ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ‘ಬ್ರೇಕಿಂಗ್ ನ್ಯೂಸ್’ ಅಲ್ಲ

ಪರಮ ಕಾಯಕ ಜೀವಿ ಇನ್ನಿಲ್ಲ

ಮಾಲಾ ಲಹರಿ

ಮಲ್ಲಿಕಾರ್ಜುನ, ವಯಸ್ಸು ೫೦. ವೃತ್ತಿ , ನಲ್ಲಿ ಕೆಲಸ (ಪ್ಲಂಬರ್). ಯಾವುದೇ ದುರಭ್ಯಾಸವಿಲ್ಲ. ನಮಗೆ ಅವರ ಪರಿಚಯವಾಗಿ  ಸುಮಾರು ೨೦ ವರ್ಷ. ನಮ್ಮ ಅಭಿಮಾನಕ್ಕೆ ಪಾತ್ರರಾಗಿದ್ದರು. ಪ್ರಾಮಾಣಿಕ ಕಾಯಕ ಜೀವಿ. ಒಬ್ಬರ ಮನೆಯ ಎರಡನೇ ತಾರಸಿಯಲ್ಲಿರುವ ತೊಟ್ಟಿಯನ್ನು ಚೊಕ್ಕಗೊಳಿಸುವಾಗ ಮಲ್ಲಿಕಾರ್ಜುನ ಆಯತಪ್ಪಿ ಕೆಳಗಿನ ತಾರಸಿಗೆ ಬಿದ್ದರಂತೆ. ಅರ್ಧ ಗಂಟೆ ಯಾರಿಗೂ ಗೊತ್ತಾಗಲೇ ಇಲ್ಲ. ಮತ್ತೆ ಆಸ್ಪತ್ರೆಗೆ ಸೇರಿಸಿದರು. ಜ್ಞಾನ ಇಲ್ಲ ಎಂದು ೩.೧೧.೨೦೧೦ರಂದು ನಮಗೆ ಸುದ್ದಿ ಬಂತು. ಆ ದಿನ ನಮಗಾದ ಬೇಸರ ತೀವ್ರ. ಛೇ ಒಳ್ಳೆಯವರಿಗೇಕೆ ಇಂಥ ಶಿಕ್ಷೆ ಎಂದು ಕೇಳಿಕೊಂಡೆ. ೬.೧೧.೨೦೧೦ ರಂದು ಬೆಳಗ್ಗೆ ಮಲ್ಲಿಕಾರ್ಜುನ ಈ ಲೋಕ ತ್ಯಜಿಸಿ ಶಿವನನ್ನು ಅರಸುತ್ತ ನಡೆದರು. ನಮಗೆ ಸುದ್ದಿ ತಿಳಿಯುವಾಗ ರಾತ್ರಿ ಆಗಿತ್ತು. ಹಾಗಾಗಿ ಮುಖ ನೋಡಲೂ ಸಿಗಲಿಲ್ಲ.

ನಮ್ಮ ಮಾವ ೨೦೦೫ರಲ್ಲಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ವಾಸದಲ್ಲಿದ್ದಾಗ ಈ ಮಲ್ಲಿಕಾರ್ಜುನ ಚಾಮುಂಡಿಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ಆಸ್ಪತ್ರೆಗೆ ಪ್ರಸಾದ ತಂದು ಮಾವನಿಗೆ ಕೊಟ್ಟು, ಬೇಗ ಹುಶಾರಾಗಿ ಮನೆಗೆ ಬನ್ನಿ ಎಂದು ಹಾರೈಸಿದ್ದರು. ಎಂಥ ನಿರ್ವಾಜ್ಯ ಪ್ರೇಮವದು. ಮತ್ತೆ ಆಗಾಗ ಮನೆಗೆ ಬಂದು ಬುದ್ಧಿಯವರು ಚೆನ್ನಾಗಿದ್ದಾರ? ಎಂದು ನೋಡಿ ಮಾತಾಡಿಸಿ ಹೋಗುತ್ತಿದ್ದರು. ದಾರಿಯಲ್ಲಿ ಎಲ್ಲೇ ಕಾಣಸಿಕ್ಕಲಿ, ಸೈಕಲ್ ನಿಲ್ಲಿಸಿ ಕುಶಲ ವಿಚಾರಿಸಿಯೇ ಮುಂದೆ ಹೋಗುತ್ತಿದ್ದುದು. ನಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ಮಲ್ಲಿಕಾರ್ಜುನರಿಗೆ ದೂರವಾಣಿ ಮಾಡಿದರೆ ಕ್ಷಣಾರ್ಧದಲ್ಲಿ ಬಂದು ಯಾವ ಕೆಲಸ ಎಂದು ನೋಡಿ ಅವರಿಗೆ ಮಾಡಲಾಗದಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಸಮಸ್ಯೆ ಇತ್ಯರ್ಥ ಮಾಡಿಸುತ್ತಿದ್ದರು. ಸಕಲ ಕೆಲಸ ವಲ್ಲಭ ಎಂದು ನಾನು ಹೇಳುತ್ತಿದ್ದೆ. ಯಾವ ಕೆಲಸ ಮಾಡುವಾಗಲೂ ಶಿವಾ ಕಾಪಾಡಪ್ಪ ಎಂದು ಹೇಳಿಯೇ ಕೆಲಸ ಮಾಡುತ್ತಿದ್ದುದು. ಶಿವ ಎಂದರೆ ಬಹಳ ಭಕ್ತಿ. ಕೆ.ಹೆಮ್ಮನಹಳ್ಳಿಯ ಮಹಾಲಿಂಗೇಶ್ವರ ದೇವಾಲಯಕ್ಕೆ ಪ್ರತೀಸಲವೂ ನೂರೋ ಇನ್ನೂರು ರೂಪಾಯಿ  ಕೊಟ್ಟು ಆ ಶಿವನಿಗೆ ಕೊಟ್ಟರೆ ಇದರ ಎರಡರಷ್ಟು ವಾಪಾಸು ಕೊಡುತ್ತಾನೆ ಎಂದು ಭಕ್ತಿಯಿಂದ ಹೇಳುತ್ತಿದ್ದರು.

ಮಕ್ಕಳಿಬ್ಬರಿಗೂ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದಾರೆ. ದೊಡ್ದಮಗ ಇಂಜಿನಿಯರಾಗಿ ಕೆಲಸದಲ್ಲಿದ್ದಾನೆ ಎಂದು ಇತ್ತೀಚೆಗೆ ಸಿಕ್ಕಾಗ ಸಂತಸದಿಂದ ಹೇಳಿದ್ದರು. ಹಾಗಾಗಿ ಸರಸ್ವತೀಪುರದಲ್ಲಿರುವ ಮನೆ ಖಾಲೀ ಮಾಡಿ ಹೆಬ್ಬಾಳಕ್ಕೆ ಸ್ವಂತ ಮನೆಗೆ ಹೋಗಿದ್ದೇವೆ. ಮಗನಿಗೆ ಕೆಲಸಕ್ಕೆ ಹೋಗಲು ಅಲ್ಲಿಂದ ಹತ್ತಿರವಾಗುತ್ತದೆ. ಆದರೆ ನನ್ನ ಕೆಲಸ ಇರುವುದು ಎಲ್ಲ ಇಲ್ಲಿಯೇ. ಬೆಳಗ್ಗೆ ಇಲ್ಲಿಗೇ ಬರುತ್ತೇನೆ ಎಂದಿದ್ದರು. ಅಂಥ ಸರಳ ಸಜ್ಜನ ಮಲ್ಲಿಕಾರ್ಜುನ ಅವನ ಪ್ರಿಯ ಸ್ವಾಮಿ ಶಿವನ ಬಳಿ ಇಷ್ಟು ಶೀಘ್ರವೇ ತೆರಳಿದ್ದು ನಮಗೆಲ್ಲ ನೋವು ತಂದಿದೆ. ಒಳ್ಳೆಯವರಿಗಿದು ಕಾಲವಲ್ಲವೇ? ಎಂದು ನನ್ನ ಮನ ಕೇಳುತ್ತಲೇ ಇದೆ. ಅವರಿಗಿದೋ ನನ್ನ ನುಡಿನಮನದ ಶ್ರದ್ಧಾಂಜಲಿ.

‍ಲೇಖಕರು avadhi

9 November, 2010

2 Comments

  1. rukminimala

    ಈ ನುಡಿನಮನವನ್ನು ಅವಧಿಯಲ್ಲಿ ಹಾಕಿದ್ದಕ್ಕೆ ಕೃತಜ್ಞತೆಗಳು
    ಮಾಲಾ

  2. veda

    Malaravara Nudinamanavannu avadhiyallu mathomme odhi manathumbi banthu. Yellara badhukinallu hadhu baruva intha vyakthigalannu navellaru mareyuvudhu, upekshisuvudhe jasthi, kelavobbaru smarisidaru, baravanigeya moolaka chikka chokka nudi namana sallisuvavaru aparoopavendhe helabahudu.Manamutuva, sarala, sundara baraha Malaravare.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading