ಎನ್ ರವಿಕುಮಾರ್ ಶಿವಮೊಗ್ಗ
ರಜನಿಕಾಂತ್ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇನೆ. ಆದರೆ…
ಖ್ಯಾತ ಚಿತ್ರನಟ ರಜನಿಕಾಂತ್ ಅವರು ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ನಿಜ, ಪ್ರಸ್ತುತ ರಾಜಕೀಯ ಬಗ್ಗಡವಾಗಿದೆ. ಅದರ ಶುದ್ಧೀಕರಣ ಆಗಲೇ ಬೇಕು. ಪಕ್ಷ ಆಧಾರಿತ ರಾಜಕೀಯ ವ್ಯವಸ್ಥೆ ಭಾರತದ್ದು . ಬಹುಪಕ್ಷಗಳು ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಹೆಚ್ಚು ಸತ್ವಶಾಲಿಯಾಗಲಿದ್ದು, ಜನರಿಗೆ ಆಯ್ಕೆಗಳ ಅವಕಾಶಗಳು ಸಿಕ್ಕಂತಾಗುತ್ತದೆ.
ರಜನಿಕಾಂತ್ ಅವರು ಸಿನಿಮಾದಲ್ಲಿ ಅಭಿಮಾನಿಗಳನ್ನು ಹುರುಪುಗೊಳಿಸಿದಂತೆ, ರೋಮಾಂಚನಗೊಳಿಸಿದಂತೆ, ಮೆಚ್ಚಿಸಿದಂತೆ ನಿಜ ಜೀವನದಲ್ಲಿ ಸಾಧ್ಯವಿಲ್ಲ.
ರಜನೀಕಾಂತ್ ಅವರಿಗೆ ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಮಹಾಸದಾಶಯವಂತೂ ಇದೆ ಎಂದು ನಾನೂ ಭಾವಿಸುತ್ತೇನೆ. ಆದರೆ ಭಾರತದಂತ ಸಂಕೀರ್ಣ ಸಾಮಾಜಿಕ ವಾತಾವರಣದಲ್ಲಿ ಈ ಸದಾಶಯವನ್ನು ಅನುಷ್ಠಾನಗೊಳಿಸುವುದು ಅಷ್ಟು ಸುಲಭವೂ ಅಲ್ಲ.
ರಾಜಕೀಯ ಪಕ್ಷ ಕಟ್ಟುವವರಿಗೆ ಮೊದಲು ತನ್ನ ಸುತ್ತ ಇರುವ ಸಾಮಾಜಿಕ ಸಂರಚನೆಯ ಸ್ಪಷ್ಟ ಅರಿವಿರಬೇಕು. ಸಂವಿಧಾನದ ಮೂಲ ಪರಿತತ್ವಗಳನ್ನು ಅರ್ಥೈಸಿಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಕಳೆದ ಮೂರು ದಿನಗಳಿಂದ ಈ ಎರಡು ವಿಚಾರಗಳ ಬಗ್ಗೆ ರಜನಿಕಾಂತ್ ಸಣ್ಣ ಟಿಪ್ಪಣಿಯನ್ನೂ ಮಾಡಿಲ್ಲ. ಬಹುಜನಸಮುದಾಯಗಳ ದೇಶದಲ್ಲಿ ರಜನಿ ರಾಜಕೀಯ ದೂರದೃಷ್ಟಿತ್ವ ಮತ್ತು ಸಾಮಾಜಿಕ,ಸಾಂಸ್ಕೃತಿಕ ಒಳನೋಟದ ಸ್ಪಷ್ಟತೆಯನ್ನು ಬಹಿರಂಗಪಡಿಸಬೇಕು.
ಅಂತಹ ಸ್ಪಷ್ಟತೆ ಅವರಿಂದ ಹೊರಬಿದ್ದಿಲ್ಲ. ( ಕರ್ನಾಟಕದಲ್ಲಿ ಉಪೇಂದ್ರ ಅವರದ್ದಂತೂ ಅದ್ವಾನದ ಮಾತೇ ಸರಿ) ಕೇವಲ ಜನರಿಗೆ ಒಳಿತು ಮಾಡಬೇಕು ಎಂದು ಒಂದು ಸಾಲಿನ ಘೋಷಣೆ ಕೂಗುತ್ತಾ ಜೈಕಾರ,ಶಿಳ್ಳೆಗಳ ನಡುವೆ ಉಬ್ಬಿಹೋಗಿವುದು ರಾಜಕೀಯ ಗುಣಲಕ್ಷಣವಾಗದು.
ಧರ್ಮನಿರಪೇಕ್ಷತೆ, ಸಾಮಾಜಿಕನ್ಯಾಯ, ಸೌಹಾರ್ದತೆ,ಬಡತನ, ನಿರುದ್ಯೋಗ, ಭ್ರಷ್ಟಾಚಾರದಂತಹ ಸದಾ ಕಾದ ಕಾವಲಿನಂತೆ ನಿಗಿ ನಿಗಿಸುವ ಸಂಗತಿಗಳ ಬಗ್ಗೆಯೂ ನಿಖರ ಸೈದ್ಧಾಂತಿಕ ನಿಲುವ ಪ್ರಕಟಿಸಬೇಕು.ಅಂತಹ ಸುಳಿವ ರಜನಿ ಅವರಿಂದ ಕಾಣುತ್ತಿಲ್ಲ.
ಬಿಜೆಪಿ,ಕಾಂಗ್ರೇಸ್ ಸೇರಿದಂತೆ ಇತರೆ ಎಲ್ಲಾ ಪಕ್ಷಗಳು ರಜನಿ ಅವರ ರಾಜಕೀಯ ಆರಂಭವನ್ನು ಎಚ್ಚರಿಕೆ ಯಿಂದ ಸ್ವಾಗತಿಸುತ್ತಿವೆ. ಅವರಿಗಿರುವ ಜನಪ್ರಿಯತೆಯನ್ನು ಲಾಭ ಮಾಡಿಕೊಳ್ಳಬಹುದಾದ ಅವಕಾಶಗಳಿಗೆ ಕಾದು ಕುಳಿತಿವೆ.
ಎಂದು ರಜನಿ ತಮ್ಮ ನಿಲುವು ಸ್ಪಷ್ಟ ಪಡಿಸುತ್ತಾರೋ ಅವತ್ತೆ ಅವರ ಬಣ್ಣ ತೊಳ್ಳೆಯುವ ಕೆಲಸ ಆರಂಭವಾಗಿ ಬಿಡುತ್ತದೆ.
Anyway ರಜನಿ ಅವರಿಂದ ನಾನಂತೂ ರಾಜಕೀಯ ಸಿದ್ಧಾಂತದ ಸ್ಪಷ್ಟ ನಿಲುವಿಗಾಗಿ ಕಾದಿದ್ದೇನೆ.
ಕಾಚ ಕಟ್ಟಿ ಅಖಾಡದ ಸುತ್ತ ಸೆಡ್ಡು ಹೊಡೆದುಕೊಂಡು ತಿರುಗುವವರೆಲ್ಲಾ ಫೈಲ್ವಾನರಾಗುವುದಿಲ್ಲ. ಆಖಾಡಕ್ಕಿಳಿದಾಗ ಹಾಕುವ ಪಟ್ಟು( ಡಾವ್) ಗಳು ಎಂತಹು ಎಂಬುದರ ಮೇಲೆ ಆತ ನ ನಿಜ ಬಣ್ಣ ಬಯಲಾಗುತ್ತದೆ.
All the best Mr.Rajanikanth.
0 ಪ್ರತಿಕ್ರಿಯೆಗಳು