ಅನಸ್ ಪಿ. ಮುಹಮ್ಮದ್
ಕನ್ನಡಕ್ಕೆ : ಮಹೇಶ್ವರಿ.ಯು
ಹಲವು ದೇಶಗಳು ಹಲವು ವೇಷಗಳು:
ಜಾದೂಗಾರ, ಕೈನೋಡಿ ಕಣಿ ಹೇಳುವಾತ, ಹಡಗಿನಲ್ಲಿ ಉಗ್ರಾಣ ನೋಡಿಕೊಳ್ಳುವವ, ಸ್ಪೋರ್ಟ್ಸ್ ಕಂಪೆನಿಯ ಮಾರಾಟಗಾರ, ಪತ್ರಿಕೆಯವಿತರಕ, ಪತ್ರಿಕೆಯ ಕರಡು ತಿದ್ದುವವ, ಪತ್ರಿಕೆಯ ಮಾಲಕ, ಸನ್ಯಾಸಿ, ಸೂಫಿ, ಸ್ವಾತಂತ್ರ್ಯಯೋಧ, ಭಿಕ್ಷುಕ, ಹೋಟೆಲ್ ಪರಿಚಾರಕ, ಸ್ಟೇಷನ್ ಮಾಸ್ಟರ್, ಮಲಯಾಳ ಭಾಷೆಯ ಜನಪ್ರಿಯ ಲೇಖಕ- ಹೀಗೆ ಬಶೀರ್ ನಿರ್ವಹಿಸದ ಪಾತ್ರಗಳಿಲ್ಲ ಎನ್ನಬಹುದು.
ತಿರುಗಾಡಿಯಾಗಿ ದೂರ ದೇಶಗಳಲ್ಲಿ ವರ್ಷಗಟ್ಟಲೆ ಅಲೆದಾಡುತ್ತಿದ್ದ ಕಾಲದಲ್ಲಿ ಉಪವಾಸದ ಹಾಗೂ ಒಂಟಿತನದ ನೋವನ್ನು ಬಹಳವಾಗಿ ಅರಿತವರು ಅವರು. ಆದರೆ ಆಗಲೂ ಆ ವೇದನೆಗಳನ್ನು ವಿನೋದದಿಂದಲೇ ಇಲ್ಲವಾಗಿಸಲು ಅವರು ಶ್ರಮಿಸಿದರು. ಬಶೀರರ ಜೊತೆಯಲ್ಲಿ ವಿದೇಶಗಳಲ್ಲೋ ಬೇರೆಡೆಗಳಲ್ಲೋ ಇದ್ದವರು ಮುಂದೆ ಅವರು ವೈಕಂ ನಿವಾಸಿಯಾದಾಗ ಅವರನ್ನು ಹುಡುಕಿಕೊಂಡು ಬಂದದ್ದಿದೆ. ತಮ್ಮ ಹಳೆಯ ಗೆಳೆಯ ದೊಡ್ಡ ಲೇಖಕನಾದದ್ದು ತಿಳಿಯದವರು ಅವರಲ್ಲಿ ಅನೇಕರಿದ್ದರು.
ಗಾಂಧಿಯನ್ನು ಮುಟ್ಟಿದ ಬಶೀರ್
ಬಶೀರ್ ಶಾಲೆಯಲ್ಲಿ ಓದುತ್ತಿದ್ದ ಕಾಲದಲ್ಲಿ ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಲು ಗಾಂಧೀಜಿ ಬಂದದ್ದು. ಜನಸಂದಣಿಯಲ್ಲಿ ನುಸುಳಿ ಗಾಂಧೀಜಿಯವರ ಮೈಯನ್ನು ಮುಟ್ಟಿದ ಕುರಿತಾಗಿ ಬಶೀರ್ ತಮ್ಮ ತಾಯಿಯೊಡನೆ ಹೇಳಿದ್ದು ಹೀಗೆ: ಅಮ್ಮಾ , ನಾನು ಗಾಂಧೀಜಿಯನ್ನು ಮುಟ್ಟಿದೆ. ಆ ಅನುಭವವನ್ನು ಬಶೀರ್ ಯಾವಾಗಲೂ ತಮ್ಮ ಮನಸ್ಸಿನಲ್ಲಿ ಕಾಪಿಟ್ಟುಕೊಂಡಿದ್ದರು. ಈ ಮೊದಲು ಭಗತ್ ಸಿಂಗರನ್ನೂ ಒಳಗೊಂಡ ತೀವ್ರಗಾಮಿಗಳತ್ತ ಆಕರ್ಷಿತರಾದ ಬಶೀರ್ ಪತ್ರಿಕೆಗಳಲ್ಲಿ ಕ್ರಾಂತಿಯ ಕಿಡಿ ಪಸರಿಸುವ ಲೇಖನಗಳನ್ನು ಬರೆದರು. ಹತಭಾಗ್ಯೆಯಾದ ನನ್ನ ತಾಯಿನಾಡು ಎಂಬಂತಹ ಅವರ ಲೇಖನಗಳು ಅಧಿಕಾರಿಗಳನ್ನು ಕೆರಳಿಸಿದವು. ಪ್ರಕಟಗೊಳ್ಳದಂತೆ ತಡೆಯುವುದಕ್ಕೂ, ಅವರ ಪುಸ್ತಕಗಳನ್ನ ನಿಷೇಧಿಸುವುದಕ್ಕೂ ಇದು ಕಾರಣವಾಯಿತು.
ಬೇಫೂರ್ ಸುಲ್ತಾನ್
ಮಲಯಾಳ ಸಾಹಿತ್ಯಕ್ಕೆ ಒಬ್ಬನೇ ಒಬ್ಬ ಸುಲ್ತಾನ್. ಅದು ಬೇಫೂರ್ ಸುಲ್ತಾನನೆಂದೇ ಕೊಂಡಾಡಲ್ಪಟ್ಟ ವೈಕಂ ಮಹಮ್ಮದ್ ಬಶೀರ್. ಬೇಫೂರಿನ ಮನೆಯಲ್ಲಿ ತಾನು ಓರ್ವ ಸುಲ್ತಾನನಂತೆ ಬಾಳುತ್ತಿದ್ದೇನೆಂದು ಸ್ವತ: ಬಶೀರರೇ ಬರೆದುಕೊಂಡಿದ್ದು ಇದರಿಂದಾಗಿ ಬೇಫೂರ್ ಸುಲ್ತಾನನೆಂಬ ಪ್ರಯೋಗ ಹುಟ್ಟಿಕೊಂಡಿತು. ಅದು ಮುಂದೆ ಬಶೀರರ ಕುರಿತು ಹೇಳುವ ಬಹಳ ಜನಪ್ರಿಯ ಪ್ರಯೋಗವಾಯಿತು. ಇದು ಕೆಲವರನ್ನು ತಪ್ಪು ತಿಳಿಯುವಂತೆ ಮಾಡಿದ್ದೂ ಇದೆ. ಉದಾಹರಣೆಗೆ ಬಶೀರರ ಕುರಿತು ಪಾಕಿಸ್ತಾನದ ಒಂದು ಪತ್ರಿಕೆ ಬರೆಯಿತು: ಬೇಫೂರ್ ಎನ್ನುವ ರಾಜ್ಯದ ಒಬ್ಬ ರಾಜನಾಗಿರುವ ಬಶೀರ್!
ಬಾಲ್ಯಕಾಲ ಸಖಿ ಎನ್ನುವ ಮೋಹಕ ಕೃತಿ
ಮಲಯಾಳ ಭಾಷೆಯಲ್ಲಿ ಅತ್ಯಂತ ಹೃದ್ಯವಾಗಿರುವ ಪುಸ್ತಕಗಳಲ್ಲೊಂದು ಬಶೀರರ ‘ಬಾಲ್ಯಕಾಲ ಸಖಿ’. ಲಲಿತವಾದ ಮಾತುಗಳಲ್ಲಿ ಅಪಾರ ಅನುಭವದ ರಾಶಿಯಲ್ಲಿ ಬಶೀರರ ಪ್ರತಿಭೆಯ ಹೆಗ್ಗುರುತನ್ನು ಇದರಲ್ಲಿ ಕಾಣಬಹುದು. ಆದರೆ ಒಂದು ವಿಷಯವನ್ನು ಹಲವರು ತಿಳಿದಿರಲಾರರು. ಬಶೀರರು ಬಾಲ್ಯಕಾಲ ಸಖಿಯನ್ನು ಬರೆಯತೊಡಗಿದ್ದು ಮಲಯಾಳ ಭಾಷೆಯಲ್ಲಲ್ಲ. ಬದಲಾಗಿ ಇಂಗ್ಲಿಷ್ ನಲ್ಲಿ. ದೇಶ ಸುತ್ತಾಟದ ಎಡೆಯಲ್ಲಿ ಈ ಕೃತಿಯನ್ನು ಬರೆಯ ತೊಡಗಿದ್ದರೂ ಪೂರ್ತಿಗೊಳಿಸಲಾಗಿರಲಿಲ್ಲ. ಆಮೇಲೆ ಅದನ್ನು ಮಲಯಾಳದಲ್ಲಿ ಬರೆದದ್ದು.
ಕಾಲಗತಿಯಲ್ಲಿ ಒಮ್ಮೆ ಸಂಭವಿಸುವ ಮಹಾದ್ಭುತವೇ ಸರಿ ಬಶೀರ್. ಅವರ ರಚನಾ ರೀತಿ ಮ್ಯಾಜಿಕಲ್. ಸಣ್ಣವಾಕ್ಯಗಳನ್ನು ಬಳಸಿ ದೊಡ್ಡ ಭಾವಗಳನ್ನು ಸೃಷ್ಟಿಸುವುದೂ ಅದನ್ನು ಸಂವಹನವಾಗುವಂತೆ ಜನತೆಗೆ ತಲಪಿಸುವುದೂ ಸಾಧ್ಯವಾಗುವ ಮ್ಯಾಜಿಕ್ ಅದು. – ಎಂದವರು ಮಲಯಾಳದ ಪ್ರಖ್ಯಾತ ಬರಹಗಾರ ಒ.ವಿ.ವಿಜಯನ್
0 ಪ್ರತಿಕ್ರಿಯೆಗಳು