ವೈ ಬಿ ಹಾಲಬಾವಿ
ಸಂತೆಯೊಳಗೆ ನಿಂತೂ
ಮಾತು ಕಳೆದುಕೊಂಡಂತೆ…
ಆಗ…
ಚುಮು ಚುಮು
ಕತ್ತಲೆ ಕರಗುತ್ತಿತ್ತು…
ಮುಲ್ಲಾನ ನಮಾಜಿಗೆ
ನಸುಕಿನ ಮುಸುಕ ತೆರೆದು
ಮೈಮುರಿದೆಳುತ್ತಿತ್ತು ಊರು…
ಬೆಳಕ ಸಾರುತ್ತಿತ್ತು ಕೋಳಿ
ಹಕ್ಕಿ-ಪಕ್ಷಿಗಳ ಕೊರಳಿಗೆ
ಕಿವಿಯಾಗುತ್ತಿತ್ತು ಬದುಕು…
ಚರ್ಚು, ಗುಡಿ ಗುಂಡಾರಗಳಲ್ಲಿ
ಗಂಟೆ, ಜಾಗಟೆ, ನಗಾರಿಗಳ ನಿನಾದಕ್ಕೆ
ತೆರೆದುಕೊಳ್ಳುತ್ತಿತ್ತು ದಿನಚರಿ
ಶುದ್ಧ, ಗಾಳಿ, ಬೆಳಕಿಗೆ
ಮೈಯೊಡ್ಡಿದ ಬದುಕು ಸ್ವಸ್ಥವಾಗಿತ್ತು…
ಈಗ…
ಶಬ್ಧ ಸೂತಕದೊಳಗೆ
ಸಿಲುಕಿ ನರಳುತ್ತಿವೆ ಊರು, ಕೇರಿ. ಶಹರು
ಹಗಲು ರಾತ್ರಿ ವ್ಯತ್ಯಾಸವಿಲ್ಲದೆ ಕೂಗುತ್ತಿವೆ ಕೋಳಿ
ಬದಲಾಗಿದೆ ಕಾಲ ಅವರವರ ಗಡಿಯಾರಕ್ಕೆ
ಪುರುಸೊತ್ತಿಲ್ಲದ ಜಗತ್ತು ಅವಸರಕ್ಕೆ ಬಿದ್ದಿದೆ..
ಸಂತೆಯೊಳಗೆ ನಿಂತೂ
ಮಾತು ಕಳೆದುಕೊಂಡಂತೆ…
ನಿದ್ರಾಹೀನ ರಾತ್ರಿಗಳಿಗೆ…
ತೆರೆದುಕೊಳ್ಳುತ್ತವೆ ನಗರ ಮಹಾನಗರಗಳು
ಮನ ಸೋತಿವೆ ಜೀವಗಳು ಮಾಯಾನಗರಿಗೆ
ಕನಸ ಮಾರುವ ಕಸುಬಿಗೆ
ಕಸಾಯಿಖಾನೆಯ ಮಾಂಸದಂತೆ
ಬಿಕರಿಯಾಗುತ್ತವೆ ಎಲ್ಲ ಹರಾಜಿಗಿಟ್ಟಂತೆ…
ಮಲೀನ ಗಾಳಿ, ಮಲಿತ ನೀರು, ರಾಹು ಬೆಳಕಿಗೆ
ಮೈಯೊಡ್ಡಿದ ಬದುಕು ಅಸ್ವಸ್ಥಗೊಂಡಿದೆ…
ತ ವೈ.ಬಿ ಹಾಲಬಾವಿ
chennaagide..sir!!vaastavada chitrna chennaagi muudi bandide..