ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಇಲ್ಲಿ ತನ್ನದೇ ಆದ ಸಾಮಾಜಿಕ ನ್ಯಾಯ ಪರಂಪರೆ ಇದೆ’ – ಎನ್ ಆರ್ ವಿಶುಕುಮಾರ್

’ಮನುಷ್ಯ ಜಾತಿ ತಾನೊಂದೆ ವಲಂ

ಧ್ವನಿ – ಬೆಳಕು, ದೃಶ್ಯ – ವೈಭವಗಳ ರೂಪಕ

ವಾರ್ತಾ ಇಲಾಖೆ ಅರ್ಪಿಸುತ್ತಿರುವ ಈ ಕಾರ್ಯಕ್ರಮದ ಪರಿಕಲ್ಪನೆ ವಾರ್ತಾಇಲಾಖೆ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರದು.
ಕಾರ್ಯಕ್ರಮ ಇಂದು ಕಲಾಗ್ರಾಮದಲ್ಲಿ ಅನಾವರಣಗೊಳ್ಳಲಿದೆ. ಈ ಸಂದರ್ಭದಲ್ಲಿ ’ಅವಧಿ’ ವಿಶುಕುಮಾರ್ ಅವರನ್ನು ಸಂದರ್ಶಿಸಿದಾಗ, ಅವರು ಕಾರ್ಯಕ್ರಮದ ಬಗ್ಗೆ ಹೇಳಿದ್ದು ಹೀಗೆ :

ಎನ್ ಆರ್ ವಿಶುಕುಮಾರ್

ಸಂದರ್ಶನ : ಎನ್ ಸಂಧ್ಯಾರಾಣಿ
ಸರ್, ಇಂತಹ ಒಂದು ಸಾಮಾಜಿಕ ನ್ಯಾಯದೆಡೆಗೆ ಗಮನ ಸೆಳೆಯುವ ಕಾರ್ಯಕ್ರಮವನ್ನು ಯೋಜಿಸಿದ್ದಕ್ಕೆ ಮೊದಲು ನಮ್ಮ ಅಭಿನಂದನೆ.  ಕರ್ನಾಟಕದ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮಹತ್ವ ಏನು?
ಕರ್ನಾಟಕಕ್ಕೆ ತನ್ನದೇ ಆದ ಸಾಮಾಜಿಕ ನ್ಯಾಯದ ಪರಂಪರೆ ಇದೆ. ೧೦ ನೇ ಶತಮಾನದಲ್ಲಿ ಆದಿಕವಿ ಪಂಪ ’ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಸಾರಿದ್ದಾನೆ. ಆಮೇಲೆ ಬಂದ ವಚನ ಚಳುವಳಿಯನ್ನು ಗಮನಿಸಿದರೆ ಅಲ್ಲಿ ಸಾಮಾಜಿಕವಾಗಿ ತಳಸ್ಥರದ ಮಾದರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಹರಳಯ್ಯ ಮುಂತಾದವರಿಗೂ ಸಹ ಅನುಭವ ಮಂಟಪದಲ್ಲಿ ಸಮಾನ ಸ್ಥಾನ ಮಾನ ಕಲ್ಪಿಸಿರುವುದನ್ನು ನಾವು ಕಾಣಬಹುದು. ನಂತರ ಬಂದ ದಾಸ ಚಳುವಳಿ ಸಹ ಜಾತಿವ್ಯವಸ್ಥೆಯ ವಿರುದ್ಧ ದನಿ ಎತ್ತಿದೆ. ಷರೀಫರ ವಚನಗಳು, ಸೂಫಿ ಪದ್ಯಗಳು ಎಲ್ಲವೂ ಈ ಕೂಗಿಗೆ ಪೂರಕವಾಗಿಯೇ ಬಂದಿವೆ.
ಅಷ್ಟೇ ಅಲ್ಲ ಇಡೀ ಭಾರತದಲ್ಲಿಯೇ ಮೊಟ್ಟಮೊದಲನೆಯದಾಗಿ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ಪದ್ಧತಿಯನ್ನು ಜಾರಿಗೆ ತಂದವರು ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಎನ್ನುವ ಹೆಮ್ಮೆ ಸಹ ನಮಗಿದೆ.
ಇವ್ಯಾವುದನ್ನು ನಾವು ಹೊಸದಾಗಿ ಮಾಡಬೇಕಿಲ್ಲ, ಈ ಅರಿವನ್ನು ಜನರ ಬಳಿಗೆ ಕೊಂಡೊಯ್ಯುವುದೇ ಈ ಕಾರ್ಯಕ್ರಮದ ಉದ್ದೇಶ.
ಇದು ಒಂದು ದಿನದ ಸಂವೇದನಾಶೀಲ ಕಾರ್ಯಕ್ರಮವಾಗಿ ರೂಪುಗೊಂಡಿದೆಯಾ?
ಖಂಡಿತಾ ಇಲ್ಲ. ಇದು ಇಂದು ಕಲಾಗ್ರಾಮದಲ್ಲಿ ಮೊದಲು ಪ್ರದರ್ಶನಗೊಳ್ಳಲಿದೆ. ಆಮೇಲೆ ಫೆಬ್ರವರಿ ೨ ಮತ್ತು ೩ ಲಾಲ್ ಭಾಗ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಆ ನಂತರ ರಾಜ್ಯದ ೧೩ ಜಿಲ್ಲೆಗಳಲ್ಲಿ ಈ ಪ್ರದರ್ಶನ ನಡೆದು ಕಡೆಗೆ ಸಾಣೆಹಳ್ಳಿಯಲ್ಲಿ ಸಮಾರೋಪಗೊಳ್ಳಲಿದೆ.
ಜಾತಿ ಪದ್ಧತಿಯನ್ನು ಮಾನವೀಕರಿಸುವ ಪ್ರಕ್ರಿಯೆಯಲ್ಲಿ ಈ ಕಾರ್ಯಕ್ರಮವನ್ನು ನೀವು ಹೇಗೆ ನೋಡುತ್ತೀರಿ?
ನಾನು ಮೊದಲೇ ಹೇಳಿದ ಹಾಗೆ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯದ ಒಂದು ಪರಂಪರೆಯೇ ಇದೆ. ಇಲ್ಲಿ ನಾವೇನೂ ಹೊಸದಾಗಿ ಹೇಳಬೇಕಿಲ್ಲ, ಮಾತುಗಳನ್ನು, ಘೋಷವಾಕ್ಯಗಳನ್ನು ಎರವಲು ಪಡೆಯಬೇಕಿಲ್ಲ. ನಮ್ಮಲ್ಲಿ ಆಗಿಹೋದ ಈ ಜ್ಜಾನ ಪರಂಪರೆಯನ್ನು ಮತ್ತೆ ಜನಗಳ ಮುಂದೆ ತಂದಿಡುವುದಷ್ಟೇ ನಮ್ಮ ಕೆಲಸ. ಅದಕ್ಕಾಗಿ ನಾವು ನಮ್ಮಲ್ಲಿನ ಅಪ್ರತಿಮ ಕಲಾವಿದರೆ ನೆರವು ತೆಗೆದುಕೊಂಡು ಅವರ ಕಲೆಯ ಮೂಲಕ ಅದನ್ನು ಜನರ ಮುಂದಿಡುತ್ತಿದ್ದೇವೆ. ಇಲ್ಲಿ ಹಂಸಲೇಖ ಅವರ ಸಂಗೀತ ಇದೆ, ಬಸವಲಿಂಗಯ್ಯ, ಕೋಟಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಕೆ ವೈ ನಾರಾಯಣಸ್ವಾಮಿ, ಶಶಿಧರ ಆಡಪ್ಪ ಇನ್ನೂ ಹಲವಾರು ಜನರ ಕಲೆಯ ಮೂಲಕ ನಾವು ಇದನ್ನೊಂದು ರೂಪಕವಾಗಿ ಅನಾವರಣಗೊಳಿಸುತ್ತಿದ್ದೇವೆ. ಅಂದರೆ ಹೊಸ ಮಾಧ್ಯಮಗಳನ್ನು ಬಳಸಿಕೊಂಡು ಸಾಮಾಜಿಕ ನ್ಯಾಯದ ಈ ಆಶಯವನ್ನು ಹೆಚ್ಚು ಜನಪರಗೊಳಿಸುವುದು ನಮ್ಮ ಪ್ರಯತ್ನ.
ಎಲ್ಲರೂ ಬಂದು ಪ್ರದರ್ಶನ ನೋಡಲಿ, ಈ ಕೆಲಸಕ್ಕೆ ತಮ್ಮ ಕೈ ಜೋಡಿಸಲಿ ಎನ್ನುವುದು ನಮ್ಮ  ಆಶಯ.
 

‍ಲೇಖಕರು G

1 February, 2014

1 Comment

  1. pradeep

    thank u sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading