ಸತ್ತವಳನು ಹೊತ್ತುಕೊಂಡು ನಡೆದವನನ್ನು ಕಂಡು ಹುಟ್ಟಿಕೊಂಡ ಕವಿತೆ ಇದು.
ಇದು ಕವಿತೆ ಬರೆಯುತ್ತಾ ಕುಳಿತುಕೊಳ್ಳಬೇಕಾದ ಸಮಯವಲ್ಲ, ಗೊತ್ತು.
ಆದರೂ ಕೆಲವು ಸಾಲುಗಳು ಬೇಡ ಬೇಡ ವೆಂದರೂ ಮೂಡಿ ಕಾಡಿದಾಗ ಬರೆದು ಹೋಯಿತು.
ಇನ್ನೊಮ್ಮೆ ನೀನು ಹೀಗೆ ನಡೆಯುವಂತಾದರೆ
ಸತ್ಯಕಾಮ ಶರ್ಮಾ ಕಾಸರಗೋಡು
ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ
-ಹಾ! ಹಾಗಾಗದಿರಲಿ ದೇವರೆ
ಮರೆಯದೆ ಮೂಡಿಸು
ನಿನ್ನ ಹೆಜ್ಜೆ ಗುರುತು
ಅದರರಕದಲಿ ತಗೆದು
ಮಾಡಿದ ಪಾದರಕ್ಷೆಗಳನು
ತೊಡಿಸಬೇಕಿದೆ
ಬಳಸು ದಾರಿಗಳೇ ಅಭ್ಯಾಸ
ಆಗಿ ಹೋದವರಿಗೆ
ಹೀಗೆ ಬಂದು ಹಾಗೆ
ಹೊರಟು ಹೋಗುವ
ಹೋರಾಟಗಾರರಿಗೆ
ತರಬೇಕಾಗಿದೆ ಬದ್ಧತೆ
ನಿಷ್ಠೆಯ ನೆಲೆ
ಹಸಿವು ನೀರಡಿಕೆ ನೀಗುವುದೇ
ಗುರಿಯಾದ ನಿನ್ನಂಥವರಿಗೆ
ಬಂದೆರಗುವ ಸಾವು ತಂದೊಡ್ಡುವ ಹೊರೆಗೆ
ಕುರುಡಾದ ಕೋಟಿ ಕೋಟಿ ಕಂಗಳನು
ತೆರೆಯಬಲ್ಲೆಯಾದರೆ ನಡೆ
ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ ನಡೆ
ವೇಗ ಪಡೆ
ಗೆಲ್ಲುವುದಕಲ್ಲ ಪದಕಗಳನು
ಬಿಡಿಸುವುದಕೆ ಸಂಕಲೆಗಳನು
ಚರಿತ್ರೆಯಾಗಬಲ್ಲ ಚಿತ್ರಗಳನು
ನಿನ್ನ ನಡಿಗೆಯ ಜರೂರತ್ತು, ಗೈರತ್ತು
ತಟ್ಟದವರಿಗೆ ಇದೆಯೆಂದರೂ ಅಕ್ಷಿಪಟಲ
ಅದೊಂದು ಪೊರೆ
ಖರೆ, ಇಲ್ಲವೆಂದರವರಿಗೆ ಎದೆ
ನೀನು ನಡೆಯಲಿಲ್ಲ ಬರಿದೆ
ಇತಿಹಾಸ ಬರೆದೆ
ಆದರೇನು ಶೂನ್ಯ ನಿನ್ನ ಗಮ್ಯ?
ಆಗಲಿಲ್ಲವೇನು ನೀನು ದನಿ
ತಾರತಮ್ಯಗಳಿಗೆ, ಅದಮ್ಯ?
ಅಲ್ಲವದು ಪಾದಯಾತ್ರೆ, ಶವಯಾತ್ರೆ
ಅಲ್ಲವಾಗಿತ್ತಲ್ಲ ದೂರ ಅನತಿ
ಶವವಾಗಿ ಹೇಗಲೇರಿದ್ದ ನಿನ್ನ ಸತಿ
ಬಿಂಬಿಸುತಾ ನಮ್ಮೆಲ್ಲರ ಮೌಲ್ಯಗಳ ಅವನತಿ
ಸಾವು ಕಾರಣವಾದರೂ ನಿನ್ನ ನಡೆಗೆ
ಸಾವಿರಾರು ಮನಗಳಲಿ ನೀನು ಜೀವ ಪಡೆದೆ
ನೀನು ತುಳಿದ ಒಂದೊಂದೂ ಹೆಜ್ಜೆ
ತುಳಿಕೊಳಗಾದವರ ಪಾಲಿಗಾಗಲಿ
ಗೆಲುವಿನ ಗೆಜ್ಜೆ
ಧರೆಗಿಳಿಯಲೊಲ್ಲೆ ಎಂಬ ತಾರೆಗಳಿಗೆ
ಕಲಿಸುವಂತೆ ಪಾಠಗಳನು ಮೋಡ, ಮಳೆ
ಇನ್ನೊಮ್ಮೆ ನೀನು ಹೀಗೆ
ನಡೆಯುವಂತಾದರೆ ನೆರವಿಲ್ಲದೆ
ನಮ್ಮೆಲ್ಲರ ಭರವಸೆ, ಮೊರೆಗಳಿಗೆ
ಬಿದ್ದಂತೆ ತೆರೆ
ನಾ ಖರೀದಿಸಿತ
ತರಕಾರಿ ಚೀಲ ಎತ್ತಿದಾಗ
ಯಾಕೊ ನೆನಪಾಯಿತು
ಆತ್ಮ ಬಿಟ್ಟ ದೇಹ
ಶವವಾದಾಗ
ಹೆಣಭಾರವಂತೆ
ನಿಜವಿರಬಹುದೆ?
ಗೊತ್ತಿಲ್ಲ
ಆದರೂ
ಒಮ್ಮೆ ಸಿಕ್ಕರೆ
ನಾ ಕೇಳಬೇಕು
ಅವನನ್ನೇ ಅದೆ
ಶವ ಹೊತ್ತು ನಡೆದ
ಸತಿಯೊಂದಿಗಿನ
ಪ್ರೀತಿ, ಭಾಂದವ್ಯ
ಸಂಸಾರದ ಸವಿ
ನೆನಪಿಟ್ಟು ತನ್ನ
ಕತ೯ವ್ಯ ಮಾಡಿ
ಜಗಕೆ ಮಾದರಿಯಾದ
ಸರದಾರನನ್ನು!