ಎನ್ ಎಸ್ ಡಿ ಮೇಲಿನ ದಬ್ಬಾಳಿಕೆ
ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಾಡಿದ ಅವಮಾನ
ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ
ಬೆಂಗಳೂರಿನ ವಸಂತ ನಗರದಲ್ಲಿರುವ `ಗುರುನಾನಕ್ ಭವನ್’ ರಂಗಮಂದಿರವನ್ನು ರಾಷ್ಟ್ರೀಯ ನಾಟಕ ಶಾಲೆ ಕಳೆದ 15 ವರ್ಷಗಳಿಂದ ಬಾಡಿಗೆಗೆ ಪಡೆದು ಅಲ್ಲಿ ರಂಗಚಟುವಟಿಕೆಗಳನ್ನು ನಡೆಸುತ್ತಿದ್ದುದು ಸರಿಯಷ್ಟೇ. ಆದರೆ 3-4 ತಿಂಗಳಿಂದ ಬಾಡಿಗೆ ಕಟ್ಟದಿರುವುದನ್ನೇ ನೆಪವಾಗಿಸಿಕೊಂಡು ಗುಂಪೊಂದು ಇದೇ ಅಗಸ್ಟ್ 16 ರಂದು ಅಲ್ಲಿಗೆ ಧಾವಿಸಿ ಅಲ್ಲಿರುವ ರಂಗಪರಿಕರಗಳನ್ನು ಎತ್ತಿ ಹೊರಗೆ ಹಾಕಿ ಕಟ್ಟಡವನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ.
ಸರಕಾರದ ಒಂದು ಇಲಾಖೆ ಇನ್ನೊಂದು ಇಲಾಖೆಯ ಮೇಲೆ ದುಂಡಾವರ್ತಿ ತೋರಿರುವುದು ಖೇದಕರ ಸಂಗತಿ.
ಅದರಲ್ಲೂ ರಂಗಭೂಮಿ, ಸಂಸ್ಕೃತಿ ಮತ್ತು ಕಲೆಗಳನ್ನು ಪ್ರಸಾರ, ಪ್ರಚಾರ ಮಾಡುವ ತಾಣವನ್ನೇ ಗುರಿಯಾಗಿರಿಸಿರುವುದು ನಮ್ಮ ರಾಜ್ಯ, ದೇಶದಲ್ಲಿ ಸಂಸ್ಕೃತಿ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ತೋರಿಸುತ್ತದೆ.
ಇದು ಒಂದು ಕಟ್ಟಡದ ಮೇಲೆ ಮಾಡಿದ ದಬ್ಬಾಳಿಕೆಯಲ್ಲ; ಇಡೀ ಕಲೆ, ಸಾಹಿತ್ಯ, ಸಂಸ್ಕೃತಿಗೇ ಮಾಡಿದ ಅವಮಾನ. ಇದರಿಂದಲೇ ಅರ್ಥವಾಗುತ್ತದೆ; ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳ ಬಗ್ಗೆ ಆಳುವ ಸರಕಾರಗಳ ನಿರ್ಲಕ್ಷ್ಯ ಎಷ್ಟಿದೆ ಎನ್ನುವುದು. ಕಲೆ, ಸಾಹಿತ್ಯ. ಸಂಗೀತ, ಸಂಸ್ಕೃತಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿ, ಅವುಗಳ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕಾದುದು ಸರಕಾರದ ಕರ್ತವ್ಯ ಈ ಕರ್ತವ್ಯವನ್ನು ಮರೆತರೆ ದೇಶ ಸುಸಂಸ್ಕೃತವಾಗಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ಆಳುವ ಪ್ರತಿನಿಧಿಗಳಿಗೆ ಇರಬೇಕು.
ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುಳಿತು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದು. ಅದರ ಮೇಲೂ ಬಗೆಹರಿಯದಿದ್ದರೆ ಕೋರ್ಟು-ಕಛೇರಿಗಳು ಇದ್ದೇ ಇವೆ. ಇವಲ್ಲವನ್ನೂ ಬಿಟ್ಟು ಏಕಾಏಕಿ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಆ ದುಂಡಾವರ್ತಿ ನಡೆಸಿದ ಅಧಿಕಾರಿಗಳು, ನೌಕರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
ಪರ್ಯಾಯ ವ್ಯವಸ್ಥೆಯಾಗುವವರೆ ಈ ಕೂಡಲೇ ಕಟ್ಟಡವನ್ನು ಪುನಃ ಎನ್ ಎಸ್ ಡಿಯವರ ವಶಕ್ಕೆ ಕೊಡಬೇಕು. ಸರಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕದ ರಂಗಕಲಾವಿದರು. ಸಾಹಿತಿಗಳು, ಚಿಂತಕರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾದೀತು
। ಹೆಚ್ ಎಸ್ ದ್ಯಾಮೇಶ್ ಅವರಿಗೆ ತಿಳಿಸಿದಂತೆ..।
0 ಪ್ರತಿಕ್ರಿಯೆಗಳು