ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಈ ಹೊತ್ತಿಗೆ’ ಸಂಭ್ರಮ

೨೪ ಮಾರ್ಚ್ ೨೦೨೪ ಭಾನುವಾರ, ಕಪ್ಪಣ್ಣ ಅಂಗಳದಲ್ಲಿ ಇಂದು ‘ಈ ಹೊತ್ತಿಗೆ’ ಸಂಸ್ಥೆಯ ವಾರ್ಷಿಕ ಹೊನಲು ಕಾರ್ಯಕ್ರಮ ಮತ್ತು ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ ಮತ್ತು ಕಾವ್ಯಪ್ರಶಸ್ತಿ ಪ್ರದಾನ ಸಮಾರಂಭವು ಯಶಸ್ವಿಯಾಗಿ ಜರುಗಿತು.

ಸದಾಶಿವ ಸೊರಟೂರ ಅವರ ‘ಧ್ಯಾನಕ್ಕೆಕೂತ ನದಿ’ ಕಥಾ ಸಂಕಲನಕ್ಕೆ ೨೦೨೪ ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಮತ್ತು ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಕವನ ಸಂಕಲನಕ್ಕೆ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪತ್ರಕರ್ತರಾದ ರಶ್ಮಿ ಎಸ್. ಅವರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ತಿಳಿಸುತ್ತ, ಓದುಗರ ಎದೆಯಲ್ಲಿಯೂ ಇರಬೇಕಾದ ಆರ್ದ್ರತೆಯ ಕುರಿತು  ಮಾತನಾಡಿದರು. ಹಾಗೂ ಈ ಲೇಖಕರ ವಿಶಿಷ್ಟವಾದ ಭಾಷಾ ಬಳಕೆ, ರೂಪಕ, ಪ್ರತಿಮೆಗಳನ್ನು ತಮ್ಮ ಬರಹಗಳಲ್ಲಿ ಕಾಣಿಸುವ ಗುಣ ತಮಗೆ ತುಂಬಾ ಇಷ್ಟವಾಗಿದೆ ಎಂದು ಬಣ್ಣಿಸಿದರು.

ಜಯಲಕ್ಷ್ಮಿ ಪಾಟೀಲ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಈ ಹೊತ್ತಿಗೆ ಸಂಸ್ಥೆ ಬೆಳೆದು ಬಂದ ಬಗೆ, ಕಾರ್ಯ ಚಟುವಟಿಕೆ ಮತ್ತು ಈ ವರ್ಷದ ಹೊನಲು ಕಾರ್ಯಕ್ರಮದ ಕುರಿತು ಪರಿಚಯ ಮಾಡಿಕೊಟ್ಟರು.

ಪತ್ರಕರ್ತರಾದ ವಿದ್ಯಾರಶ್ಮಿ ಅವರು ಸಾಮಾಜಿಕ ತ್ವರಿತ ಪಲ್ಲಟಗಳು ಮತ್ತು ಕನ್ನಡ ಸಾಹಿತ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬದುಕಿನಲ್ಲಿ ಅನಿರೀಕ್ಷಿತವಾಗಿ ಬಂದೆರಗುವ ಸಣ್ಣ ಸಣ್ಣ ಸಾಮಾನ್ಯ ಸಂಗತಿಗಳಲ್ಲಿ ಸಾಹಿತ್ಯದ ಬೀಜಗಳಿರುತ್ತವೆ. ತುರ್ತು ಪರಿಸ್ಥಿತಿಯಿಂದ ಹಿಡಿದು ಇಲ್ಲಿಯವರೆಗೆ ಸಮಾಜದಲ್ಲಿ ಏನೇ ಪಲ್ಲಟಗಳಲ್ಲಾದರೂ ಸಾಹಿತ್ಯ ಅದಕ್ಕೆ ಸ್ಪಂದಿಸುತ್ತ ಬಂದಿದೆ. ಈ ಪಲ್ಲಟಗಳಿಂದಾಗಿ ಉಂಟಾಗುವ ಸಾಂಸ್ಕೃತಿಕ ತಲ್ಲಣಗಳು, ವೈಯಕ್ತಿಕ ಬಿಕ್ಕಟ್ಟುಗಳು ಮುಂತಾದವುಗಳನ್ನು ಸಾಹಿತ್ಯ ಕಾಲಕಾಲಕ್ಕೆ ತನ್ನ ಓಡಲಲ್ಲಿ ಮೂಡಿಸುತ್ತ ಬಂದಿದೆ‌ ಎಂದು ವಿದ್ಯಾರಶ್ಮಿಯವರು ಹೇಳಿದರು.

ಇಂದಿರಾ ಶರಣ್ ಮತ್ತು ಗೀತಾ ಕುಂದಾಪುರ ಅವರು ಈ ಹೊತ್ತಿಗೆ ಕಥಾ ಪ್ರಶಸ್ತಿ ವಿಜೇತ ಕೃತಿ ‘ಧ್ಯಾನಕ್ಕೆ ಕೂತ ನದಿ’ಯಿಂದ ಶೀರ್ಷಿಕೆ ಕತೆಯನ್ನು ಭಾವಪೂರ್ಣವಾಗಿ ವಾಚಿಸಿದರು. ಸಿಂಧು ರಾವ್ ಮತ್ತು ಶಂಕರ್ ಸಿಹಿಮೊಗ್ಗೆ ಅವರು ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ವಿಜೇತ ಕೃತಿ ‘ಅನಾಮಧೇಯ ಗೀರುಗಳು’ ಕವನ ಸಂಕಲನದಿಂದ ಆಯ್ದ ಕವಿತೆಗಳನ್ನು ಹೃದಯಸ್ಪರ್ಶಿಯಾಗಿ ಓದಿದರು.

ನಂತರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಏರ್ಪಡಿಸಲಾಯಿತು. ಸಂವಾದದಲ್ಲಿ ಆನಂದ ಕುಂಚನೂರ, ಮಧು ವೈ ಎನ್., ದೇವು ಪತ್ತಾರ್, ಇಂದಿರಾ ಶರಣ್, ಸಿಂಧು ರಾವ್, ರೇಣುಕಾ ಕೋಡಗುಂಟಿ ಮುಂತಾದವರು ಭಾಗವಹಿಸಿದರು. ಸಂವಾದದ ನಂತರ ಡಾ. ಎಂ. ಎಸ್. ಆಶಾದೇವಿಯವರಿಗೆ ಈ ಹೊತ್ತಿಗೆಯಿಂದ ಸನ್ಮಾನ ಮಾಡಲಾಯಿತು.

ಸನ್ಮಾನ ನೆರವೇರಿಸಿದ ದೇವು ಪತ್ತಾರ್ ಅವರು ಮಾತನಾಡಿ, ಆಶಾದೇವಿ ಅವರ ಅಧ್ಯಯನ ಶಿಸ್ತು ಮತ್ತು ಅವರ ಕರಾರುವಕ್ಕಾದ ವಿಮರ್ಶೆಯ ಪರಿಯನ್ನು ಕೊಂಡಾಡಿದರು. ಸನ್ಮಾನ ಸ್ವೀಕರಿಸಿದ ಆಶಾದೇವಿಯವರು ಹೊಸ ಬರಹಗಾರರಿಗೆ ಇರಬೇಕಾದ ಸಾಮಾಜಿಕ ಹೊಣೆಗಾರಿಕೆ ಮತ್ತು ಪರಂಪರೆಯ ಜೊತೆಗಿನ ಕೊಂಡಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು..

ವಂದನಾರ್ಪಣೆಯನ್ನು ಸರ್ವಮಂಗಳಾ ಮೋಹನ್ ಅವರು ನಡೆಸಿಕೊಟ್ಟರು. ಸಂಗೀತಾ ಚಚಡಿ ಅವರು ಕಾರ್ಯಕ್ರಮ ನಿರೂಪಿಸಿದರು.‌ ಕಾರ್ಯಕ್ರಮದಲ್ಲಿ ಈ ಹೊತ್ತಿಗೆಯ ಸದಸ್ಯರಾದ ಜಯಶ್ರೀ ದೇಶಪಾಂಡೆ, ಸುಮಾ ಅನೀಲ್, ಗೀತಾ‌ ಕುಂದಾಪುರ, ಕುಸುಮಾ ಹೆಗಡೆ, ವೀರೇಶ್ ಮತ್ತು ಹಿರಿಯ ಲೇಖಕರಾದ ಶಶಿಕಲಾ ವಸ್ತ್ರದ್ ಅವರು ಉಪಸ್ಥಿತರಿದ್ದರು.

‍ಲೇಖಕರು avadhi

26 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading