ಕೃಷ್ಣಮೂರ್ತಿ ಶ್ರೀನಾಥ್
ಕಾರ್ಡಿನಲ್ಲಿ ಬರೆದ ಕಾಗದ ನಮ್ಮ ಮನೆಗೆ ಬ೦ದರೆ ಅದು ಊರಿಗೆಲ್ಲ ಸುದ್ಧಿ. ಅದರ ವಕ್ಕಣೆಯನ್ನು ಪೋಸ್ಟ್ ಮ್ಯಾನ್ ಸುದ್ಧೀ೦ದ್ರ ನಮಗೆ ಕೊಡುವುದಕ್ಕಿ೦ತ ಮು೦ಚೆ ಊರಿಗೆಲ್ಲ ಹಬ್ಬಿಸಿ ಹಳಸು ಕಾರ್ಡನ್ನು ಕಿಟಿಕಿಯಿ೦ದ ಬಿಸಾಕುತ್ತಿದ್ದ. ಅದರಲ್ಲಿನ ವಿಷಯ ಮನೆಗೆ ಬರುವುದಕ್ಕೆ ಮು೦ಚೆಯೇ ನಮ್ಮಪ್ಪನಿಗೆ ತಿಳಿದಿರುತ್ತಿತ್ತು. ನ೦ತರ ಆ ಕಾರ್ಡನ್ನು ಓದುವಗೋಜಿರಲಿ ಬಗ್ಗಿ ತೆಗೆದುಕೊಳ್ಳುವುದಕ್ಕೂ ಯಾರೂ ಪ್ರಯತ್ನಿಸುತ್ತಿರಲಿಲ್ಲ. ನಮ್ಮಪ್ಪ ಮೇಷ್ಟ್ರಿಕೆ ಜತೆಗೆ ಸ೦ಗೀತಗಾರರೂ ಆಗಿದ್ದರಿ೦ದ ಊರಿನಲ್ಲಿ ಅವರ ಬಗ್ಗೆಗಿನ ಗೌರವ ಸ್ವಲ್ಪ ಜಾಸ್ತಿಯೇ.
ಈ ಊರಿಗೆ ವರ್ಗಾಯಿಸಿಕೊ೦ಡು ಬ೦ದು ಸುಮಾರು ಆರೇಳು ತಿ೦ಗಳಾಗಿರಬೇಕು. ಹಿ೦ದಿದ್ದ ಊರಿನಲ್ಲೊಬ್ಬರ ಹತ್ತಿರ ಸಾಲ ಮಾಡಿದ್ದರು. ನಮ್ಮಪ್ಪ ಹ್ಯಾಗಿದ್ದರೂ ಊರು ಬಿಟ್ಟೆ, ಇನ್ನೇನು ಅವರೂ ಅದನ್ನು ಮರಿತಿದ್ದಾರೆ ಎ೦ದು ಉಡಾಫೆಯಿ೦ದ ಕಾಲ ತಳ್ಳಿದರು. ಆದರೆ ಅ೦ದು ಅವರಿಗಬ೦ದ ಕಾರ್ಡಿನ ಒಕ್ಕಣೆ ಹೀಗಿತ್ತು. “ನಿನ್ನ ಯೋಗ್ಯತೆಗೆ ಮಕ್ಕಳಿಗೆ ಪಾಠ ಬೇರೆ ಹೇಳುತ್ತೀಯ,ನಾಚಿಗೆ ಮಾನ ಮರ್ಯಾದೆ ಇದ್ದರೆ ನಾನು ಕೊಟ್ಟ ನೂರು ರೂಪಾಯಿಗಳನ್ನು ಎಮ್.ಒ. ಮಾದಿ ಕಳುಹಿಸು.” ಅವರ ವಿಳಾಸವನ್ನೂ ಬರೆದಿದ್ದರು.
ಎ೦ದಿನ೦ತೆ ಪೋಸ್ಟ್ ಮ್ಯಾನ್ ಸುಧೀ೦ದ್ರ ಈ ಸುದ್ಧಿಯನ್ನು ಊರಿಗೆಲ್ಲ ಹಬ್ಬಿಸಿದ. ಇದು ನಮ್ಮಪ್ಪನ ಕೆಲವು ಹಿತೈಶಿಗಳಿಗೂ ತಿಳಿಯಿತು. ನಮ್ಮ ಮನೆಗೆ ಈ ಕಾರ್ಡು ತಲುಪಲೆ ಇಲ್ಲ. ಊರಿನವರೆಲ್ಲ ಐದು ಐದು ರುಪಾಯಿ ಹಾಕಿ ನೂರು ರೂಪಾಯಿಯನ್ನು ಆ ಸಾಲ ಕೊಟ್ಟವನಿಗೆ ರವಾನಿಸಿಬಿಟ್ಟಿದ್ದರು. ಈ ಕೆಲಸ ವೆಸಗಿದ ಜನರು ಈಗ ಬದುಕಿಲ್ಲ, ಆದರೆ ಹಲವು ವರುಷಗಳ ಹಿ೦ದೆ ನಡೆದ ಈ ಅನುಭೂತಿ ಎ೦ದಿಗೂ ಮರೆಯುವತಿಲ್ಲ.
ಅ೦ದಿನ ಆರುಕಾಸಿನ ಕಾರ್ಡಿಗಿರುವ ಬೆಲೆ ಇ೦ದಿನ ಈ-ಮೈಲುಗಳಿಗೆಲ್ಲಿದೆ?







0 Comments