ಪ್ರೊ ಬಿ ಎ ವಿವೇಕ ರೈ
ಆಗಸ್ಟ್ ೨೦ ರಿಂದ ಇವತ್ತಿನ ವರೆಗೆ ಫಿನ್ ಲೆಂಡ್ ಮತ್ತು ಜರ್ಮನಿಯಲ್ಲಿ ಕಳೆದ ಇಪ್ಪತ್ತೈದು ದಿನಗಳು ಸಾಕಷ್ಟು ಕೆಲಸಗಳ ಒತ್ತಡಗಳ ನಡುವೆಯೂ ನನಗೆ ಸಂತೃಪ್ತಿ ಕೊಟ್ಟವು . ಫಿನ್ ಲೆಂಡ್ ನ ತುರ್ಕು ವಿಶ್ವವಿದ್ಯಾನಿಲಯದ ಜಾನಪದ ವಿಜ್ಞಾನ ವಿಭಾಗವರು ತಮ್ಮ ಗತಿಸಿದ ಪ್ರೊಫೆಸರ್ ಲೌರಿ ಹಾಂಕೊ ನೆನಪಿನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಜಾನಪದ ಸಮ್ಮೇಳನದಲ್ಲಿ ಕನ್ನಡ ಮತ್ತು ತುಳು ಮೌಖಿಕ ಕಾವ್ಯಗಳನ್ನು ದೃಶ್ಯ ಶ್ರವ್ಯ ದಾಖಲೆಗಳ ಮೂಲಕ ವಿವರಿಸಿ , ಹಾಂಕೊ ಅವರಿಗೆ ಗೌರವ ಸಲ್ಲಿಸಿದೆ . ನನಗೆ ಕೆಲವು ವರ್ಷಗಳಿಂದ ಜಾನಪದ ಅಧ್ಯಯನದ ಸಂಪರ್ಕ ಕಡಮೆ ಆಗಿದ್ದರಿಂದ , ಈ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ದೊರೆಯಿತು . ಜಾನಪದ ಸಂಶೋಧನೆಯಲ್ಲಿ ಇಲ್ಲಿನ ತರುಣ ಪೀಳಿಗೆಯವರು ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ . ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಫಿನ್ ಲೆಂಡ್ ನ್ನು ಕಂಡದ್ದು ,ಅಲ್ಲಿನ ದ್ವೀಪಗಳಲ್ಲಿ ಅಡ್ಡಾಡಿದ್ದು ನಾಸ್ಟಾಲ್ಜಿಯಾ ಸುಖವನ್ನು ಕೊಟ್ಟಿತು .
ಕಳೆದ ನಾಲ್ಕು ವರ್ಷಗಳ ನನ್ನ ಪರಿಚಿತ ಹಾಗು ಆತ್ಮೀಯ ಪುಟ್ಟ ನಗರ ಜರ್ಮನಿಯ ವ್ಯೂರ್ತ್ಸ್ ಬರ್ಗ್ ಗೆ ಬಂದು ಇಲ್ಲಿನ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ . ಅನ್ನಾ ಎಸ್ಪಸಿತೋ ಅವರು ಯೋಜಿಸಿದ ‘ಅಂತಾರಾಷ್ಟ್ರೀಯ ಜೈನ ಕಥನ ಸಾಹಿತ್ಯ ‘ ಸಂಕಿರಣದಲ್ಲಿ -ಆಗಸ್ಟ್ ೩೦ ರಿಂದ ಸಪ್ಟಂಬರ ೧ – ಸಕ್ರಿಯವಾಗಿ ಪಾಲುಗೊಂಡೆ . ನಾನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕನಾಗಿದ್ದ ಅವಧಿಯಲ್ಲಿ ಪಂಪ, ರನ್ನ ,ಜನ್ನ ಕವಿಗಳ ಕಾವ್ಯಗಳನ್ನು ಪಾಠ ಮಾಡಿದ್ದರೂ ಜೈನ ಅಧ್ಯಯನದಲ್ಲಿ ನನ್ನದು ವಿಶೇಷ ಪರಿಣತಿ ಅಲ್ಲ. ಹಾಗಾಗಿ ಈ ಜೈನ ಸಂಕಿರಣದಲ್ಲಿ ಜೈನ ಸಂಶೋಧನೆಯ ಬಗ್ಗೆ ವಿಶೇಷ ಕೆಲಸಮಾಡಿದ ಸಂಶೋಧಕರನ್ನು ಭೇಟಿ ಆಗುವ ,ಅವರ ಅಧ್ಯಯನದ ಮಾದರಿ ಮತ್ತು ಫಲಿತಗಳನ್ನು ತಿಳಿದುಕೊಳ್ಳುವ ಅಪೂರ್ವ ಅವಕಾಶ ದೊರೆಯಿತು . ನಾನು ‘ ಕನ್ನಡ ಕವಿ ಜನ್ನನ ಯಶೋಧರ ಚರಿತೆ ಕಾವ್ಯದಲ್ಲಿ ಹಿಂಸೆ ಮತ್ತು ಅಹಿಂಸೆಗಳ ಪರಿಕಲ್ಪನೆಗಳು ‘ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದೆ . ಕನ್ನಡ ಜೈನ ಸಾಹಿತ್ಯ ಸಂಬಂಧಿಯಾದ ಪ್ರಬಂಧ ಅದು ಒಂದೇ ಅಲ್ಲಿ ಇದ್ದುದರಿಂದ ,ಅನೇಕ ಜೈನ ವಿದ್ವಾಂಸರು ಕನ್ನಡ ಜೈನ ಕಾವ್ಯಗಳ ಬಗ್ಗೆ ಆಸಕ್ತಿ ತೋರಿಸಿದರು .

ಸಪ್ಟಂಬರ ೨ ರಿಂದ ೧೪ ( ನಿನ್ನೆ ) ರ ವರೆಗೆ ಇಲ್ಲಿನ ಇಂಡಾಲಜಿ ವಿಭಾಗದಲ್ಲಿ ‘ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ‘ ನಡೆಯಿತು . ಕನ್ನಡವನ್ನು ಪ್ರಾಥಮಿಕ ಹಂತದಿಂದ ಮಾತನಾಡಲು ,ಓದಲು ಮತ್ತು ಬರೆಯಲು ಕಲಿಸುವ ಈ ಶಿಬಿರ ನಾವು ಕಳೆದ ವರ್ಷ ಸುರುಮಾಡಿದ ಸರಣಿಯಲ್ಲಿ ಮೂರನೆಯದು . ಕಳೆದ ಬಾರಿಯಂತೆ ನಾನು ಮತ್ತು ಡಾ . ಕತ್ರಿನ್ ಬಿಂದರ್ ಕನ್ನಡ ಅಧ್ಯಾಪಕರಾಗಿ .ಸಾರಾ ಮೆರ್ಕ್ಲೆ ಅವರು ಪೂರಕ ವ್ಯಾಸಂಗದ ಜೊತೆಗೆ ಅಕ್ಷರಾಭ್ಯಾಸ ತರಬೇತಿ ಕೊಟ್ಟರು . ಪ್ರೊ. ಹೈದ್ರೂನ್ ಬ್ರೂಕ್ನರ್ ಅವರು ಕರ್ನಾಟಕದ ಇತಿಹಾಸ, ಕಲೆಗಳು , ಸಾಹಿತ್ಯದ ಬಗ್ಗೆ ಉಪನ್ಯಾಸಗಳನ್ನು ಕೊಟ್ಟರು . ನಿನ್ನೆ ದಿನ ಕನ್ನಡ ಶಿಬಿರದ ಅಭ್ಯರ್ಥಿಗಳಿಗೆ ನಾವು ನಡೆಸಿದ ಪರೀಕ್ಷೆಯಲ್ಲಿ ಅವರ ಸಾಧನೆ ನಮಗೆ ಬೆರಗು ಉಂಟು ಮಾಡಿತು . ಎರಡೇ ವಾರಗಳಲ್ಲಿ ಕನ್ನಡವನ್ನು ಸರಳವಾಗಿ ಮಾತನಾಡಲು ,ನಾವು ಕೊಟ್ಟ ಕನ್ನಡದ ಚಿಕ್ಕ ಕತೆಯನ್ನು ತಪ್ಪಿಲ್ಲದೆ ಓದಲು ಮತ್ತು ತಾವೇ ಯೋಚನೆ ಮಾಡಿ ಸ್ವತಂತ್ರವಾಗಿ ವ್ಯಾಕರಣಬದ್ಧವಾಗಿ ಕನ್ನಡ ವಾಕ್ಯಗಳನ್ನು ಬರೆಯಲು ಅವರಿಗೆ ಸಾಧ್ಯ ಆದದ್ದು ನಮಗೆ ಸಂಭ್ರಮದ ಸಂಗತಿ . ಕನ್ನಡ ಶಿಬಿರದ ಚಿತ್ರಗಳನ್ನು ನನ್ನ ಬ್ಲಾಗ್ ನಲ್ಲಿ ಬೇರೆಯಾಗಿಯೇ ಕೊಡುತ್ತೇನೆ .
ಇಲ್ಲಿ ಇವತ್ತು ತುಂತುರು ಮಳೆ . ಶರತ್ಕಾಲ ಆರಂಭ ಆಗಿದೆ . ಚಳಿಗಾಲಕ್ಕೆ ಮೊದಲೇ ಚಳಿ ಒಳಹೊಕ್ಕಿದೆ . ಕನ್ನಡ ಮತ್ತು ಕರ್ನಾಟಕದ ಇಲ್ಲಿನ ನೆನಪುಗಳನ್ನು ಹೊತ್ತುಕೊಂಡು , ಇವತ್ತು ಮತ್ತೆ ಕರ್ನಾಟಕಕ್ಕೆ ಹೊರಡಬೇಕು .







ಕನ್ನಡ ಸಾಹಿತ್ಯ ಮತ್ತು ಜನಪದವನ್ನು ಜಗದಗಲ,ಮುಗಿಲಗಲ ಬೆಳಗಿಸುತ್ತಿರುವ ಡಾ.ವಿವೇಕ ರೈ ಸರ್ ಅವರಿಗೆ ಅಭಿನಂದನೆಗಳು.
Amazing!
Now, if only we could see similar interest and proficiency from our current generation in our own Bengaluru!