ಲೆಟ್ ಪಾಲಿತ್ರೈವ್ @ ಯಾರೇ ಯಾನೇ ಕೂಗಾಡಲಿ
ಸಮಯ ಸಂಜೆ : ೭ ಗಂಟೆಗೆ
ಬೆಂಗಳೂರು: ಹವ್ಯಾಸಿ ರಂಗರತಂಡವಾದ ಸಾರ್ಕ್ ರಂಗ ತಂಡ ಮೇ 7 ರಂದು ಹಿರಿಯ ಪತ್ರಕರ್ತ ನಾಟಕಕಾರ ಕೆ ರಾಮಯ್ಯ ಅವರು ರಚಿಸಿರುವ ಲೆಟ್ ಪಾಲಿತ್ರೈವ್ ನಾಟಕ ನಗರದ ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಅನಿಲ್ ರೇವೂರು ನಿರ್ದೇಶಿಸಿದ್ದಾರೆ.
ಜಾಣ್ಮೆಯಿಂದ ತೌಡುಕುಟ್ಟುವ ಗೋಳೀಕರಣದ ಪರಿಣಾಮ ಹಳ್ಳಿಗಳನ್ನು ವ್ಯಾಪಿಸಿಕೊಂಡಿದೆ. ಸಾಂಸ್ಕೃತಿಕ ಜನಜೀವನ, ಸಂಪ್ರದಾಯ, ಅಸ್ಮಿತೆಗಳನ್ನು ಹುಡುಕುವ ಮತ್ತು ಇದಪ್ಪಾ ನಮ್ಮ ಬದುಕು ಎಂದು ನೆಮ್ಮದಿಯಿಂದ ಬಾಳುತ್ತಿರುವ ಎರಡು ಮಾದರಿಗಳಿವೆ. ಈಗ ಹಳ್ಳಿಗಳ ಬದುಕು ಮಾರ್ಕೆಟಿಂಗ್ ಮಾಡುವುದನ್ನು ಟಿವಿ ಮಾಧ್ಯಮಗಳು ರೂಢಿಸಿಕೊಳ್ಳುತ್ತಿವೆ. ಬದಲಾಗುತ್ತಿರುವುದು ಹಳ್ಳಿಗಳಲ್ಲ ಹಳ್ಳಿಯನ್ನು ಒಲ್ಲದ ಮನಸ್ಸುಗಳು. ಎಲ್ಲವೂ ಕಾರ್ಪೊರೇಟ್ ಆಗುತ್ತಿರುವ ಈ ಹೊತ್ತಿನಲ್ಲಿ ಷಿಟ್ ಯಾವುದು ಬುಲ್ಷಿಟ್ ಯಾವುದೆಂದು ನಿರ್ಧರಿಸಲಾಗದ ಕನ್ಫ್ಯೂಜನ್ನಿನಲ್ಲೆ ಇರುತ್ತೇವೆ. ಅಂಥ ಕನ್ಫ್ಯೂಷನ್ನಿನ ವಿಡಂಬಣೆಯೇ ಯಾರೇ ಯಾನೇ ಕೂಗಾಡಲಿ ನಾಟಕದ ಜೀವಾಳ. ಕಾರ್ಪೊರೇಟ್ ಹಳ್ಳಿಯಲ್ಲಿ ನಡೆಯುತ್ತಿರುವ ಯಾರು ದೊಡ್ಡವರು ಎಂಬ ರಿಯಾಲಿಟಿ ಶೋ ಮತ್ತು ಆ ಕುರಿತಾದ ಮಾಧ್ಯಮಗಳ ಇಲ್ಲಸಲ್ಲದ ಊಹಾಪೋಹಗಳ ಚರ್ಚೆಯ ಮೂಲಕ ನಾಟಕ ಆರಂಭವಾಗುತ್ತದೆ. ಅಂಥದ್ದೊಂದು ಪ್ರಾಜೆಕ್ಟ್ ರೂಪಿಸಿರುವ ತಂಡ ಹಳ್ಳಿಯನ್ನು ಮೀಡಿಯಾಗೆ ಬೇಕಾದಂತೆ ಹೈಟೆಕ್ ಮಾಡುತ್ತದೆ. ಕ್ಯಾಮರಾ ಕಣ್ಣು ಇಡೀ ಹಳ್ಳಿಯನ್ನು ತನಗೆ ಬೇಕಾದಂತೆ ಸೆರೆಹಿಡಿಯುತ್ತದೆ. ಅಜ್ಜಿ ತಿಪ್ಪ ಮತ್ತು ಕೋಣಗಳು ಕಾರ್ಪೊರೇಟ್ ಜಗತ್ತಿನ ಅರಿವಿದ್ದವರು. ತಮ್ಮ ಜೀವನಶೈಲಿಯ ಒಂದು ಭಾಗವಾಗಿ ಜ್ಞಾನಶಾಖೆಯ ಒಂದು ಮಜಲನ್ನಾಗಿ ಮಾತ್ರ ಉಪಯೋಗಿಸುವವರು. ಕಾರ್ಪೊರೇಟಿನ ಜಂಜಾವಾತಗಳಿಂದ ದೂರವುಳಿದು ತಿನ್ನುವ ಅನ್ನದಿಂದ ಹಿಡಿದು ಬದುಕುವ ರೀತಿಯವರೆಗೆ ತಮ್ಮನ್ನು ತಾವೇ ನಿಯಂತ್ರಿಸಿಕೊಳ್ಳುವ ಆದಿಮಜ್ಞಾನವುಳ್ಳವರು. ಸೈದ್ಧಾಂತಿಕ ನಿಲುವುಗಳು, ಭಿನ್ನಾಭಿಪ್ರಾಯಗಳ ಗೊಡವೆಯಿಲ್ಲ, ಭೂತಾನ್ ದೇಶದ (ಜಿಡಿಪಿ-ಜಿಡಿಹೆಚ್) ಹ್ಯಾಪಿನೆಸ್ನಂತೆ ಸಮೃದ್ಧವಾಗಿದ್ದಾರೆ.
ಗಂಡಭೇರುಂಡ ವಂಶದ ಘನತೆಯೂ, ಕಾಮ್ರೇಡಗಿರಿಯ ಹಪಹಪಿಯೂ, ಹಳ್ಳಿಹುಡುಗಿಯರ ಇಂಗ್ಲಿಷ ಹುಚ್ಚು, ಸಂವಾದದಲ್ಲಿ ಸಿದ್ಧಾಂತಗಳ ಮುಖವಾಣಿ ಹೊತ್ತು ಮಾತಾಡುವ ಕಾರ್ಯಕ್ರಮವೂ ಹೀಗೆ ನಾಟಕದುದ್ದಕ್ಕೂ ಷಿಟ್ ಬುಲ್ಷಿಟ್ಗಳದ್ದೆ ಕಾರಭಾರು.
0 ಪ್ರತಿಕ್ರಿಯೆಗಳು