‘ಈ ಹೊತ್ತಿಗೆ’ಯ ಪ್ರತಿಷ್ಠಿತ ಕಥಾ ಸ್ಪರ್ಧೆಯ ಫಲಿತಾಂಶ ಘೋಷಣೆಯಾಗಿದೆ.
ಬಹುಮಾನ ಪಡೆದ ಎಲ್ಲಾ ಕಥೆಗಳನ್ನೂ ಅವಧಿಯಲ್ಲಿ ಪ್ರತೀ ಶುಕ್ರವಾರ ಪ್ರಕಟಿಸಲಾಗುವುದು.
ಇಂದು ತೀರ್ಪುಗಾರರ ಮಾತುಗಳು ಇಲ್ಲಿವೆ.
ನಾಳೆ ಪ್ರಥಮ ಬಹುಮಾನ ಪಡೆದ ಗೋವಿಂದರಾಜು ಎಂ. ಕಲ್ಲೂರು ಅವರ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆಯನ್ನು ಪ್ರಕಟಿಸಲಾಗುವುದು.
ಉಷಾ ಪಿ. ರೈ
ಎಸ್.ಎಮ್. ಪಾಟೀಲ್
ಕನ್ನಡದ ಕಥೆಗಾರರನನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿ ಇಂದು ನಾಡಿನ ಗಣ್ಯರ, ಲೇಖಕರ ಮತ್ತು ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿರುವ ಜಯಲಕ್ಷ್ಮಿ ಪಾಟೀಲ್ ಅವರ ‘ಈ ಹೊತ್ತಿಗೆ’ ಸಂಸ್ಥೆ ಪ್ರತೀ ವರ್ಷದಂತೆ ಈ ವರ್ಷವೂ ಏರ್ಪಡಿಸಿದ್ದ ಕಥಾ ಸ್ಪರ್ಧೆಗೆ ಸ್ಪಂದಿಸಿ, ಯುವ ಬರಹಗಾರರು ಕಳಿಸಿದ್ದ ೨೦ ಕಥೆಗಳಲ್ಲಿ ಉತ್ತಮ ಕಥೆಗಳನ್ನು ಆಯ್ಕೆ ಮಾಡುವ ಹೊಣೆ ನಮ್ಮದಾಗಿತ್ತು.
ಡಿಜಿಟಲ್ ತಂತ್ರಜ್ಞಾನ ಮತ್ತು ಇಂಗ್ಲಿಷ್ ಭಾಷೆಯ ಪ್ರಭಾವದಲ್ಲಿ ಹೊಸ ತಲೆಮಾರಿನ ಯುವಪೀಳಿಗೆ ಕನ್ನಡ ಓದು ಬರಹದಿಂದ ದೂರವಾಗುತ್ತಿದೆ ಎನ್ನುವ ಆತಂಕದ ಈ ಕಾಲದಲ್ಲೂ ಉತ್ಸಾಹದಿಂದ ಕನ್ನಡದಲ್ಲಿ ಕಥೆಗಳನ್ನು ಬರೆದು ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಯುವ ಬರಹಗಾರರು ಖಂಡಿತ ಅಭಿನಂದನಾರ್ಹರು.
ಓದುಗರ ಮನಸ್ಸಿನಲ್ಲಿ ದೃಶ್ಯ ಮತ್ತು ಭಾವನೆಗಳನ್ನು ತುಂಬುತ್ತಾ ಓದಿಸಿಕೊಂಡು ಹೋಗುವ ಕಥೆಯೊಂದು ನೀಡುವ ಪರಿಣಾಮಕಾರಿ ಅನುಭವ ಮತ್ತು ಕಥಾವಸ್ತುಗಳಲ್ಲಿನ ಹೊಸತನ, ನಿರೂಪಣೆ, ಬಳಸಿದ ಪದಗಳು, ಎಲ್ಲವನ್ನೂ ಆಧರಿಸಿ ಆಯ್ಕೆ ಮಾಡಿದ ಕೆಲವು ಕಥೆಗಳ ವಿವರ ಇಲ್ಲಿದೆ.
ಕಥೆಯ ಹೆಸರು, ಕಥಾ ವಸ್ತು, ಗಾಢವಾಗಿ ಒಳಕ್ಕೆ ಸೆಳೆದುಕೊಂಡು ಹೋಗುವ ಭಿನ್ನವಾದ ನಿರೂಪಣಾ ಶೈಲಿ, ಬಳಸಿದ ವಿಶಿಷ್ಟ ಪದಗಳು ಮತ್ತು ಕಥೆ ಹೇಳುವಲ್ಲಿ ಅಳವಡಿಸಿದ ವಿಭಿನ್ನ ತಂತ್ರಗಾರಿಕೆಯಿAದಾಗಿ ‘ಒಂಟಿ ನಕ್ಷತ್ರ ಗುಳೆ ಹೋದ ದಿವಸ’ ಕಥೆ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಪಾತ್ರವೊಂದರ ಸುತ್ತ ಘಟನೆಗಳನ್ನು ಹೆಣೆದು, ಘಟನೆಗಳ ಮೇಲೆ ಪಾತ್ರದ ಯೋಚನೆಗಳನ್ನು ಹರಡಿ, ಮುಗ್ಧ ಕಥೆಯಂತೆ ಭಾಸವಾಗುವ ಹಾಗೆ ಬರೆದ ‘ಬಿಸಿಲು’ ದ್ವಿತಿಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಇನ್ನು ಫ್ಲಾಶ್ ಬ್ಯಾಕ್ ತಂತ್ರಗಾರಿಕೆಯನ್ನು ಕಥೆಯ ಭಾವನಾತ್ಮಗೊಳಿಸುವಲ್ಲಿ ಬಳಸಿದ ರೀತಿ ಮತ್ತು ಕಥೆಯ ಅಂತ್ಯಕ್ಕೆ ಪಾತ್ರವನ್ನು ಶ್ರೇಷ್ಠಗೊಳಿಸಿದ ರೀತಿಯಿಂದಾಗಿ ‘ಎಲ್ಲೋ ಯಲ್ಲೋ’ ಮೂರನೆಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಸಮಾಧಾನಕರ ಬಹುಮಾನಕ್ಕೆ ಕಥಾವಸ್ತು ಮತ್ತು ಹೇಳುವ ರೀತಿಯನ್ನು ಆಧರಿಸಿ ‘ಮೈಲಿಗೆ ಗುಡಿಸಲು’ ಮತ್ತು ‘ಋಣ’ ಕಥೆಗಳನ್ನು ಆಯ್ಕೆ ಮಾಡಿದ್ದೇವೆ.
ಮಿಕ್ಕ ಕಥೆಗಳಲ್ಲಿ ಮೆಚ್ಚುಗೆ ಪಡೆದಿದ್ದು ಬರಹಗಾರರ ಉತ್ಸಾಹವಾದರೂ ಕಥಾ ವಸ್ತುವಿನ ಆಯ್ಕೆಯಲ್ಲಿ ಹೊಸತನ, ಕಥಾ ನಿರೂಪಣೆಯ ತಂತ್ರಗಾರಿಕೆ ಮತ್ತು ವೈವಿಧ್ಯಮಯ ಪಾತ್ರಗಳ ಸೃಷ್ಟಿಯಲ್ಲಿ ಮತ್ತಷ್ಟು ಅನುಭವ ಹೆಚ್ಚಿಸಿಕೊಂಡರೆ ಎಲ್ಲ ಕಥೆಗಾರರೂ ಉತ್ತಮ ಕಥೆಗಾರರಾಗಿ ಹೊರಹೊಮ್ಮಬಹುದು ಎಂದು ನಮಗನ್ನಿಸಿದೆ.
ಎಲ್ಲ ಲೇಖಕರಿಗೂ ಉಜ್ವಲ ಭವಿಷ್ಯದ ಶುಭ ಕೋರಿ, ನಮಗೆ ತೀರ್ಪುಗಾರರಾಗಿ ಆಯ್ಕೆ ಮಾಡುವುದರ ಮೂಲಕ ಗೌರವ ತೋರಿದ್ದಕ್ಕೆ ‘ಈ ಹೊತ್ತಿಗೆ’ಯ ಎಲ್ಲರಿಗೂ ಕೃತಜ್ಞತೆಗಳು.
ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಅವರಲ್ಲಿ ಅಡಗಿರುವ ಸೂಪ್ತವಾದ ವಿಚಾರಗಳಿಗೆ ಒಳ್ಳೆಯ ಅವಕಾಶ.