ವಿನಾಯಕರಾಮ ಕಲಗಾರು
ಈ ವ್ಯಕ್ತಿ ನನ್ನನ್ನು ಆಗಾಗ ತುಂಬಾ ಕಾಡುತ್ತಾರೆ. ಕನ್ನಡ ಸಿನಿಮಾ ಪತ್ರಿಕೋದ್ಯಮದ ಅಘೋಷಿತ ಪಿಯಾಮಹ ಇವರು. ಹೆಸರು ಪಿ.ಜಿ. ಶ್ರೀನಿವಾಸಮೂರ್ತಿ. ಚಿತ್ರ ಪತ್ರಿಕೋದ್ಯಮದ ಬರವಣಿಗೆ ಹೀಗೆ ಇದ್ದರೆ ಚೆನ್ನ ಎಂದು ಹೇಳಿಕೊಟ್ಟ ಹೃದಯವಂತ ಇವರು. ಆಗತಾನೇ ಸಿನಿಮಾ ಪತ್ರಿಕೋದ್ಯಮದಲ್ಲಿ ಅಂಬೆಗಾಲಿಡುತ್ತಿದ್ದಾಗ (ಈಗಲೂ) ಸುದ್ದಿ ಬಗೆದು ತೆಗೆಯುವ ಬಗೆಯನ್ನು, ಲೇಖನದ ಡೆಪ್ತ್ ಹೇಗಿರಬೇಕು ಎಂಬ ರೀತಿಯನ್ನು ಕಲಿಸಿಕೊಟ್ಟ ಪರಮಗುರು ಇವರು. ರಾಜ್ ಕುಮಾರ್ ಫ್ಯಾಮಿಲಿ ಇವರನ್ನು ತುಂಬಾ ಹಚ್ಚಿಕೊಂಡಿತ್ತು. ಮೊನ್ನೆ ಮೊನ್ನೆ ತನಕ ರಾಘಣ್ಣ-ಶಿವಣ್ಣ-ಅಪ್ಪು ಇವರು ಎದುರಾದಾಗ ಕಾಲು ಮುಟ್ಟಿ ಆಶಿರ್ವಾದ ಪಡೆದುಕೊಳ್ಳುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ…
ಅದೇ ಪ್ರೀತಿಯ ಪಿಜಿಎಸ್ ಎರಡು ವರುಷದ ಹಿಂದೆ ಹೇಳದೇ ಕೇಳದೇ ನಮ್ಮಂಥ ಅದೆಷ್ಟೋ ಹುಡುಗರನ್ನು ಒಂಟಿ ಮಾಡಿ ಹೋಗಿಬಿಟ್ಟರು. ಭೌತಿಕವಾಗಿ ಕಣ್ಮರೆಯಾದರು. ಆದರೂ ಎದೆಯ ಬಲಭಾಗದಲ್ಲಿ ಅಳಿಸಲಾರದ ಹಚ್ಚೆಯಾಗಿ ಅಚ್ಚಳಿಯದೇ ಉಳಿದುಬಿಟ್ಟರು!
ಅವರ ಸ್ಮರಣಾರ್ಥ ಅವರಿಂದ ಕಲಿತ ಅಕ್ಷರದಿಂದ ಬರುತ್ತಿರುವ ದುಡಿಮೆಯಲ್ಲಿ ಒಂದು ಸಣ್ಣ ಸ್ಮರಣೆ ಮಾಡಿಕೊಳ್ಳುವ ನೆನಪದಲ್ಲಿ ಒಂದು ಅವಾರ್ಡ್ ಅನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಕಡೆಯಿಂದ ಕೊಡಲು ಮುಂದಾಗಿದ್ದೇನೆ. ಅತ್ಯುತ್ತಮ ಗೀತ ರಚನೆ ಕಾರರನ್ನು ಆಯ್ಕೆ ಮಾಡಿ, ಅವರಿಗೆ ಪಿಜಿಎಸ್ ಸ್ಮರಣಾರ್ಥ ಒಂದು ಸನ್ಮಾನ-ಸರ್ಟಿಫಿಕೇಟ್ ಕೊಡುತ್ತಿದ್ದೇನೆ. ಈ ಸಾರಿ “ಮುರುಳಿ ಮೀಟ್ಸ್ ಮೀರಾ” ಚಿತ್ರದ ನೀನಾದೆನಾ… ಸಾಂಗ್ ಬರೆದಿರುವ ಗೌಸ್ ಫೀರ್ ಅವರ ಮುಡಿಗೆ ಈ ಪ್ರಶಸ್ತಿ ಏರಿದೆ.
ಇದು ಗುರುವಿಗೆ ನನ್ನ ಕಿರುಗಾಣಿಕೆ. ಅದನ್ನು ಹೊರತಾಗಿ ಬೇರೆ ಯಾವುದೇ ರೀತಿಯ ಪ್ರತಿಷ್ಠೆಯ ಪಾಲಿಲ್ಲ. ಅವರು ಈ ಮೂಲಕವಾದರೂ ಭೌತಿಕವಾಗಿ ಮತ್ತೆ ನಮ್ಮ ಜೊತೆ ಇರಲಿ ಎನ್ನುವುದು ಮನಸಿನಾಳದ ನೋವಿನ ನೆರಳು …
ಪ್ರೀತಿಯ ಪಿಜಿಎಸ್ ಗೆ ಇದು ನನ್ನ ಒಲವಿನ ಅರ್ಪಣೆ…
-ನಿಮ್ಮ ವಿನಾಯಕರಾಮ
]]>





0 Comments