ಯು ಆರ್ ಅನಂತಮೂರ್ತಿಯವರಿಗೆ 8೦ ರ ವಸಂತ. ಈ ಸಂಭ್ರಮವನ್ನು ‘ಅವಧಿ’ ಹೀಗೆ ವಿಶೇಷಾಂಕದ ಮೂಲಕ ಆಚರಿಸಿದೆ. ಮೊನ್ನೆ ಮೊನ್ನೆ ತಾನೇ ದೇವನೂರು ಮಹಾದೇವರು 28 ವರ್ಷಗಳ ನಂತರ ಹೊರತಂದ ವಿಚಾರ ಲೇಖನಗಳ ಸಂಕಲನ ‘ಎದೆಗೆ ಬಿದ್ದ ಅಕ್ಷರ’ ಹೊರ ಬಂದಾಗಲೂ ‘ಅವಧಿ’ ದೇವನೂರು ವಿಶೇಷಾಂಕ ರೂಪಿಸುವ ಮೂಲಕ ಸಂಭ್ರಮಿಸಿತ್ತು. ದೇವನೂರು ಅವರನ್ನು ‘ಅಶಾಂತ ಸಂತ’ ಎಂದು ಬಣ್ಣಿಸಿದ್ದಾರೆ. ‘ಧರೆಗೆ ದೊಡ್ಡವರು’ ಎನ್ನುತ್ತಾರೆ. ಆದರೆ ನಮಗೆ ದೇವನೂರು, ಅನಂತಮೂರ್ತಿ ಅವರು ಕಾಲಕ್ಕೆ ಕನ್ನಡಿಯಾಗಿ ಕಾಣುತ್ತಾರೆ.
ಅನಂತಮೂರ್ತಿ ಅವರ ಬದುಕು ಹಲವು ಚಳವಳಿಗಳನ್ನ್ನು, ಸಾಮಾಜಿಕ ಬದಲಾವಣೆಯನ್ನೂ, ರಾಜಕೀಯ ತಿರುವುಗಳನ್ನೂ ಕಂಡಿದೆ. ಹಾಗೆ ಕಂಡವರು ಎಷ್ಟೋ ಮಂದಿ ಇದ್ದಾರೆ. ಆದರೆ ಅನಂತಮೂರ್ತಿ ಹಾಗೆ ಸಂದು ಹೋದ ಕಾಲಕ್ಕೆ ತಮ್ಮ ಬರಹಗಳ ಕನ್ನಡಿ ಹಿಡಿದಿದ್ದಾರೆ, ಅದು ಮುಖ್ಯ, ಅನಂತಮೂರ್ತಿಯವರು ತಮ್ಮ ವಿವೇಕದ ಮೂಲಕ ಆ ಕಾಲವನ್ನು ಸಾಣೆ ಹಿಡಿದಿದ್ದಾರೆ. ಹಾಗಾಗಿ ನಮಗೂ ಕಾಲನ ಆ ಓಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಅನಂತಮೂರ್ತಿ ಅವರು ಯಾವುದೇ ಒಂದು ಭಿಕ್ಕಟ್ಟಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕನ್ನಡ ಲೋಕ ಕುತೂಹಲದಿಂದ ಕಾಯುತ್ತದೆ. ಅನಂತಮೂರ್ತಿಯವರು ಸದ್ದು ಮಾಡುತ್ತಲೇ ಒಂದು ಸಮಾಜ ತಿದ್ದುವ ಕೆಲಸ ನಡೆಸಿದ್ದಾರೆ. ಜನ ಸಮೂಹದ ಹೆಗಲ ಮೇಲೆ ಕೈ ಹಾಕಿ ನಡೆದಿದ್ದಾರೆ.
ಅನಂತಮೂರ್ತಿಯವರು ನಮಗೆಲ್ಲ ಒಂದು ವಿಶ್ವಾಸ. ಸಮಾಜದ ಭಿಕ್ಕಟ್ಟುಗಳನ್ನು ಎದುರಿಸುವ ರೀತಿ ಒಂದು ಪಾಠ. ಅನಂತಮೂರ್ತಿಯವರೊಡನೆ ನಾನು ಮತ್ತೆ ಮತ್ತೆ ಒಡನಾಡಿದ್ದೇನೆ. ಹಾಗೆ ನಾನೊಬ್ಬನೇ ಒಡನಾಡಿದ್ದೇನೆ ಎಂದುಕೊಂಡರೆ ತಪ್ಪು ತಪ್ಪು. ಯಾಕೆಂದರೆ ಅನಂತಮೂರ್ತಿಯವರು ಎಲ್ಲರೊಡನೆಯೂ ಅದೇ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಹಾಗಾಗಿಯೇ ಅವರನ್ನು ಪ್ರೀತಿಸುವ ಹೃದಯಗಳು ಹಲವು. ಅಂತಹ ಪ್ರೀತಿಯ ಅನಂತಮೂರ್ತಿಯವರು ಈ ಇನ್ನಷ್ಟು ದಶಕಗಳ ಕಾಲ ನಮ್ಮೊಡನೆ ನಡೆಯುತ್ತಿರಲಿ ಎಂಬ ಆಶಯದೊಂದಿಗೆ ಈ ವಿಶೇಷಾಂಕವನ್ನು ನಿಮ್ಮ ಮುಂದಿಡುತ್ತಿದ್ದೇವೆ ಈ ಬರಹಗಳೆಲ್ಲವೂ ಅನಂತಮೂರ್ತಿಯವರದ್ದು
‘ಅಭಿನವ’ದ ನ ರವಿಕುಮಾರ್ ಹಾಗೂ ಪಿ ಚಂದ್ರಿಕಾ ಜೋಡಿಯ ಒತ್ತಾಸೆ ಈ ವಿಶೇಷಾಂಕದ ಹಿಂದಿದೆ. ಎನ್ ಸಂಧ್ಯಾರಾಣಿ ಮುತುವರ್ಜಿಯಿಂದ ಈ ವಿಶೇಷಾಂಕವನ್ನು ಸಂಯೋಜಿಸಿದ್ದಾರೆ. ಈ ವಿಶೇಷಾಂಕಕ್ಕೆ ಹೊಳಪು ಹೆಚ್ಚಿಸಲು ಕಾರಣರಾದವರು ಪ್ರೊ ಎಂ ಶ್ರೀಧರ ಮೂರ್ತಿ ಹಾಗೂ ಗುರುಪ್ರಸಾದ್ ಅವರು.
ಅನಂತಮೂರ್ತಿಯವರಿಗೆ 80 ತುಂಬುತ್ತಿರುವ ಈ ಹೊತ್ತಿನಲ್ಲೇ ಅವರ ವಿಚಾರ ಲೇಖನಗಳ ಸಂಕಲನ ‘ನಿಜದ ಬೆಳಕಿನೆಡೆಗೆ ಒಂದು ಧ್ಯಾನ’ ಹಾಗೂ ಅವರ ಆತ್ಮಕಥನ ‘ಸುರಗಿ’ಯೂ ರೂಪುಗೊಳ್ಳುತ್ತಿದೆ
ಕನ್ನಡ ಲೋಕದ ಈ ಸುರಗಿ ನಮ್ಮೊಡನಾಡುತ್ತಿರಲಿ
-ಜಿ ಎನ್ ಮೋಹನ್
ಪ್ರಧಾನ ಸಂಪಾದಕ
ಅವಧಿ
ತುಂಬಾ ತುಂಬಾ ಒಳ್ಳೆಯ ಪ್ರಯತ್ನ..
ella lekhanagaloo tumba chennagive! Dhanyavadagalu!
ದಿಕ್ಕು ತಪ್ಪಿದಾಗಲೆಲ್ಲ ನೆನಪಾಗುವ ಸಾಹಿತ್ಯಚೇತನಗಳು
ಇವರು. ಓದಲು ಕಾಯುತ್ತೇವೆ.
ಅನ೦ತ್ ಮೂರ್ತಿಯವರ ಅಕ್ಷರ ಪ್ರಕಾಶನ ಪ್ರಕಟಿಸಿದ ಐದು ದಶಕದ ಕಥೆಗಳನ್ನು ಓದುತ್ತಿದ್ದೇನೆ. ಅವರ೦ಥ ಲೇಖಕರು ಬದುಕುತ್ತಿರುವ ಈ ದಿನಮಾನದಲ್ಲಿ ನಾವಿದ್ದೇವೆ ಅನ್ನುವುದೇ ದೊಡ್ಡದು ಅನ್ನಿಸುವಷ್ಟರ ಮಟ್ಟಿಗೆ ಅವರಿ೦ದ ಪ್ರಭಾವಿತನಾಗಿದ್ದೇನೆ. ಅವರ ಕಥೆಗಳನ್ನು ಓದಿದ ಮೇಲೆ ನನಗಾಗುತ್ತಿರುವ ಒ೦ದು ಕಷ್ಟವೇನೆ೦ದರೆ ಇತರರ ಕಥೆಗಳಲ್ಲಿನ ಭಾಷೆ ಚಪ್ಪೆ ಅನ್ನಿಸುತ್ತಿರುವುದು. ಅವರನ್ನು ಒಮ್ಮೆ ಮಾತಾಡಿಸಿ ಒ೦ದು ಫೊಟೊ ತೆಗೆಸಿಕೊಳ್ಳಬೇಕು ಗಡಿಬಿಡಿಯೇನಿಲ್ಲ ಅವರಿನ್ನೂ ತು೦ಬಾ ವರ್ಷ ನಮ್ಮನ್ನು Inspire ಮಾಡ್ತಾನೇ ಇರ್ತಾರೆ.