ದೂರದರ್ಶನ ಕೇಂದ್ರದ ಹಸನ್ಮುಖಿ, ಪ್ರಶಸ್ತಿ ವಿಜೇತ ನಿರ್ಮಾಪಕರೂ ಆಗಿದ್ದ ಸಿ ಎನ್ ರಾಮಚಂದ್ರ ಇನ್ನಿಲ್ಲ.
ಅವರ ಸಹೋದ್ಯೋಗಿ, ಕವಿ ಎಚ್ ಎನ್ ಆರತಿಯವರ ಆಪ್ತ ಬರಹ ಇಲ್ಲಿದೆ
ಎಚ್ ಎನ್ ಆರತಿ
ಕೆಲವರು ಹುಟ್ಟುವುದೇ, ಬದುಕುವುದೇ, ಉಸಿರಾಡುವುದೇ “ಸ್ನೇಹ”ಕ್ಕೋಸ್ಕರವೇನೋ ಎಂಬಂತಿರುತ್ತಾರೆ. ಅಂಥವರು ಎಲ್ಲೇ ಇರಲಿ, ಎಲ್ಲಿಗೇ ಹೋಗಲೀ, ಅವರ ಸುತ್ತ ನಗೆಯ ಸಿಂಚನವಿರುತ್ತೆ, ಅಸಾಧ್ಯ ಸೆಳೆತವಿರುತ್ತೆ ಹಾಗೇ ಹಲವು ಕಥೆಗಳ ಕಣಜವಿರುತ್ತೆ.
ಈ ರೀತಿಯೇ ನಮ್ಮ ಮನದಂಗಳದಲ್ಲಿ ಹಸಿರ ನೆನಪುಗಳನ್ನು ಉಳಿಸಿಹೋದವರು, ದೂರದರ್ಶನ ಕಂಡ ಹೃದಯವಂತ ಅಧಿಕಾರಿ ಸಿ.ಎನ್.ರಾಮಚಂದ್ರ.
ಸುಳ್ಯದಲ್ಲಿ ಕಾಡು ಎನ್ನಬಹುದಾದ ಜಾಗದಲ್ಲಿ ಕೃಷಿಯನ್ನು ನಂಬಿದ ಕುಟುಂಬದಲ್ಲಿ ಮೊದಲ ಮಗನಾಗಿ ಜನಿಸಿದ ರಾಮಚಂದ್ರ UPSCಯಲ್ಲಿ ಆಯ್ಕೆಯಾಗಿ ಆಕಾಶವಾಣಿಗೆ ಕಾರ್ಯಕ್ರಮ ನಿರ್ವಾಹಕರಾಗಿ 80ರ ದಶಕದಲ್ಲಿ ಸೇರಿದವರು, ಹಿಂತಿರುಗಿ ನೋಡಿದರು, ಪದೇ ಪದೇ!
ತನ್ನ ಊರು, ಜನ, ಗೆಳೆತನ, ಪ್ರೀತಿ, ಸಂಬಂಧಗಳು ಹೀಗೆ ಅವರನ್ನು ಕಾಡಿದ್ದೆಲ್ಲಾ ಕಥೆಗಳಾಗಿ ಹೊರಬಂದವು, ಕೆಲವೊಮ್ಮೆ ಕವಿಯೂ ಆದರೂ, ಬರಬರುತ್ತಾ ಜಗ್ಗಿ ವಾಸುದೇವರ ಸಖ್ಯದಿಂದ ಅಶಾಂತ ಸಂತರೂ ಆದರು.
59 ಸಾಯುವ ವಯಸ್ಸಲ್ಲ, ಹಾಗಾದರೆ ನಮಗೆ ಆತ್ಮೀಯರಾದವರು ಸಾಯುವ ವಯಸ್ಸು ಇಷ್ಟು ಅಂತ ಹೇಳಲಿಕ್ಕಾದರೂ ಸಾಧ್ಯವಾ???
ಭದ್ರಾವತಿ, ಚಿತ್ರದುರ್ಗ, ಬೆಂಗಳೂರು ಆಕಾಶವಾಣಿಯಲ್ಲಿ
“ಏಸೂರ ಕೊಟ್ಟರೂ, ಇಸೂರ ಕೊಡೆವು” ಎಂಬ ಸ್ವಾತಂತ್ರ್ಯ ಚಳುವಳಿಯ ಕುರಿತು ರಾಮಚಂದ್ರ ಅವರು ನಿರ್ದೇಶಿಸಿದ್ದ ನುಡಿರೂಪಕಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತ್ತು.
ಬೆಂಗಳೂರು ದೂರದರ್ಶನದ ಸಹಾಯಕ ನಿರ್ದೇಶಕರಾಗಿ ಅಪಾರ ಜನಾನುರಾಗವನ್ನು ಸಂಪಾದಿಸಿದ ಸಿ.ಎನ್.ಆರ್, ಎರಡು ವರ್ಷಗಳ ಹಿಂದೆಯಷ್ಟೇ ಬಡ್ತಿ ಪಡೆದು ಚೆನೈ ದೂರದರ್ಶನದ ನಿರ್ದೇಶಕರಾಗಿ ಹೋಗಿದ್ದರು, ವಾಪಾಸು ಬರಲಿಲ್ಲ, ಬಂದದ್ದು ಕೇವಲ ಅಳಿಸಲಾಗದ ನೆನಪಾಗಿ…
ಅವರ ಕಥೆಗಳಲ್ಲಿ ಮಾನವ ಸಂಬಂಧಗಳ ಸಂಕೀರ್ಣತೆಗಳು ಸೊಗಸಾಗಿ ಬಿಂಬಿತವಾಗಿವೆ… ‘ಸಮಾಧಿಯ ಮೇಲೊಂದು ಹೂ’ ನನಗಿಷ್ಟವಾಗಿದ್ದ ಕಥೆ!
“ಹಕ್ಕಿ ಚೆಲ್ಲಿದ ಬೀಜ” ಕಥಾಸಂಕಲನವೇ ಅವರ ಕೊನೆಯ ಕೃತಿ. ಅದಕ್ಕೆ ಕಾಂತಾವರ ಕನ್ನಡ ಸಂಘದ ಪ್ರಶಸ್ತಿ ಲಭಿಸಿತ್ತು.
ನಿನ್ನೆ ಚೆನೈನ ಅವರ ನಿವಾಸದಲ್ಲಿ, ಯಾವಾಗಲೂ ಚಡಪಡಿಕೆಯಲ್ಲಿರುವಂತೆ ತೋರುತ್ತಿದ್ದ ಅವರ ಹೃದಯ ನಡುರಾತ್ರಿಯಲ್ಲಿ ಹೃದಯಾಘಾತದಿಂದ ಸ್ತಬ್ಧವಾಯ್ತು!
ಇನ್ನು ಇಪ್ಪತ್ತು ದಿನಗಳಲ್ಲಿ ವೃತ್ತಿ ಜೀವನದಿಂದ ನಿವೃತ್ತಿ ಪಡೆಯಲಿದ್ದ ರಾಮಚಂದ್ರ, ಜೀವನದಿಂದಲೇ ನಿವೃತ್ತರಾದದ್ದು ವಿಪರ್ಯಾಸ…
ನಿಷ್ಕಲ್ಮಶ ಅಕ್ಕರೆ ಅವರಿಗೆ ಬಂದ ಬಳುವಳಿ, ಅಪರಿಮಿತ ಅಂತಃಕರಣ ಅವರ ಗೇಯ್ಮೆ, ನಿರ್ವ್ಯಾಜ ಗೆಳೆತನ ಅವರ ಶಕ್ತಿ, ಮಗುವಿನ ಮುಗ್ಧತೆ ಅವರ ಆಸ್ತಿ…
ಎಲ್ಲರ ಮನದಾಳದಲ್ಲಿ ಮಾಸದ ಮುಗುಳುನಗೆಯಾಗಿ ಉಳಿದ ಸಿ.ಎನ್.ಆರ್, we miss you for ever…
ಕಾಲನ ಕೋಲು ಇಷ್ಟು ಬೇಗ ಬೀಸಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ!
He was my close friend. May his soul rest in peace.
Thanks to Arathi for the timely writeup.We are all missing him.
ಹಕ್ಕಿ ಚೆಲ್ಲಿದ ಬೀಜಕ್ಕೆ ಮಾಸ್ತಿ ಕಥಾ ಪುರಸ್ಕಾರವೂ ಬಂದಿತ್ತು. ವೇದಿಕೆಯಲ್ಲಿ ಅವರೊಂದಿಗೆ ಚಿಂತಾಮಣಿ ಕೊಡ್ಲೆಕೆರೆ ಹಾಗು ನಾನು ನನ್ನ `ದೂರತೀರ’ದ ಪ್ರಕಾಶಕರಾದ ಪಲ್ಲವ ವೆಂಕಟೇಶ್ ಮಾಸ್ತಿ ಕಥಾ ಪುರಸ್ಕಾರ ಸ್ವೀಕರಿಸಿದ ಒಂದು ಸುಂದರ ನೆನಪು. ಎಲ್ಲಾ ಇಷ್ಟೆಯಾ ಅನಿಸುವ ವಿಷಾದ ಈಗ.
ಅನುಪಮಾ ಪ್ರಸಾದ್.
ಒಂಚೂರೂ ಸುಳಿವು ಕೊಡದೆ ನನ್ನನ್ನು ಬಿಟ್ಟುಹೋದ ಈ ಬಾಲ್ಯದ ಗೆಳೆಯನ ಮೋಸದಾಟದಿಂದಾಗಿ ನನ್ನಾತ್ಮಕ್ಕೆ ಮುಂದೆಂದೂ ಶಾಂತಿ ಸಿಗದು.
ಹಕ್ಕಿ ಚೆಲ್ಲಿದ ಬೀಜಕ್ಕೆ 2012ನೇ ಸಾಲಿನ ಮಾಸ್ತಿ ಕಥಾ ಪುರಸ್ಕಾರವೂ ಬಂದಿತ್ತು. ವೇದಿಕೆಯಲ್ಲಿ ಅವರೊಂದಿಗೆ ಚಿಂತಾಮಣಿ ಕೊಡ್ಲೆಕೆರೆ ಹಾಗು ನಾನು ನನ್ನ `ದೂರತೀರ’ದ ಪ್ರಕಾಶಕರಾದ ಪಲ್ಲವ ವೆಂಕಟೇಶ್ ಮಾಸ್ತಿ ಕಥಾ ಪುರಸ್ಕಾರ ಸ್ವೀಕರಿಸಿದ ಒಂದು ಸುಂದರ ನೆನಪು. ಎಲ್ಲಾ ಇಷ್ಟೆಯಾ ಅನಿಸುವ ವಿಷಾದ ಈಗ.
ಅನುಪಮಾ ಪ್ರಸಾದ್.