ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ
ವಿನಾಯಕರಾಂ ಕಲಗಾರು
ವಿ ಮನೋಹರ್ ಆ ಸುದ್ದಿ ಕೇಳಿ ಕುಗ್ಗಿ ಹೋದರು.
ಬೆನ್ನು ನೋವು ರಾಜುವನ್ನು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿತ್ತು. ಸ್ನೇಹದ ಬುಗ್ಗೆಯಂತಿದ್ದ ಆ ಜೀವ ಅದಾಗಲೇ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭಿಸಿತ್ತು.
ಹಾಡು ಬರೆದುಕೊಟ್ಟು, ‘ರಾಜು ಮತ್ತೆ ಸಿಗುತ್ತೇನೆ, ನೀನು ರಾಗ ಸಂಯೋಜನೆ ಮಾಡಿರು. ನನಗೆ ಅರ್ಜೆಂಟ್ ಕೆಲಸ ಇದೆ’ ಎಂದು ಹೊರಟ ಮನೋಹರ್ಗೆ ಮತ್ತೆ ಆ ಮುಖ ನೋಡುವ ಭಾಗ್ಯವಿರಲಿಲ್ಲ. ಚಿರ ನಿದ್ರೆಗೆ ಜಾರುವ ಶಯ್ಯೆಯಲ್ಲಿ ರಾಜು ಮಲಗಿದ್ದರು. ಮನೋಹರ್ ಮುಂಚಿನ ದಿನ ಕಾರ್ಯನಿಮಿತ್ತ ಕಾಸರಗೋಡಿಗೆ ಹೋಗಿದ್ದರು. ಬರುವ ಹೊತ್ತಿಗೆ ರಾಜುವನ್ನು ಮರಳಿ ದೂರತೀರಕೆ ಕರೆದೊಯ್ದಿದ್ದ. ರಾಜು ಸಾವಿನ ಸುಳಿಯಲ್ಲಿ ಸಿಲುಕಿ, ವಿಲವಿಲ ಎನ್ನುತ್ತಿರುವ ಸುದ್ದಿ ಇವರ ಎದೆಗೆ ನಾಟಿತು… ಅಯ್ಯೊ ಆ ಹಾಡು…
ನೆನಪಿದೆಯಾ ಆ ದಿನಗಳು
ನೆನಪಿದೆಯಾ ಆ ಕ್ಷಣಗಳು
ಎಂಥ ಹಾಳು ಗಳಿಗೆಯೆಂದು
ಅಂದುಕೊಂಡ ಆ ದಿನ
ಇಂದು ನೆನೆಸಿಕೊಂಡ ಒಡನೆ
ಮೊಗದಿ ನಗೆಯ ಸಿಂಚನ
ಗೆಲುವು ಸಿಕ್ಕ ವೇಳೆ ಆಗುತ್ತಿದ್ದೆ ಮದನ ಮರ್ಕಟ
ಸೋತ ವೇಳೆ ಯಾರದೊ
ಸಂಚಿದೆಂಬ ಸಂಕಟ ಮೌನದಿ ಆರ್ಭಟ
ಅದು ಅರ್ಧ ಚಂದ್ರನಂತಾಗಿತ್ತು. ಪೂರ್ಣವಾಗಲು ಚರಣಗಳು ಬಾಕಿ ಇದ್ದವು. ಅಷ್ಟೊತ್ತಿಗಾಗಲೇ ಮರಣ ತನ್ನ ತೆಕ್ಕೆಗೆ ಬಾಚಿಕೊಂಡಿತ್ತು. ಕಾಸರಗೋಡಿನಿಂದ ಬರುವ ಹೊತ್ತಿಗೆ ಸಂಸ್ಕಾರವಂತನಾಗಿಬಿಟ್ಟಿದ್ದ!
ಮನೋಹರ್ ಮತ್ತೆ ಮರುಗಿದರು… ‘ರಾಜುಗೆ ಸಿನಿಮಾ ಸಂಗೀತ ನಿರ್ದೇಶಕ ಆಗಬೇಕು ಎಂಬ ಮತ್ತೊಂದು ಮಹದಾಸೆ ಇತ್ತು. ಖುಷಿ ಚಿತ್ರದ ‘ನಾನು ಒತ್ತಾರೆ ಎದ್ಬುಟ್ಟು, ಬೆಡ್ಕಾಫಿ ತಂದ್ಕೊಟ್ಟು, ನಿನ್ ಸೇವೆ ಮಾಡ್ತೀನ್ ಕಣೆ…’ ಹಾಡಿಗೆ ಕಂಠದಾನ ಮಾಡುವ ಮುನ್ನ: ಗುರುವೇ… ಒಂದಿಷ್ಟು ಕಾಮಿಡಿ ಹಾಡುಗಳನ್ನು ಬರೆದುಕೊಡಿ, ನಾನು ಅದಕ್ಕೆ ಸಂಗೀತ ಸಂಯೋಜಿಸುತ್ತೇನೆ. ಅದನ್ನು ಸಿನಿಮಾದಲ್ಲಿ ಅಳವಡಿಸೋಣ… ಎಂದು ಹಲ್ಲುಗಿಂಜಿದ್ದ. ಅದಕ್ಕೆ ನಾನು ಅಸ್ತು ಎಂದು ಸುಮಾರು ಎಂಟ್ಹತ್ತು ಹಾಡು ಬರೆದಿದ್ದೆ. ಸಿಕ್ಕಸಿಕ್ಕಲ್ಲೆಲ್ಲಾ: ರಾಜು ಅದು ರೆಡಿ ಇದೆ ಕಣೋ… ಎನ್ನುತ್ತಿದ್ದೆ. ಆದರೆ ಆತ ಗುರುವೇ ಇನ್ನೊಂದ್ಸಲ ಕೊಡಿ… ಎನ್ನುತ್ತಿದ್ದ…ಇಂದು ಅವು ನನ್ನ ಟೇಬಲ್ ಕೆಳಗೇ ಉಳಿದುಕೊಂಡಿವೆ… ಆಗಾಗ ಕಣ್ಣಿಗೆ ಬಿದ್ದು, ರಾಜು ನೆನಪಾಗುವಂತೆ ಮಾಡುತ್ತಿವೆ… ಎಂದು ನೋವಿನ ಗೋಪುರವಾಗುತ್ತಾರೆ ಮನೋಹರ್.
ಕೊನೆಯದಾಗಿ ಅವರು ರಾಜು ಮಾಡುತ್ತಿದ್ದ ಚೇಷ್ಟೆಯನ್ನು ನೆನೆನೆನೆದು ನಗುವಿನ ಜೋಕಾಲಿಯಾದರು…
***
ಒಮ್ಮೆ ವಚನಗಳ ಕಂಪೋಸಿಂಗ್ ನಡೆಯುತ್ತಿತ್ತು. ಎಲ್ಲ ಹೊಸ ಹುಡುಗರು. ದಿನಗಟ್ಟಲೇ ತಿದ್ದಿ, ತೀಡಿದರೂ ಮತ್ತದೇ ಬುದ್ಧಿ. ಮನೋಹರ್ ಮುಲು ಮುಲು ಎನ್ನತೊಡಗಿದರು. ಹಿಂದಿನಿಂದ ಬಂತು ಆ ಧ್ವನಿ… ಮನೋಹರ್ರು ಕಣ್ಣಲ್ಲೇ ಎಣ್ಣೆ ತೆಗೀತಾ ಇದ್ದಾರೆ…; ಥೇಟ್ ಶಿವಮೊಗ್ಗ ಸುಬ್ಬಣ್ಣನ ವಾಯ್ಸ್. ಮನೋಹರ್ ಗಪ್ ಅಂತ ಪೀಚೇ ಮೂಡ್. ಇನ್ನೇನು-ಸುಬ್ಬಣ್ಣ ಅವರೇ… ಎನ್ನಬೇಕು; ನೋಡುತ್ತಾರೆ ರಾಜು! ಆತ ಗಳಗಳಗಳ ನಗತೊಡಗಿದ್ದ.
ಅದೇ ರೀತಿ, ಇದೇ ಹಾಡನ್ನು ಸಿ. ಅಶ್ವತ್ಥ್ ಹಾಡಿದರೆ ಹೇಗಿರುತ್ತೆ ಎಂದು- ರೇ ರೇ ರೇ ರೇ ರಾ…. ಎಂದು ಆಕಾಶಕ್ಕೆ ಕೈ ಎತ್ತುತ್ತಿದ್ದ. ನಗೆಗಡಲಲ್ಲಿ ಕಂಬಳಿ ಹೊದ್ದು ಮಲಗುತ್ತಿದ್ದ!
***
ಅಂದೊಮ್ಮೆ ಹಾಡುಗಳ ರೀರೆಕಾರ್ಡಿಂಗ್ ನಡೆಯುತ್ತಿತ್ತು. ತಬಲಾ ವಾದಕರಾದ ಜರಾರ್ಲ್, ಶಿವಸತ್ಯ ಹಾಗೂ ರಾಜು ಇದ್ದರು. ಮೊದಲು ಮೈಕ್ ಲೆವೆಲ್ ನೋಡೋಣ, ಹಾಗೇ ಸುಮ್ಮನೇ ತಬಲಾ ನುಡಿಸಿ ಎಂದರು ಮನೋಹರ್. ರೂಮಿನ ಒಳಗಡೆ ರಾಜು ಬಳಗ ಇತ್ತು. ಮೊದಲು ಜರಾರ್ಲ್, ನಂತರ ಶಿವಸತ್ಯ ನುಡಿಸಿದರು. ಆದರೆ ಅದು ಕರ್ಕಶವಾಗಿ ಕೇಳಿಸುತಿತ್ತು. ಮನೋಹರ್ ಒಮ್ಮೆಲೇ ಸಾಕು ಸಾಕು ಎಂದು ಸುಮ್ಮನಾದರು.
ಕೊನೆಗೆ ರಾಜು ಸರದಿ. ಡುಂ…ಡುಂಂ… ಡುಂಂ… ಮನೋಹರ್ ಸೂಪರ್ ಗುರೂ… ಎಂದರು. ಆದರೆ ಒಳಗೆ ಕುಳಿತಿದ್ದವರೆಲ್ಲಾ ಮುಸಿ ಮುಸಿ ನಗುತ್ತಿದ್ದರು. ಮಹೋಹರ್ಗೆ ಪರಿಸ್ಥಿತಿ ಅರ್ಥವಾಗಲಿಲ್ಲ. ಎದ್ದು ಹೋಗಿ ನೋಡ್ತಾರೆ; ರಾಜು ಕೈ ಕಟ್ಟಿ ಕುಳಿತಿದ್ದ. ಬರೀ ಬಾಯಲ್ಲಿಯೇ ಡುಂಂ… ಡುಂಂ ಎನ್ನತೊಡಗಿದ್ದ!
***
ಸಂಗೀತ ಕಲಾವಿದರ ಮದುವೆ ಸಮಾರಂಭ, ಇತರೆ ಕಛೇರಿಗಳಲ್ಲಿ ಹಾಡಲು ಶುರುವಾಡಿದರೆ ಮಧ್ಯ ಮಧ್ಯ ಸ್ನೇಹಿತರ ಹೆಸರು ಸೇರಿಸಿ, ಕಲಸುಮೇಲೋಗರ ಮಾಡುತ್ತಿದ್ದ. ಹಾಗಂತ ರಾಗ, ತಾಳ, ಲಯ ತಪ್ಪುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹೊಂದುಕೊಳ್ಳುವಂತೆ ಬಳಸುತ್ತಿದ್ದ. ಪಕ್ಕ ವಾದ್ಯ ನುಡಿಸಲು ಕುಳಿತವರನ್ನು ಹಾಡುವ ಮಧ್ಯೆ ಮಾತನಾಡಿಸುತ್ತಾ ಮತ್ತೆ ಹಾಡಿನತ್ತ ಮರಳುತ್ತಿದ್ದ. ಇಷ್ಟೆಲ್ಲಾ ತರಲೆ, ತಂಟೆ ಮಾಡಿದರೂ ಕೊನೆಯಲ್ಲಿ ಜನ ಸಿಳ್ಳೆ ಹಾಕುತ್ತಿದ್ದರು. ಎರಡೂ ಕೈ ಜೋಡಿಸಿ ರೊಟ್ಟಿ ತಟ್ಟುತ್ತಿದ್ದರು.
-ಹೀಗೆ ಮನೋಹರ್, ರಾಜು ಅನಂತಸ್ವಾಮಿ ಜೊತೆ ಕಳೆದ ಕ್ಷಣಗಳನ್ನು ತಮ್ಮ ನೆನಪಿನಂಗಳದಲ್ಲಿ ಹರವಿಟ್ಟುಕೊಂಡರು. ರಾಜು ಕಂಡ ಕನಸು ಶಾಶ್ವತ, ಆತ ಹಾಕಿದ ಕಂಠ ಶಾಶ್ವತ ಎನ್ನುತ್ತಾರೆ…
Hats off to Raju ananthaswamy:(
Hats off to Raju ananthaswamy:(
We miss you a lot Raju Ananthaswamy
We miss you a lot Raju Ananthaswamy
ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ …..
ಸೋತ ವೇಳೆ ಯಾರದೊ ಸಂಚಿದೆಂಬ ಸಂಕಟ …..