ಎನ್ ರವಿಕುಮಾರ್ / ಶಿವಮೊಗ್ಗ
ಕಣ್ಣುಗಳು ನೀರುಕ್ಕಿ
ಧುಮು ಧುಮುಗುಡುತ್ತಿದ್ದವು
ಕನ್ನಡಕ ಮಂಜು ಮುಸುಕಿದಂತೆ
ಮಬ್ಬುಗೊಂಡು ದಾರಿ ಹುಡುಕುತ್ತಿತ್ತು
ಕೊರಳು ಸೆರೆಯುಬ್ಬಿ ಬಿಕ್ಕಳಿಸುತ್ತಿದ್ದರು..
ಅವರ ಕೋಟು ನೆಂದು ನೀರು
ತೊಟ್ಟಿಕ್ಕುತ್ತಿತ್ತು.
ತೋಳತೆಕ್ಕೆಯಲ್ಲಿದ್ದ ಸಂವಿಧಾನ
ಭಯಭೀತಗೊಂಡು ಇನ್ನಷ್ಟು ಅವುಚಿಕೊಂಡು ಅವರೆದೆಗೆ ಬಿಗಿಗೊಳ್ಳುತ್ತಿತ್ತು.
‘ಯಾಕಿಷ್ಟು ದುಃಖ ದೊರೆಯೆ’? ಎಂದೆ.
‘ ಇದು ಬರೀ ದುಃಖವಲ್ಲ, ಕರುಳ ಕೋಣೆಯ ಮಹಾದುಃಖ.’
ಮಹಾಮನೆಯಲ್ಲಿ ರಜ ತುಂಬಿದೆ.
ಹುಳ,ಉಪಟೆಗಳು, ಕಾಡುಮೃಗಗಳು ಘೀಳಿಡುತ್ತಿವೆ.
ಕಲ್ಲು,ಮಣ್ಣು, ಕಂಚಿನ ನನ್ನ ಮೂರ್ತಿ ಒಡೆದು ಚೂರು ಚೂರು ಮಾಡಿದ್ದಕ್ಕೆ ದುಃಖವಿಲ್ಲ.
ಅಧಿಕಾರದ ಫಲ್ಲಂಗದ ಮೇಲೆ
ದೇವರ ಫಲಕ್ಕಿ ಯ ಮೇಲೆ ಹಾಲುಗಲ್ಲದ ಹಸುಗೂಸುಗಳ,
ಹೆಣ್ಣು ಮಕ್ಕಳ ಒಡಲ ಹುರಿದು ಕೊರಳ ಹಿಸುಕಿ ಕೇಕೆ ಹಾಕುವಾಗ ನನ್ನ
ಕರುಳಬಳ್ಳಿ ವಿಲವಿಲಗೊಳ್ಳುತ್ತಿದೆ..
ಎಂದರು.
ಇವತ್ತು ನನ್ನಜನ್ಮದಿನ.
ಪುಷ್ಪಾಲಂಕೃತ ತೇರಿನ ಮೇಲೆ
ವಿಜೃಂಭಣೆಯ ನನ್ನ ಮೆರವಣಿಗೆ.
ಸಂಸತ್ತಿನ ಮಹಾಸೌಧದಲ್ಲಿ
ನನ್ನ ಗುಣಗಾನ .
ಅಬ್ಬಬ್ಬಾ! ಕಿವಿಗಡಚಿಕ್ಕುವಂತೆ
ಭಾಷಣ
ಆಸೀಫಾಳ ಅವಳಂತಹ
ಅದೆಷ್ಟೋ ಕೂಸುಗಳ ಆರ್ತ ಆಕ್ರಂದನ ಯಾರಿಗೂ ಕೇಳಿಸದಿರಲೆಂದೆ ಇರಬೇಕು.
ಎಂದರು..
ನಾಲಿಗೆ ನಡುಗುತ್ತಿತ್ತು
ಅಂಬೇಡ್ಕರ್ ಅವರ ಕಣ್ಣೀರು ಕಡಲಾಗಿ ಹರಿದಿತ್ತು.
ಅರ್ಥಪೂರ್ಣ ಹಾಗು ಸಕಾಲಿಕವಾದ ಚಿತ್ರಣ. ಮನಕಲಕುವ ಪದಗಳು.
ಮನಮುಟ್ಟುವ ಅದ್ಬುತ ಚಿಂತನೆ
Apt for the time. Appreciate for.sharing your feeling so meaning fully
ಅಭಿನಂದನೆಗಳು ಸರ್… ಸಮಕಾಲೀನ ನೆಲೆಯಲ್ಲಿ ಸಮಾನತೆಗಾಗಿ ತುಡಿಯುವ ಸಕ್ರಿಯಶೀಲ ಬರಹದ ಆಶಯದ ಕವಿತೆ..
ಸೂಪರ್ ಕವಿತೆ, ಪ್ರಸ್ತುತ ಸಮಕಾಲಿನ ಚಿಂತನೆಯ ಅಕ್ಷರ ರೂಪ….