂತ್ರದ ಅರ್ಥ ಮತ್ತು ಭಾವಕ್ಕೆ ವಿಶೇಷ ಗಮನಕೊಟ್ಟು ಭಾಷೆಯ ನೆಲೆಯಲ್ಲಿ ಋಕ್ಕುಗಳ ವಿಶ್ಲೇಷಣೆ ನಡೆಸಿ ನಿರುಕ್ತವನ್ನು ರಚಿಸಿದರಾದರು ಸಾಯಣರ ಕಾಲಕ್ಕೆ
(14ನೇ ಶತಮಾನ) ವೇದ ಮಂತ್ರಗಳು ಯಜ್ಞದಲ್ಲಿ ಹೇಗೆ ಪಠಿತವಾಗಬೇಕು ಎಂಬ ಕಡೆಯೇ ಹೆಚ್ಚು ಒತ್ತು ಬಿದ್ದು ಅರ್ಥದ ಕಡೆ ಗಮನ ಕಡಿಮೆಯಾಯಿತು ಎಂದೇ ಹೇಳಬಹುದು. ವೇದಾಧ್ಯಯನದ ಇತಿಹಾಸದಲ್ಲಿ ಹಳಿತಪ್ಪಿದ್ದ ಅಧ್ಯಯನ ಕ್ರಮವನ್ನು ಮತ್ತೆ ಯುಕ್ತ ನೆಲೆಗೆ ತಂದವರು ಸ್ವತಃ ಋಷಿಯೂ ಕವಿಯೂ ಆಗಿದ್ದ ಅರವಿಂದರು.
(ಲೇಖಕರ ಮಾತುಗಳಿಂದ)

‍ಲೇಖಕರು avadhi

13 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading