ಪ್ರಸಾದ್ ರಕ್ಷಿದಿ
ನಾನು ಮೊದಲು ಓಟಿಗೆ ದುಡ್ಡು ಕೊಟ್ಟದ್ದನ್ನು ನೋಡಿದ್ದು ಒಂದು ಪಂಚಾಯತ್ ಚುನಾವಣೆಯಲ್ಲಿ
ನಾನು ಪ್ರೈಮೆರಿ ಶಾಲೆಯ ಹುಡುಗ.
ಅಪ್ಪ ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲಿ ಹದಿನೆಂಟು ಮತಗಳಿದ್ದವು.
ಆಗ ತೋಟದಲ್ಲಿ ದಿನಗೂಲಿ ದಿನವೊಂದಕ್ಕೆ ತೊಂಭತ್ತೆರಡು ಪೈಸೆ. ಆಗ ನಮ್ಮಲ್ಲಿನ ಅಭ್ಯರ್ಥಿ (ಕಾಂಗ್ರೆಸ್ಸ್) ಒಂದು ಓಟಿಗೆ ಒಂದು ರೂಪಾಯಿ ಕೊಟ್ಟರು. ಅವರು ಗೆದ್ದು ಛೇರ್ಮನ್ ಆದರು.
ನಂತರ 1977ರ ತುರ್ತುಸ್ಥಿತಿಯ ನಂತರದ ಮಹಾನ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಹಣ, ಪಾತ್ರೆ, ಸೀರೆ ಹಂಚುವುದನ್ನು ತಡೆಯಲು ನಾವೆಲ್ಲ ಹರಸಾಹಸ ಮಾಡುತ್ತಿದ್ದವು.
1978ರ ಚಿಕ್ಕಮಗಳೂರಿನ ಚುನಾವಣೆ. ಇಂದಿರಾಗಾಂಧಿ ಮರಳಿ ಗೆದ್ದ ಆ ಜಿದ್ಧಾ ಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಒಂದು ಓಟಿಗೆ ಹತ್ತು ರುಪಾಯಿ ಹಂಚಿದರು. ಆಗ ದಿನಗೂಲಿ ಐದು ರೂಪಾಯಿ ಇತ್ತು. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ. ಈ ಪ್ರವೃತ್ತಿಯನ್ನು ಬೇರೆ ಪಕ್ಷಗಳು ಅನುಸರಿಸಿದವು. ಆದರೆ ಬಿಜೆಪಿ ಮಾತ್ರ ತಾನು ಹಣ ಹಂಚುವುದಿಲ್ಲ ಎಂದು ವ್ರತ ಹಿಡಿದೇ ಇತ್ತು.
ಸುಮಾರು ತೊಂಭತ್ತರ ದಶಕದವರೆಗೂ ಇದೇ ಪರಿಸ್ಥಿತಿ ಮುಂದುವರೆಯಿತು. ಬಿಜೆಪಿ ನಮ್ಮ ತಾಲ್ಲೂಕಿನಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತರು ತತ್ವ ಸಿದ್ಧಾಂತ ಎಂದು ಮನೆಮನೆಗೆ ಪ್ರಚಾರ ಮಾಡುತ್ತ ಜೊತೆಯಲ್ಲಿನ ಕಾರ್ಯಕರ್ತರ ಊಟ ತಿಂಡಿಗೆ ತಮ್ಮ ದುಡ್ಡು ಖರ್ಚು ಮಾಡುತ್ತ ಪ್ರತಿ ಚುನಾವಣೆಯಲ್ಲು ತಮ್ಮ ಒಂದೆರಡು ಎಕರೆ ಜಮೀನನ್ನು ಮಾರಾಟಮಾಡಿ ಬರಿಗೈಯಾಗಿ ಈಗ ಒಂದು ಸಣ್ಣಸಂಸ್ಥೆಯಲ್ಲಿ ನೌಕರರಾಗಿ ದುಡಿಯುತ್ತಿದ್ದಾರೆ.
ಮೊದಲನೇ ಬಾರಿ ಬಿ.ಬಿ. ಶಿವಪ್ಪನವರು ಇಲ್ಲಿಂದ ಚುನಾಯಿತರಾದಾಗ ಯಾರಿಗೂ ಹಣ, ಹೆಂಡ ಹಂಚಿರಲಿಲ್ಲ. ಆದರೆ ಅವರು ಎರಡನೇ ಬಾರಿ ಆಯ್ಕೆಯಾಗುವಾಗ ಹಣ ಹಂಚಿದ ಉದಾಹರಣೆಗಳು ದೊರೆತವು.
ಮೂರನೇ ಬಾರಿ ಚುನಾವಣೆಗೆ ನಿಂತಾಗ ಅವರು ಕಾಂಗ್ರೆಸ್ಸನ್ನು ಮೀರಿಸುವಂತೆ ಎಲ್ಲವನ್ನೂ ಹಂಚಿದರು, ಮಾತ್ರವಲ್ಲ ಅದನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಂಡರು. ಕೊನೆಗೆ ಸೋತರು !
ಆ ನಂತರ ಬಿಜೆಪಿ ಎಲ್ಲದರಲ್ಲೂ ಎಲ್ಲರನ್ನೂ ಮೀರಿಸುತ್ತಾ ಹೋಯಿತು. ಈಬಾರಿ ನಮ್ಮ ತಾಲ್ಲೂಕಿನ ಬಿಜೆಪಿ ಅಭ್ಯರ್ಥಿ ಖರ್ಚು ಮಾಡಿದ ಹಣ ಐವತ್ತು ಕೋಟಿಗೂ ಹೆಚ್ಚಾಗಬಹುದು.
ಅಂದರೆ ರಥಯಾತ್ರೆ ಪ್ರಾರಂಭಿಸುವವರೆಗಿನ ಜನಸಂಘ- ಬಿಜೆಪಿಯದ್ದು ಒಂದು ಕಾಲಘಟ್ಟ, ನಾವು ತಾತ್ವಿಕವಾಗಿ ಒಪ್ಪದಿರುವ ಆದರೆ ಕಠೋರ ವ್ರತ, ನಂತರದ್ದು ಪ್ರಜಾಸತ್ತೆಯ ಜಾರು ದಾರಿ ಮತ್ತು ಅಧಿಕಾರದ ಏರುದಾರಿ.
ಈಗಿನದ್ದು ಬಯಲಲ್ಲಿ ಬೆತ್ತಲೆ ನಿಂತು…ಕರಾಳ ವಿಕೃತಿ.!






0 Comments