ಎಸ್ ನಾಗಶ್ರೀ
ಒಡೆದ ಮನಸಿಗೆ ಇನ್ನೂ
ರೂಪಕಗಳು ಸೋಲುತ್ತಿವೆ
ಹಾಲು ಒಡೆಸಿ ಚಂಪಾಕಲಿ
ಒಡೆದ ಕನ್ನಡಿಗೆ ತೇಪೆ ಕಸೂತಿ
ಒಡೆದ ಹೃದಯಕ್ಕೆ ಶಸ್ತ್ರಚಿಕಿತ್ಸೆ
ತಳವೊಡೆದ ಪಾತ್ರೆಗೆ ಅಧ್ಯಾತ್ಮ
ಬಳೆಚೂರಲ್ಲಿ ಚೌಕಾಭಾರ
ಇನ್ನೊಂದು ಮುಖವಿದೆ ಇವಕ್ಕೆ
ಒಡೆದ ಮನಸ್ಸಿಗೆ ತೇಪೆ ಹಚ್ಚುವುದೆಂತು
ಗಾಯ ಮಾಯ್ದರೂ ಕಲೆ ಅಮರ
ಅತ್ತಮೊಗದ ನಗುವಿಗೂ ನೋವಿನ ಕಿಸಿರು
ನೂರು ಸಂಗತಿಯ ಗಾನಕ್ಕೆ ತಪ್ಪಾದ ಒಂದು ನಡೆ
ಸಾವಿರ ಮೆಟ್ಟಿಲಿನ ಬೆಟ್ಟದಲ್ಲಿ ಒಂದು ಎಡರುಗಾಲು
ಸೂಕ್ಷ್ಮಘಳಿಗೆಯಲಿ ಬಾಯಿಜಾರಿದ
ಒಂದು ಪೆಡಸುನುಡಿ
ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ
ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ
ಏನೋ ಹೇಳ ಹೊರಟು ಮತ್ತೇನೋ
ಆಗುವಾಗ
ಒಂದು ಮನಸ್ಸು ಒಡೆಯಬಹುದು
ಮತ್ತೆ ಸೇರಲೆಂದು ಶತಪ್ರಯತ್ನ ಏಕೆ?
ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ
ಚೆಂದದ ಕವಿತೆ ನಾಗಶ್ರೀ ಅವರೇ
ಧನ್ಯವಾದಗಳು ವಸುಂಧರ ಮೇಡಂ
ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟು!! ಚಂದದ ಸತ್ಯ
ಮತ್ತೆಲ್ಲಕ್ಕೂ…..ನೋವು ಮರೆಯಲು ಮತ್ತೊಂದು ಬದುಕು ….. ಮನ್ನಸ್ಸಿಗೆ ಮಾತ್ರ ಒಡೆದ ಬಿರುಕಿನೊಳಗೆ ಒಸರುವ ನೋವಿನ ನಿರಂತರ ಹಸಿಗಾಯ …….
ಬಹಳ ಅರ್ಥ ಪೂರ್ಣ ಕವಿತೆ ಮೇಡಂ
ಕವಿತೆ ಚನ್ನಾಗಿದೆ