ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇವು ಅಮೇರಿಕ ದ ಅಳಿಲುಗಳು. ನಾನು ಹೇಳಿದ್ದು ಭಾರತದ ಅಳಿಲು’

ಅಜ್ಜಿಯ ಜಾಣ್ಮೆ

ಸರಸ್ವತಿ ಶ್ರೀನಿವಾಸರಾಜು

ಕಥೆ ಹೇಳಲು ಅಜ್ಜ ಅಜ್ಜಿ ಇರಬೇಕು. ಅದು ನಮ್ಮ ಮೊಮ್ಮೊಕ್ಕಳ ಆಸೆ. ಅವರಿಗೆ ಎಷ್ಟು ಕಥೆಗಳನ್ನು ಹೇಳಿದರೂ ಸಾಲದು. ನನ್ನ ದೊಡ್ದ ಮೊಮ್ಮಗ ಸಾಕಷ್ಟು ಕಥೆಗಳನ್ನು ಅವನ ಅಪ್ಪನಿಂದ ತಿಳಿದಿದ್ದ. ಅಮೆರಿಕದಲ್ಲಿರುವ ಮೊಮ್ಮಗಳಿಗೆ ನನ್ನಿಂದ ಕಥೆ ತಿಳಿಯುವ ಆಸೆ. ನಾನು ಪ್ರಾರಂಭ ಮಾಡಿದೆ, ರಾಮಾಯಣದ ಕಥೆ. ಆಗಾಗ ಅವಳಿಗೆ ಕಥೆಯ ಅರ್ಥ ಆಗುತ್ತಿರಲಿಲ್ಲ. ಅರ್ಥ ಮಾಡಿಸಲು ನನಗೆ ಸಾಕು ಸಾಕಾಗುತ್ತಿತ್ತು. ನನ್ನ ಸೊಸೆಯ ಸಹಾಯ ಬೇಕಾಗುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಭಾಷೆ. ಹಾಗೂ, ಹೀಗೂ ಸೀತೆಯ ಅಪಹರಣ, ಆಕೆ ಎಸೆದ ಒಡವೆ ಹನುಮಂತನಿಗೆ ಸಿಕ್ಕಿದ್ದು ತಿಳಿದ ಮಗು ಆಕಾಶದಲ್ಲಿ ರಥ ಹೋಗಿದ್ದು ಹೇಗೆ?  ಸೀತಾಗೆ ಚಿನ್ನದ ಬೆಲೆ ತಿಳಿದಿರಲಿಲ್ಲವೇ ಎಂದು ಕೇಳಿದಳು. ಅವಳು ಹಾಗೆನ್ನಲು ಕಾರಣ ಮೊನ್ನೆಯಷ್ಟೇ ಹಬ್ಬಕ್ಕಾಗಿ ಅವಳಿಗೆ ಹಾಕಿದ್ದ ಸರ ಮತ್ತು ಬಳೆ ತೆಗೆದಿಡುವಾಗ, ಪುಟ್ಟಿ ಇವಕ್ಕೆ ಬಹಳ ಬೆಲೆ ಎಂದಳಂತೆ ನನ್ನ ಸೊಸೆ. ಹಾಗೇ ಅಕ್ಕ ಪಕ್ಕದ ಮಕ್ಕಳು ಬಂದವು. ಮತ್ತೆ ಭಾಷೆಯ ತೊಂದರೆ. ಅಂತೂ ಎಲ್ಲರಿಗೂ ಒಂದು ರೀತಿಯ ಖುಷಿ. ಆಗ ಜೂನ್, ಅಲ್ಲಿ ಶಾಲೆಗೆ ಬೇಸಿಗೆ ರಜ. ಬ್ಯಾಲೆ, ಈಜುವುದು, ಬಣ್ಣದ ಕುಂಚ ಹಾಗೂ ಹಲವಾರು ವಾದ್ಯಗಳನ್ನು ಮರೆತು ಕಥೆ ಕೇಳುವ ಮಕ್ಕಳಿಗೆ ಪಾಪ ತಿಂಡಿ ಕೊಡಲು ಸಾಧ್ಯವಿಲ್ಲ. ವಾನರ ಸೈನ್ಯ ಸೇತುವೆ ಕಟ್ಟಲು ಪ್ರಾರಂಭಿಸಿತು. ಸೀತೆಯನ್ನು ತರುವುದಕ್ಕಾಗಿ ಬಹಳಷ್ಟು ಪ್ರಯತ್ನ ವಾನರರದು. ಅಷ್ಟರಲ್ಲಿ ಕಥೆ ಆಲಿಸುತ್ತಿದ್ದ ಕೆಲವು ಮಕ್ಕಳು , ವಾನರರನನ್ನೇ ನೋಡಿಲ್ಲ ಎಂದವು. ಹೀಗೆ ಕಥೆ ಮುಂದುವರಿಯುತ್ತಿತ್ತು. ರಾಮ, ಲಕ್ಷ್ಮಣ, ಮತ್ತು ವಾನರರು ಜೊತೆಯಲ್ಲಿರುವಾಗ ಅಳಿಲುಗಳು ಮರಳಿನಲ್ಲಿ ಹೊರಳಾಡಿ ತಂದು ಸೇತುವೆಗೆ ವದರುತ್ತಿದ್ದವು. ವಾನರರ ಜೊತೆ ಅಳಿಲುಗಳ ಕೆಲಸ ಮುಂದುವರೆಸಿತ್ತು. ರಾಮ ಆ ಸಣ್ಣ ಅಳಿಲು ಸೇವೆ ಮಾಡುವುದನ್ನು ಲಕ್ಷ್ಮಣನಿಗೆ ತೋರಿಸಿ, ಒಂದು ಅಳಿಲನ್ನು ಹಿಡಿದು ತರಲು ಹೇಳಿದ. ಆ ಅಳಿಲಿನ ಬೆನ್ನಿನ ಮೇಲೆ ಮೂರು ಬೆರಳುಗಳನ್ನು ರಾಮ ಎಳೆದ. ಆ ದಿನದಿಂದ ಎಲ್ಲ ಅಳಿಲುಗಳ ಬೆನ್ನಿನ ಮೇಲೆ ಮೂರು ಗೆರೆಗಳು ಇರುತ್ತವೆ ಎಂದು ಹೇಳಿದೆ. ಮಕ್ಕಳು ಅಲ್ಲಿ ಬರುವ ಅಳಿಲನ್ನು ನೋಡಲು ಕಾಯುತ್ತಾ ಕುಳಿತವು. ಆದರೆ ಅಳಿಲು ಬರಲಿಲ್ಲ. ಕಥೆ ಮುಂದುವರೆಯುತ್ತಿತ್ತು. ಅಂತೂ ಒಂದು ದಿನ ಅಳಿಲು ಹೊರಗೆ ಬಂತು. ಎಲ್ಲ ಮಕ್ಕಳು ಕುಣಿದವು. ನನ್ನ ಮೊಮ್ಮೊಗಳು ಓಡಿ ಬಂದು, ಅಜ್ಜಿ ಅಳಿಲ ಮೇಲೆ ಪಟ್ಟಿಯೇ ಇಲ್ಲ ಏಕೆ? ರಾಮ ಅದರ ಮೇಲೆ ಪಟ್ಟಿ ಇಟ್ಟಿಲ್ಲವೇ? ಎಂದಳು. ಆದರೆ ಸ್ವಲ್ಪ ಮಟ್ಟಿಗೆ ದೊಡ್ಡ ಮಕ್ಕಳಿಗೆ ಪ್ರಶ್ನೆ ಉಳಿಯಿತು. ಬೆನ್ನಿನ ಮೇಲೆ ಮೂರು ಪಟ್ಟಿಗಳು! ಅಲ್ಲಿ ಅಳಿಲು ದಪ್ಪಗಿರುವುದರಿಂದ ಆ ಪಟ್ಟಿಗಳು ಸರಿಯಾಗಿ ಕಾಣುತ್ತಿರಲಿಲ್ಲ. ನಾನು ನೋಡಿದಾಗಲೂ ಪಟ್ಟಿ ಕಂಡಿರಲಿಲ್ಲ ನಿಜ. ಅದಕ್ಕಾಗಿ ನಾನು, ’ಇವು ಅಮೇರಿಕ ದ ಅಳಿಲುಗಳು. ನಾನು ಹೇಳಿದ್ದು ಭಾರತದ ಅಳಿಲು’ ಎಂದೆ. ಅಲ್ಲಿಯೇ ನಿಂತಿದ್ದ ನನ್ನ ಸೊಸೆ ಮುಗುಳ್ನಕ್ಕು ಸಮಾಧಾನ ಪಟ್ಟಳು. ಸಧ್ಯ ಮಕ್ಕಳು ರಾಮ ಲಕ್ಷ್ಮಣರು ಮತ್ತು ವಾನರರು ಅಮೆರಿಕಕ್ಕೆ ಬರಲಿಲ್ಲವೇ ? ಎಂದು ಕೇಳಲಿಲ್ಲ !

ನಮಗಾಗಿ ಈ ಲೇಖನ ಹೆಕ್ಕಿಕೊಟ್ಟವರು ಎಂ ಆರ್ ಭಗವತಿ

]]>

‍ಲೇಖಕರು G

6 July, 2012

1 Comment

  1. shama, nandibetta

    wow… ’ಇವು ಅಮೇರಿಕ ದ ಅಳಿಲುಗಳು. ನಾನು ಹೇಳಿದ್ದು ಭಾರತದ ಅಳಿಲು’ beautiful ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading