ರಾಜಾರಾಂ ತಲ್ಲೂರು
ಸ್ವಂತ ಭೂಮಿಯಲ್ಲಿ ದುಡಿದುಣ್ಣುವ ರೈತರಾಗುವ ಬದಲು ಕೃಷಿ ಕಾರ್ಪೋರೇಟ್ ಒಂದರ ನೌಕರರಾದರೆ ಬದುಕು ಸುಭದ್ರ!
ಇದು ಕೃಷಿ ಭೂಮಿಯನ್ನು ತಟ್ಟೆಯಲ್ಲಿಟ್ಟು ಕಾರ್ಪೋರೇಟ್ ಕೃಷಿ ಕಂಪನಿಗಳಿಗೆ ವಹಿಸಿಕೊಡುವುದಕ್ಕೆ ಒಳ್ಳೆಯ ಸಮರ್ಥನೆ.
ದೇಶದ ಭವಿಷ್ಯದ ಕೃಷಿ ನೀತಿ ಹೇಗಿರಬೇಕು ಎಂಬ ಬಗ್ಗೆ NDA ಸರಕಾರದ ‘ನೀತಿ ಆಯೋಗ’ ಮಾಡುತ್ತಿರುವ ಯೋಚನೆಗಳು ಖಾಸಗೀಕರಣದ ದಿಕ್ಕಿನಲ್ಲಿಯೇ ಸಾಗುತ್ತಿವೆ. ಆಯೋಗದ ಕೃಷಿ ಅಭಿವ್ರದ್ಧಿ ಕಾರ್ಯತಂಡ ಸಿದ್ಧಪಡಿಸಿರುವ ವರದಿಯಲ್ಲಿ ಈ ಬಗ್ಗೆ ಸಾಕಷ್ಟು ಹೊಳಹುಗಳು ಸಿಗುತ್ತವೆ.
1993-94ರಲ್ಲಿ ದೇಶದ ಆರ್ಥಿಕತೆಯ 28.3% ಭಾಗ ಆವರಿಸಿದ್ದ ಕೃಷಿ ಈಗ 2011-12ಕ್ಕೆ ಬರಿಯ 14.4%ಗೆ ಇಳಿದಿದೆ. ಈ ಸ್ಥಿತಿಯಲ್ಲಿ ಸುಧಾರಣೆಗಾಗಿ ಐದು ಅಂಶಗಳನ್ನು ಸ್ಥೂಲವಾಗಿ ಗುರುತಿಸಲಾಗಿದೆ.
1. ಉತ್ಪಾದಕತೆಯನ್ನು ಹೆಚ್ಚಿಸುವುದು
2. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಮತ್ತು ಮಾರಾಟದಲ್ಲಿ ಲಾಭಾಂಶ ಸಿಗುವುದು
3. ಕೃಷಿ ಭೂಮಿಯನ್ನು ಪಾರದರ್ಶಕವಾಗಿ ಗುತ್ತಿಗೆಗೆ ಬಿಟ್ಟುಕೊಡುವುದು
4. ನೈಸರ್ಗಿಕ ವಿಕೋಪಗಳಿಂದ ಬೆಳೆಹಾನಿಯಾದಾಗ ತುರ್ತು ಪರಿಹಾರ
5. ಫಲವತ್ತಾದ ಈಶಾನ್ಯ ರಾಜ್ಯಗಳಲ್ಲಿ ಕೃಷಿಗೆ ಪ್ರೋತ್ಸಾಹ
ಈ ಐದು ಅಂಶಗಳು ಹೊರನೋಟಕ್ಕೆ ಸಹಜವೆನ್ನಿಸಿದರೂ, ಆಳವಾಗಿ ಒಳಹೊಕ್ಕು ನೋಡಿದರೆ, ಖಾಸಗೀಕರಣ ಮತ್ತು ಕಾರ್ಪೋರೇಟೀಕರಣ – ಈ ಯೋಚನಾಸರಣಿಯ ಹಿಂದಿರುವ ಬಲವಾದ ತಾಯಿಬೇರು ಎಂಬುದು ಖಚಿತವಾಗುತ್ತದೆ. ಅದನ್ನು ಸಮರ್ಥಿಸಲು ಆ ಯೋಚನಾಸರಣಿಯ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ ನೋಡಿ.
* ಉತ್ಪಾದಕತೆ ಹೆಚ್ಚಿಸಲು ಪ್ರಯತ್ನಗಳ ಜೊತೆಯಲ್ಲಿ ಜೆನೆಟಿಕಲಿ ಮೊಡಿಫೈಡ್ ಬೀಜಗಳ ಬಳಕೆ, ಅದರಲ್ಲೂ ಮಾರುಕಟ್ಟೆ ಮೌಲ್ಯ ಹೆಚ್ಚಿರುವ ಹಣ್ಣು, ತರಕಾರಿ, ಹೂವು ಇತ್ಯಾದಿಗಳಿಗೆ ಆದ್ಯತೆ ಕೊಡಬೇಕು.
* ಧಾನ್ಯಗಳನ್ನು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸಬ್ಸಿಡಿ ದರಗಳಲ್ಲಿ ಕೊಡುವುದರಿಂದ ಆ ಧಾನ್ಯಕ್ಕೆ ಬೇಡಿಕೆ ಕಡಿಮೆ ಆಗುತ್ತದೆ ಮತ್ತು ರೈತರು ಕಡಿಮೆ ಬೆಲೆಗೆ ತಮ್ಮ ಧಾನ್ಯಗಳನ್ನು ಮಾರಬೇಕಾಗುತ್ತದೆ.
* ಹಲವು ರಾಜ್ಯಗಳಲ್ಲಿರುವ APMC ಕಾಯಿದೆಯಿಂದಾಗಿ ಕೃಷಿ ಮಾರುಕಟ್ಟೆಯು ಸರಕಾರಿ ನಿಯಂತ್ರಣದಲ್ಲಿ ಉಳಿದು, ಮಾರ್ಕೆಟಿಂಗ್ ವ್ಯವಸ್ಥೆ ತೀರಾ ಬಡವಾಗಿರುತ್ತದೆ.
* Essential Commodity Act ಕಾರಣದಿಂದಾಗಿ ಕೃಷಿ ಮಾರುಕಟ್ಟೆಯಲ್ಲಿ ಆಧುನಿಕ ಉಗ್ರಾಣ ಸೌಲಭ್ಯಗಳನ್ನು ಹೊಂದಲು ಕಾರ್ಪೋರೇಟ್ ಗಳು ಹಿಂಜರಿಯುತ್ತಿದ್ದಾರೆ.
* ತೆಲಂಗಾಣ, ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಕೃಷಿ ಭೂಮಿ ಗುತ್ತಿಗೆಗೆ ಕಠಿಣ ನಿಯಮಗಳಿವೆ, ಕೇರಳದಲ್ಲಿ ಸ್ವಸಹಾಯ ಗುಂಪುಗಳಿಗೆ ಬಿಟ್ಟರೆ ಬೇರೆಯವರಿಗೆ ಕೃಷಿಭೂಮಿ ಗುತ್ತಿಗೆ ಕೊಡುವಂತಿಲ್ಲ. ಉಳಿದ ರಾಜ್ಯಗಳಲ್ಲಿ ಕೊಡಬಹುದಾದರೂ ಇವು ಭೂಮಾಲಕರ ಹಿತಾಸಕ್ತಿಯನ್ನು ಮಾತ್ರ ರಕ್ಷಿಸುತ್ತವೆ. ಹಾಗಾಗಿ ಕೃಷಿಭೂಮಿ ಗುತ್ತಿಗೆಯನ್ನು ಪಾರದರ್ಶಕಗೊಳಿಸಬೇಕು.
* ತಲೆಮಾರುಗಳು ಕಳೆದಂತೆ ಮಾಲಕತ್ವದ ಭೂಮಿಯ ಸರಾಸರಿ ಗಾತ್ರ ತಗ್ಗುತ್ತಿದ್ದು, ಸಣ್ಣಭೂಮಿಯಲ್ಲಿ ಸ್ವಂತ ಕೃಷಿ ಮಾಡಿ ಬರುವ ಲಾಭಕ್ಕಿಂತ ದೊಡ್ಡ ಗಾತ್ರದ (ಕಾರ್ಪೋರೇಟ್ ) ಕೃಷಿ ಭೂಮಿಯಲ್ಲಿ ಉದ್ಯೋಗಿಯಾಗಿ ದುಡಿದರೆ ಲಾಭ ಜಾಸ್ತಿ.
* ರೈತರು ಭೂಮಿ ಬ್ಯಾಂಕುಗಳಲ್ಲಿ ಭೂಮಿ ಠೇವಣಿ ಮಾಡಿದರೆ, ದೊಡ್ಡ ಕೃಷಿಕರು (ಕಾರ್ಪೋರೇಟ್ ಗಳು) ಅಲ್ಲಿಂದ ಅದನ್ನು ಗುತ್ತಿಗೆ ಪಡೆದು, ಕೃಷಿ ಮಾಡಬಹುದು. ರೈತರಿಗೂ ತಮ್ಮ ಭೂಮಿ ಸುರಕ್ಷಿತವಾಗಿದೆ ಎಂಬ ಭಾವನೆ ಇರುತ್ತದೆ.
* ಭೂಮಿಯನ್ನು ಗುತ್ತಿಗೆ ಕೊಡುವುದಕ್ಕಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ, ಭೂಮಾಲಕತ್ವ ದಾಖಲೆಗಳನ್ನು ಖಚಿತಪಡಿಸಲು 2008ರಲ್ಲೇ ಹೊಸ ಕಾನೂನು ಬಂದಿದ್ದು, ಗುಜರಾತ್, ಕರ್ನಾಟಕ, ಹರ್ಯಾಣ, ತ್ರಿಪುರ ರಾಜ್ಯಗಳು ಈಗಾಗಲೇ ಭೂದಾಖಲೆಗಳ ಡಿಜಿಟಲೀಕರಣ ಆರಂಭಿಸಿವೆ.
ಕಾರ್ಪೊರೇಟೀಕರಣ
ಕೇಂದ್ರ ಸರಕಾರದ ಈ ಎಲ್ಲ ಯೋಚನಾಲಹರಿಗಳು ವರ್ಲ್ಡ್ ಬ್ಯಾಂಕ್, IMF ಹೇಳುತ್ತಾ ಬಂದಿರುವ ಹಾದಿಯಲ್ಲೇ ಇದ್ದು, ಯಾವುದೇ ಸರಕಾರ ಇದ್ದಿದ್ದರೂ ಇದೇ ಹಾದಿ ತುಳಿಯುವುದು ಈವತ್ತಿಗೆ ಅನಿವಾರ್ಯವಾಗುತ್ತಿತ್ತು. ಒಟ್ಟಿನಲ್ಲಿ ರೈತ ತನ್ನ ಭೂಮಿಯಲ್ಲಿ ತನಗೆ ಬೇಕಾದದ್ದನ್ನು ಬೆಳೆದು ತಾನು ಉಣ್ಣುವ ದಿನಗಳು ಮುಗಿದಿವೆ.
ಇನ್ನೇನಿದ್ದರೂ ಉಳ್ಳವರ ಗದ್ದೆಗಳಲ್ಲಿ ದುಡಿದು, ಅವರು ಕೊಟ್ಟ ಕಾಸಿನಲ್ಲಿ, ಅವರದೇ ಅಂಗಡಿಗೆ ಹೋಗಿ ದುಡ್ಡುಕೊಟ್ಟು, ಅವರ ಆಯ್ಕೆಯ ಆಹಾರ ಖರೀದಿಸಿ ತಿನ್ನುವ ದಿನಗಳು… ನಮ್ಮಮುಂದಿವೆ.
ಹೆಚ್ಚಿನ ಓದಿಗಾಗಿ, ನೀತಿ ಆಯೋಗದ ಯೋಚನಾಲಹರಿಗಳ ಪ್ರಬಂಧದ ಪೂರ್ಣಪಾಠ: http://niti.gov.in/ writereaddata/files/document_ publication/RAP3.pdf
yes sir ur right, well said