ಇತ್ತೀಚೆಗೆ ಬಂದ ಎರಡು ಮೈಲ್ ಗಳು ಇಲ್ಲಿವೆ. ಇದನ್ನು ಚರ್ಚಿಸೋಣವೇ ? ನಿಮ್ಮ ಅಭಿಪ್ರಾಯವನ್ನು avadhi.pusthaka@gmail.com ಗೆ ಕಳಿಸಿ. ಆರೋಗ್ಯಕರ ಚರ್ಚೆಯೊಂದನ್ನು ಬೆಳೆಸೋಣ. 
ಇಂಟರ್ನೆಟ್ ಕವಿಗಳು ಮತ್ತು ಇಂಟರ್ ನೆಟ್ ಓದುಗರನ್ನು ಇಂತಹ ಬ್ಲಾಗ್ ಗಳು ಸೃಷ್ಟಿಸುತ್ತಿವೆ. ಇದರ ಉಪಯೋಗ ಮಧ್ಯಮ ವರ್ಗದ ಮತ್ತು ಶ್ರೀಮಂತ ಜನರಿಗೆ ಮಾತ್ರ ಆಗುತ್ತಿದೆ.ಹಾಗೆಯೇ ಇದರ ಮೂಲಕ ಬಹುತೇಕ ಕೆಳವರ್ಗದ ಹಾಗೂ ಬಡವರ್ಗದ ಓದುಗರನ್ನು ತಲುಪಲು ಸಾಧ್ಯವಾಗುತ್ತಿಲ್ಲ.ಇದಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಇದೆಯೇ?
-ಸಿದ್ದಮುಖಿsiddamukhi@yahoo.com





ಸಿದ್ದಮುಖಿ, ಸುಬ್ರಮಣಿ.. ಅವರ ಪ್ರಶ್ನೆ ಒಳ್ಳೇ ಪ್ರಶ್ನೆ ಎತ್ತಿದ್ದಾರೆ.ಈ ಇಂಟರ್ನೆಟ್ ಬ್ಲಾಗ್್ಗಳಿಂದ ದೂರ ಉಳಿದಿರುವ ಅನೇಕ ಸಾಹಿತ್ಯಾಸಕ್ತರಿದ್ದಾರೆ. ಸಣ್ಣ ಸಣ್ಣ ಊರುಗಳಲ್ಲಿ ಕೂತವರಿಗೆ ಇದೆಲ್ಲಾ ತುಂಬಾ ಕಷ್ಟದ ಸಂಗತಿ.
ಅವರಿಗೆ ಈ ಲೇಖನಗಳು ಪುಸ್ತಕ ರೂಪದಲ್ಲಿ ಮುಟ್ಟಿದರೆ ಚೆನ್ನ. ಮೂರು ತಿಂಗಳಿಗೋ, ಆರು ತಿಂಗಳಿಗೋ ನಾಲ್ಕು ಸ್ನೇಹಿತರು ಕೂಡಿ ಇಲ್ಲಿನ ಬೆಸ್ಟ್ ಲೇಖನಗಳನ್ನು ಮುದ್ರಿಸಿ ಹೊರ ತರಬಹುದು. ಸಂಚಯ ಪತ್ರಿಕೆಯ ಹಾಗೆ ಚಿಕ್ಕ, ಚೊಕ್ಕವಾಗಿ ಪ್ರಕಟವಾದರೂ ಸಾಕು…
ನಾವೂ ಕೆಲ ಮಿತ್ರರು ಹಂಗಾಮ ರೀತಿಯಲ್ಲಿ ಒಂದು ಪುಟ್ಟ ಪತ್ರಿಕೆ ಮಾಡಬೇಕೆಂದು ಕೊಂಡಿದ್ದೆವು. ಆದರೆ ಅದನ್ನು ನೋಡಿಕೊಳ್ಳುವ ಹೊಣೆ, ಹಣಕಾಸು, ವಿತರಣೆ ಬಗ್ಗೆ ಯೋಚಿಸಿ ಸುಮ್ಮನಾಗಿದ್ದೆವು. ಬ್ಲಾಗ್ ನೋಡಿದ ಮೇಲೆ ನಮ್ಮ ತಲೆಗೆ ಹೊಳೆದಿದ್ದು ಮೇಲೆ ಹೇಳಿದ ಸಂಗತಿಯೇ.
ಪತ್ರಿಕೆಯಲ್ಲಿ ಬರೆಯಬೇಕು ಅಂದುಕೊಂಡಿದ್ದನ್ನೇ ಬ್ಲಾಗಿಗೆ ಬರೆಯುವುದು. ಮೂರು ತಿಂಗಳಿಗೋ, ಆರು ತಿಂಗಳಿಗೋ ಅದನ್ನು ಪುಟ್ಟ ಪತ್ರಿಕೆ ರೂಪದಲ್ಲಿ ಪ್ರಕಟಿಸುವುದು.
ಅದನ್ನೂ ಕಾರ್ಯರೂಪಕ್ಕೆ ತರಲಾಗಿಲ್ಲ. ಇದಕ್ಕೆ ಅವಧಿ ಮುಂದಾಗಬಹುದು
ಅನ್ನೋದಕ್ಕೆ ಇಷ್ಟೆಲ್ಲಾ ಪೀಠಿಕೆ…!
ಅವಧಿ ಈಗ ನಿಮ್ಮ ಸರದಿ…
ಪ್ರಿಯ ಅವಧಿ,
ನಾನೂ ಈ ಬಗ್ಗೆ ಬಹಳಷ್ಟು ಸಾರ್ತಿ ಯೋಚಿಸಿದ್ದಿದೆ. ಸೊಗಸಾಗಿ, ತೂಕವಾಗಿ ಬರೆಯುವ ಅದೆಷ್ಟೋ ಮಂದಿ ಗೆಳೆಯರು ದೂರದೂರುಗಳಲ್ಲಿದ್ದುಕೊಂಡು ಕಂಪ್ಯೂಟರ್ ಲಭ್ಯವಿಲ್ಲದೆ ಬ್ಲಾಗ್ ಲೋಕಕ್ಕೆ ಪರಿಚಿತರಾಗದೆ ಉಳಿದಿದ್ದಾರೆ. ಬರೀ ಬರೆಯುವರದ್ದು ಮಾತ್ರವಲ್ಲ, ಆಸಕ್ತ ಓದುಗ ವರ್ಗ ಕೂಡ ಉತ್ತಮ ಬರಹಗಳಿಂದ ವಂಚಿತವಾಗ್ತಿದೆ ಅನ್ನಿಸತ್ತೆ. ಅಲೆಮಾರಿಯವರು ಹೇಳೋ ಹಾಗೆ ಮೂರು ತಿಂಗಳಿಗೊಮ್ಮೆಯಾದರೂ ಸರಿ, ‘ಸಂಚಯ’ದ ರೀತಿ ಒಂದು ಚೆಂದದ ಪತ್ರಿಕೆ ತರುವ ಬಗ್ಗೆ ಯೋಚಿಸುವುದು ಒಳ್ಳೆಯದು. ಆದರೂ ನನ್ನ ಮತ ಮಾಸ ಪತ್ರಿಕೆಗೇ!
ನೀವೇ ಯಾಕೆ ಅಂಥದನ್ನು ಶುರು ಮಾಡಬಾರದು? ನಾವಂತೂ ನಮ್ಮ ನಮ್ಮ ಮಿತಿಗಳಲ್ಲಿ ನಿಮ್ಮ ಜೊತೆಯಾಗಲು ತಯಾರಿದ್ದೇವೆ.
ವಂದೇ,
ಚೇತನಾ ತೀರ್ಥಹಳ್ಳಿ
ನಮಸ್ಕಾರ.
ಸಿದ್ಧಮುಖಿಯವರು ಹೇಳುತ್ತ ಇರುವ ಮಾತುಗಳು, ಹಾಗೂ ಚೇತನಾ ಹೇಳುತ್ತಿರುವ ಮಾತುಗಳಿಗೆ ನನ್ನ ಸಹಮತ ಇದೆ. ಆದರೆ ಈ ಮೊದಲು ಬಹಳ ಕಡಿಮೆಯಿದ್ದ ಇಂಟರ್ನೆಟ್ ಕನ್ನಡ ಓದುಗರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಗಣನೀಯವಾಗಿ ಹೆಚ್ಚುತ್ತ ಇರುವುದು ಕೂಡ ಅಷ್ಟೆ ನಿಜ. ಬ್ಲಾಗು ವೆಬ್ಸೈಟುಗಳಿಗೆ ಭೇಟಿ ನೀಡುವವರು ಹೆಚ್ಚಾಗಿ ಸಮಯದ ಅಭಾವವಿದ್ದು ಪುಸ್ತಕಗಳನ್ನು ಓದಲಾಗದೆ ಈ ರೀತಿಯಲ್ಲಾದರು ಸುದ್ದಿ, ಸಾಹಿತ್ಯಗಳ ಜತೆ ಒಡನಾಟ ಇಟ್ಟುಕೊಳ್ಳಬಯಸುವವರು ಅನ್ನೋದನ್ನ ನಾವು ಮರೀಬಾರದು. ಯಾವುದಾದರು ಹೊಸ ಸಾಹಿತ್ಯಪ್ರಕಾರ ಚಿಗುರುವಾಗ ಅದರ ಜತೆಗಿನ ಅಸೆಟ್, ಲಯಬಿಲಿಟೀಗಳೂ ನಮ್ಮ ಮುಂದೆ ಬರುತ್ತವೆ. ಪುಸ್ತಕ ಪ್ರಕಟಣೆಯ ವಿಚಾರ ಒಳ್ಳೆಯದು – ಇದನ್ನು ತಲುಪಲಾರದ ಓದುಗರ ಮಟ್ಟಿಗೆ. ಬೇರೆ ಭಾಷೆಗಳ ಬ್ಲಾಗ್ ಸಾಹಿತ್ಯ ಪುಸ್ತಕ ರೂಪದಲ್ಲಿ ಹೊರಬಂದಿವೆ, ಬರುತ್ತಿವೆ. ಇಲ್ಲಿ ಒಂದು bottleneck ಇದೆ. ದೈನಂದಿನ ಸುದ್ದಿಗೆ ಸಂಬಂಧಿಸಿದ ಬರಹಗಳು ಕೆಲಸಮಯ ಕಳೆದ ಮೇಲೆ ತಮ್ಮ ಹೊಳಪನ್ನು ಕಳೆದುಕೊಳ್ಳುತ್ತವೆ, ಅದಲ್ಲದೆ, ಟೀವಿ, ನ್ಯೂಸ್ ಪೇಪರುಗಳ ಮುಖಾಂತರ ಅವುಗಳ ಬಗ್ಗೆ ಜನರಿಗೆ ಬೇಕಾದಷ್ಟು ಮಾಹಿತಿ ದೊರಕಿರುತ್ತದೆ. ಪ್ರಕಟಣೆಗೆ ನಾವು ತೀರ ಸೆಲೆಕ್ಟೀವ್ ಬರಹಗಳನ್ನ ಆಯ್ದುಕೊಳ್ಳಬೇಕಾಗುತ್ತದೆ – ಮಂಥ್ಲೀ ಮ್ಯಾಗಜೈನುಗಳ ಹಾಗೆ. ಪುಸ್ತಕ ರೂಪಕ್ಕೆ ಬರುವಾಗಲಂತೂ ಇನ್ನೂ ಚೂಸೀಯಾಗಿರಬೇಕಾಗುತ್ತದೆ. ಈ ಥರದ ಹಲವಾರು ವಿಚಾರಗಳನ್ನು ಚರ್ಚೆ ಮಾಡಿ, ಏನಾದರು ಅಡ್ಡಿಗಳಿದ್ದರೆ ನಿವಾರಿಸಿಕೊಂಡು ಮುಂದೆ ಕಾಲಿಡುವುದೊಳ್ಳೆಯದು. ಒಮ್ಮೊಮ್ಮೆ ಬ್ಲಾಗುಗಳು ಬ್ಲಾಗುಗಳಾಗಿರುವ ಕಾರಣಕ್ಕೇನೆ ಮುದ ಕೊಡುತ್ತವೆ. ಇನ್ನು ಕೆಲವೊಮ್ಮೆ ನಮ್ಮ ಸಹಬ್ಲಾಗಿಗರ ಬರಹಗಳನ್ನ ಮ್ಯಾಗಜೀನುಗಳಲ್ಲಿ ನೋಡಿದಾಗ ಸಂತಸವುಕ್ಕಿದ್ದಿದೆ. ಏನೆ ಇರಲಿ, ಬ್ಲಾಗು ಬರಹಗಳನ್ನ ಇಗ್ನೋರ್ ಮಾಡಲಂತೂ ಆಗುತ್ತಿಲ್ಲ ಅನ್ನುವುದು ಸಂತಸದ ವಿಚಾರ!! We are with you Avadhi!!
-ಟೀನಾ