ಎ೦ದೆಂದೂ “ಕಾಡು”ವ ಮನೆ
ಓದು ಸಿದ್ಧೇಗೌಡ
ಬಹಳ ದಿನಗಳಿಂದ ಮನಸಿನಲ್ಲಿದ್ದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಿನಿಮಾದಲ್ಲಿ ಹೊರಾಂಗಣ ಚಿತ್ರೀಕರಣ ಶುರುವಾದ ಮೇಲೆ ರಾಜ್ಯದ ಹಲವಾರು ಹಳ್ಳಿಗಳು,ಅಲ್ಲಿರುವ ಮನೆಗಳು,ಪರಿಸರ,ಅಲ್ಲಿನ ಗ್ರಾಮೀಣ ಭಾಷೆ,ಜನಸಮುದಾಯ ನಮ್ಮ ಕನ್ನಡ ಸಿನಿಮಾಗಳಲ್ಲಿ ಚಿತ್ರೀಕರಣಗೊಂಡು ಅಚ್ಚಳಿಯದೆ ಉಳಿದಿವೆ.ಆ ಸಿನಿಮಾ ಗಳನ್ನು ನೋಡುವಾಗ “ನಮ್ಮೂರಿನಲ್ಲಿ ಚಿತ್ರಿಸಿದ ಸಿನಿಮಾ” ಎಂಬ ಅಭಿಮಾನ ಸಹಜವಾದದ್ದೆ.
೧೯೭೦-ಈ ದಶಕ ರಾಜ್ಯದ ಇತಿಹಾಸದಲ್ಲಿ ಬಹುಮುಖ್ಯವಾದದ್ದು. ಬಂಡಾಯ, ದಲಿತ ಚಳವಳಿ, ಅರಸು ಜಾರಿಗೆ ತಂದ ಭೂಸುಧಾರಣೆಗಳು, ಮೈಸೂರು ಕನಾ೯ಟಕವಾಗಿ ನಾಮಕರಣಗೊಂಡಿದ್ದು ಇತ್ಯಾದಿ. ಇದೇ ಸಂದಭ೯ದಲ್ಲಿ ಕನ್ನಡ ಸಿನಿಮಾದಲ್ಲಿ ಹೊಸ ಅಲೆಯ ಚಿತ್ರಗಳು ತಯಾರಾದದ್ದು. ಸಾಹಿತ್ಯ, ರಂಗಭೂಮಿಯಲ್ಲಿದ್ದ ಹಲವು ದಿಗ್ಗಜರು ಸಿನಿಮಾದಲ್ಲಿ ಹಲವು ಪ್ರಯೋಗಗಳಲ್ಲಿ ನಿರತರಾದರು. ಸಿನಿಮಾ ಎಂಬುದು ಹಲವು ಸಾಧ್ಯತೆಗಳ ಪ್ರಬಲ ಮಾಧ್ಯಮ ಎಂದು ನಿರೂಪಿಸಿದರು. ಹಲವು ಸಾಹಿತ್ಯ ಕೃತಿಗಳು ಬೆಳ್ಳಿತೆರೆಯನ್ನು ಅಲಂಕರಿಸಿದವು.
ಈ ಹೊತ್ತಿನಲ್ಲಿಯೇ ” ಕಾಡು” ಸಿನಿಮಾ ರೂಪುಗೊಂಡಿದ್ದು. ಇದರಲ್ಲೇನು ವಿಶೇಷ ಅಂತೀರಾ?. ಮತ್ತೆ ವಿಷಯಕ್ಕೆ ಬರೋಣ. ಕಾಡು ಚಿತ್ರೀಕರಣಗೊಂಡಿದ್ದು ನಮ್ಮೂರಿನಲ್ಲಿ (ಕೆಬ್ಬೇಹಳ್ಳಿ, ಕಗ್ಗಲಿದೊಡ್ಡಿ, ಬೆಟ್ಟೇಗೌಡನದೊಡ್ಡಿ). ಕಾಡು ಆಲನಹಳ್ಳಿ ಕೃಷ್ಣ ರ ಪ್ರಸಿದ್ಧ ಕೃತಿ.ಈ ಸಿನಿಮಾದ ನಿದೇ೯ಶಕರು ಗಿರೀಶ್ ಕಾನಾ೯ಡರು. ಅಮರೀಶ್ ಪುರಿ, ಲೋಕೇಶ್, ಜಿ.ಕೆ.ಗೋವಿಂದರಾವ್, ಸುಧಾ ಬೆಳವಾಡಿ, ಗುಬ್ಬಿ ವೀರಣ್ಣನವರ ಮೊಮ್ಮಗ (ಕಿಟ್ಟಿ ಪಾತ್ರಧಾರಿ), ಜೂನಿಯರ್ ಕಲ್ಪನ (ನಾಯಕಿ ಹೆಸರು ಗೊತ್ತಿಲ್ಲ. ಆಗ ಹೀಗೆ ಕರೆಯುತ್ತಿದ್ದರಂತೆ) ಪ್ರಮುಖ ಪಾತ್ರವಗ೯. ಇಲ್ಲಿಯೇ ಚಿತ್ರಿಕರಿಸುವುದಕ್ಕೂ ಹಿನ್ನೆಲೆ ಇದೆ.
ಕಾನಕಾನಹಳ್ಳಿ (ಕನಕಪುರ) ಗೋಪಿ ಈ ಸಿನಿಮಾದ ನಿಮಾ೯ಣ ಮೇಲ್ವಿಚಾರಣೆ. ಸ್ವಾತಂತ್ರ್ಯ ಚಳವಳಿ, ಸಿನಿಮಾ, ಸಾಹಿತಿಗಳ ಒಡನಾಟದಲ್ಲಿದ್ದ ಇವರ ಹಿರೀಕರು ಕಗ್ಗಲಿದೊಡ್ಡಿ ಬಳಿ ಜಮೀನು ಖರೀದಿಸಿ ವ್ಯವಸಾಯ ಮಾಡಿಸುತ್ತಿದ್ದರು. ನಮ್ಮೂರಿಗರಿಗೆ ಹಳೇ ಗೆಳೆತನ. ಈ ಸಿನಿಮಾದ ಕಥೆಗೆ ನಮ್ಮೂರಿನ ಪರಿಸರ ಹೊಂದುತ್ತಿದ್ದರಿಂದ ಕಾನಾ೯ಡರನ್ನು ಒಪ್ಪಿಸಿದ್ದರು.
ಇಲ್ಲಿರುವ ಫೋಟೋಗಳನ್ನು ನೋಡಿ. ಇದೇ ಮನೆಯಲ್ಲಿ ಕಾಡು ಚಿತ್ರೀಕರಣಗೊಂಡಿದ್ದು. ಇದು ಕೋಟೆ ಶಿವಣ್ಣನವರ ಮನೆ. ಇವರ ತಂದೆ ಕೋಟೆ ಲಿಂಗೇಗೌಡರು ನಮ್ಮೂರು ಕೆಬ್ಬೇಹಳ್ಳಿಯವರೇ ಆಗಿದ್ದು ತಮ್ಮ ಜಮೀನಿನಲ್ಲಿ ದೊಡ್ಡ ಮನೆಯನ್ನು ಕಟ್ಟಿಸಿ ಅಲ್ಲಿಯೇ ನೆಲೆಗೊಂಡು ಕಗ್ಗಲೀದೊಡ್ಡಿಯೆಂದು ನಾಮಕರಣ ಮಾಡಿಕೊಂಡರು. ಈ ಮನೆಯೇ ಪ್ರಮುಖ ಪಾತ್ರಧಾರಿ ಚಂದ್ರೇಗೌಡರ ಮನೆ.
ಸಂಕ್ರಾ೦ತಿ ಹಬ್ಬ, ಪಂಚಾಯಿತಿ ಸಭೆಗಳು, ರಾಗಿ ಬಣವೆ ಗೆ ಬೆಂಕಿ, ಹೊಡೆದಾಟಗಳು, ಪೊಲೀಸರು ನಾಯಕನನ್ನು ಬಂಧಿಸುವುದು, ಊಟದ ದೃಶ್ಯಗಳು, ಕೊನೆಯಲ್ಲಿ ಕಿಟ್ಟಿ ಹಳ್ಳದಲ್ಲಿ ಒಬ್ಬಂಟಿಯಾಗಿ ಕುಳಿತುಕೊಳ್ಳುವುದು.. ಇತ್ಯಾದಿ ದೃಶ್ಯಗಳು ಈ ಮನೆ, ಅಲ್ಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿವೆ. ಈ ಮೂರು ಊರಿನ ಜನರು, ದನಕರುಗಳು ಕೂಡ ಇಲ್ಲಿ ಪಾತ್ರಗಳಾಗಿವೆ. ಇನ್ನೂ ಕೆಲವು ದೃಶ್ಯಗಳು ಮೈಸೂರು ಬಳಿಯ ಹೊಸೂರು, ಆಲನಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ.
ಈ ಮನೆ ಕಟ್ಟಿ ೭೦ ವಷ೯ಗಳಾಗಿವೆ. ಈ ಮನೆಯಲ್ಲಿ ಶಿವಣ್ಣನವರ ಧಮ೯ಪತ್ನಿ, ಮಗ ಶಿವಮಾದು ಕುಟುಂಬವಿದೆ (ಫೋಟೋದಲ್ಲಿರುವವರು). ಆಗ ಕೊಟ್ಟಿಗೆಯಾಗಿದ್ದ ಜಾಗ ಈಗ ಹಾಲ್, ಅಡುಗೆ ಮನೆಯಾಗಿದೆ. ನಮ್ಮ ನಾಯಕಿ ರೊಟ್ಟಿ ಮಾಡಿದ್ದ ಅಡುಗೆ ಮನೆ ಈಗ ರೂಂ ಆಗಿದೆ. ಮನೆ ಒಳಭಾಗ ಕಾಂಕ್ರೀಟುಮಯವಾಗಿದೆ.
ಹಿಂದಿ ನಟ ಅಮರೀಶ್ ಪುರಿ, ಲೋಕೇಶ್, ಕಾನಾ೯ಡರು, ಚಿಂತಕ ಜಿ.ಕೆ ಗೋವಿಂದರಾವ್ ರ೦ತಹ ಮಹನೀಯರು ನಡೆದಾಡಿದ ಮನೆ ಮತ್ತು ಪರಿಸರವಿದು.೧೯೭೩ರಲ್ಲಿ ಚಿತ್ರ ತೆರೆಕಂಡಾಗ ನಮ್ಮೂರಿನ ಜನರು ಬೆಂಗಳೂರಿಗೆ ಬಂದು ನೋಡಿದ್ದರು. ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕನ್ನಡ ಚಿತ್ರದ ಭಾಗವಾಗಿದ್ದರ ಬಗ್ಗೆ ಈ ಮನೆಯ ಸದಸ್ಯರು, ನಮ್ಮೂರಿನವರಲ್ಲಿ ಹೆಮ್ಮೆಯಿದೆ.. ಇದಕ್ಕೆ ಕಾರಣೀಭೂತರಾದವರನ್ನು ಸ್ಮರಿಸೋಣ.
ಈ ಸಿನಿಮಾದ ಸಿ.ಡಿ. ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಸಕ್ತರು ನೋಡಬಹುದು. ನನಗೆ ಕಾಡು ಸಿನಿಮಾದ ಬಗ್ಗೆ ಆಸಕ್ತಿ ಹುಟ್ಟಿಸಿದವರು ನನ್ನ ಅಪ್ಪ ದಿ! ಮಂಚೇಗೌಡರು. ಆಗಾಗ್ಗೆ ಈ ಸಿನಿಮಾದ ಬಗ್ಗೆ ಹೇಳುತ್ತಿದ್ದರು. ಪಂಚಾಯಿತಿ ಸಭೆಯಲ್ಲಿ ಅಪ್ಪನೂ ಇದ್ದಾರೆ. ಕಪ್ಪು ಬಿಳುಪು ಸಿನಿಮಾವಾದ್ದರಿಂದ ಹಾಗೂ ನಾನಿನ್ನು ಹುಟ್ಟಿರಲಿಲ್ಲವಾದ್ದರಿಂದ ಈ ಸಿನಿಮಾದಲ್ಲಿ ನಮ್ಮೂರಿನ ಹಿರಿಯರನ್ನು ಗುರುತಿಸುವುದು ಕಷ್ಟ. ನೀವು ನಮ್ಮೂರಿನ ಕಡೆ ಬಂದಾಗೊಮ್ಮೆ ಭೇಟಿ ನೀಡಿ.
ಕಾಡು (ಚಲನಚಿತ್ರ) | |
---|---|
ಕಾಡು | |
ನಿರ್ದೇಶನ | ಗಿರೀಶ್ ಕಾರ್ನಾಡ್ |
ನಿರ್ಮಾಪಕ | ಜಿ.ಎನ್.ಲಕ್ಷ್ಮೀಪತಿ |
ಪಾತ್ರವರ್ಗ | ಲೋಕೇಶ್ ನಂದಿನಿ ಅಮರೀಶ್ ಪುರಿ,ಉಮಾ ಶಿವಕುಮಾರ್,ಮಾ.ನಟರಾಜ್, ಸುಧಾ ಬೇಳವಾಡಿ |
ಸಂಗೀತ | ಬಿ ವಿ ಕಾರ೦ತ |
ಛಾಯಾಗ್ರಹಣ | ಗೋವಿಂದ್ ನಿಹಲಾನಿ |
ಬಿಡುಗಡೆಯಾಗಿದ್ದು | ೧೯೭೪ |
ಪ್ರಶಸ್ತಿಗಳು | ರಾಷ್ಟ್ರ ಪ್ರಶಸ್ತಿ |
ಚಿತ್ರ ನಿರ್ಮಾಣ ಸಂಸ್ಥೆ | ಎಲ್.ಎನ್.ಕಂಬೈನ್ಸ್ |
ಇತರೆ ಮಾಹಿತಿ | ಶ್ರೀಕೃಷ್ಣ ಆಲನಹಳ್ಳಿ ಅವರ ಕಾಡುಕಾದಂಬರಿ ಅಧಾರಿತ ಚಿತ್ರ |
0 ಪ್ರತಿಕ್ರಿಯೆಗಳು