ನಿನ್ನೆ ಪ್ರಕಾಶ ರೈ ಅವರು ಬಳಸಿದ ವೇದಿಕೆಯನ್ನು ಗಂಜಲ ಹಾಕಿ
ಶುದ್ಧಿಗೊಳಿಸಿದರೆಂಬ ಸುದ್ಧಿ ಓದಿ ನೆನಪಾದದ್ದು.
ಎಚ್ ಎಸ್ ರೇಣುಕಾರಾಧ್ಯ
ಬಾಲ್ಯದಲ್ಲಿ ನನ್ನವ್ವ
ನಂಗೆ ಅದೆಷ್ಟು ಸಲ ಗಂಜಲ ಹಾಕಿ ಸ್ನಾನ ಮಾಡಿಸಿದ್ದಾಳೋ ಗೊತ್ತಿಲ್ಲ. ಯಾಕಂದ್ರೆ ಇಡೀ ಊರಲ್ಲಿ ಇದ್ದ ಎರಡು ಲಿಂಗಾಯ್ತರ ಮನೆ ಬಿಟ್ಟರೆ, ಉಳಿದೆಲ್ಲಾ ಮನೆಗಳು ಒಕ್ಕಲಿಗರು, ತಿಗಳರು, ದಾಸರು, ಗಾಣಿಗರು, ದಲಿತರ ಮನೆಗಳೆ ನಮ್ಮೂರಲ್ಲಿ.
ನನ್ನ ಆತ್ಮೀಯ ಗೆಳೆಯರಿದ್ದುದೆ ಇತರ ಸಮುದಾಯದಲ್ಲಿ. ಹಾಗಾಗಿ ನಾನು ಅವರ ಜೊತೆ ಆಡಿದರೆ ಏನೂ ಮಾಡ್ತಿರಲಿಲ್ಲ. ಅಕಸ್ಮಾತ್ ಅವರ ಮನೆಗಳಿಗೆ ಹೋಗಿ ಬಂದರೆ ಸಾಕು ನಮ್ಮವ್ವ ‘ಅಯ್ಯೊ ಮುರುವ ಎಲ್ಲಿಗೋಗಿದ್ಯೊ, ನಿನ್ ಮಕ ನಾಯ್ ತಿನ್ನ ಬಾಯಿಲ್ಲಿ ‘ ಅಂದು ಎಳ್ಕೊಂಡೋಗಿ ದನೀನ ಕೊಟ್ಟಿಗೆ ಪಕ್ಕದಲ್ಲೇ ಇದ್ದ ಬಚ್ಚಲಲ್ಲಿ ಕೂರಿಸಿ, ತಲೆಗೆ ಗಂಜಲವ ಶಾಂಪು ತರ ಹುಯ್ದು ಪರಪರ ಅಂಥ ಉಜ್ಜಿ ಸ್ನಾನ ಮಾಡಿಸಿನೇ ಒಳಿಕೆ ಕರ್ಕೊಂಡು ಹೋಗ್ತಾ ಇದ್ದದ್ದು.
ನಮ್ಮವ್ವ ಕಡು ಸಂಪ್ರದಾಯಸ್ಥೆ, ಹೊರಗಿನಿಂದ ಬಂದು, ಕೈ ಕಾಲು ತೊಳೆಯದೆ ಏನನ್ನು ಮುಟ್ಟುವಂತಿರಲಿಲ್ಲ. ಮುಟ್ಟಿದರೆ ಕತೆ ಮುಗೀತು ಇಡೀ ದಿನ ಬೈಗುಳ ಕೇಳಬೇಕಾಗಿತ್ತು. ನಮ್ಮಮ್ಮನ ಮಡಿಗೆ ಇವತ್ತೂ ಇಡೀ ಊರೆ ಹೆದರುತ್ತೆ.”ನಂಜಮ್ಮನ ಮನೆ ಬಾಗ್ಲು ಸವಾಸ ಬೇಡಪ್ಪ ಅಂತಾರೆ ಜನ”
ಇಂಥ ನಮ್ಮವ್ವನ ಜೊತೆಯಲ್ಲಿ ಕಳೆದ ನನ್ನ ಹದಿನಾರು ವರ್ಷಗಳಲ್ಲಿ (ಎಸ್ ಎಸ್ ಎಲ್ ಸಿ ವರೆಗಷ್ಟೆ ನಾ ಅಪ್ಪ ,ಅವ್ವನ ಜೊತೆ ಇದ್ದದ್ದು) ಅದೆಷ್ಟು ಸಾವಿರ ಬಾರಿ ಗಂಜಲ, sorry ಗೋಮೂತ್ರದಲ್ಲಿ ನನ್ನನ್ನು ಪರಿಶುದ್ದ ಮಾಡಲು ಪ್ರಯತ್ನಿಸಿದ್ದಳೋ ಗೊತ್ತಿಲ್ಲ.
ಆದರೆ ನಿಜವಾಗಿಯೂ ಅಷ್ಟು ಸಲ ಗಂಜಲದಲ್ಲಿ ಸ್ನಾನ ಮಾಡಿಸಿದರೂ ಪರಿಶುದ್ಧವಾಗದ ನನ್ನ ಜಾತಿ ಕೊನೆಗೆ ಪರಿಶುದ್ಧವಾದದ್ದು ನನ್ನ ಅಂತರ್ಜಾತಿ ವಿವಾಹದಿಂದಲೇ. ಈಗ ಬೇರೆ ಸಮುದಾಯಕ್ಕೆ ಸೇರಿದ ನನ್ನ ಮಡದಿಯನ್ನು ನನ್ನವ್ವ ಮಗಳಂತೆ ಕಾಣುತ್ತಾಳೆ. ಮತ್ತೆ ಇವತ್ತಿನವರೆಗೂ ಗಂಜಲದ ವಿಷಯ ತೆಗೆದಿಲ್ಲ. ತೆಗೆಯುತ್ತಲೂ ಇಲ್ಲ. ಬಹುಶಃ ನನ್ನವ್ವನ ಮನಸ್ಸೂ ಕೂಡ ಗಂಜಲದ ವಾಸನೆಯಿಂದ ಮುಕ್ತವಾಗಿರಬೇಕೀಗ.
ಬ್ಯೂಟಿಫುಲ್
super sir……….
ಕಣ್ತೆರೆಸುವ ಲೇಖನ