ಗಣೇಶ್ ಕೋಡೂರು
ನಮ್ಮ ಬದುಕಿನ ಬಗ್ಗೆ ನಮ್ಮಲ್ಲೊಂದು ಕ್ಲಾರಿಟಿ ಎನ್ನುವುದೇನೋ ಇರುತ್ತದೆ.
ಆದರೂ ಕೆಲವರು ಮಾತಿಗೆ ಸಿಕ್ಕಾಗ ನಮ್ಮ ಕ್ಲಾರಿಟಿ ಸಣ್ಣಗೆ ಅಲುಗಾಡುತ್ತದೆ; ನಮ್ಮ ಬದುಕಿನ ಬಗ್ಗೆ ನಮ್ಮಲ್ಲೊಂದು ಡೌಟು ಹುಟ್ಟಿಕೊಳ್ಳುತ್ತದೆ.
ಇದು ಕೆಲವು ದಿನಗಳ ಡಿಸ್ಟರ್ಬೆನ್ಸ್ ಹೌದಾದರೂ ಆ ಕ್ಷಣಕ್ಕೆ ನಮ್ಮ ಬದುಕಿನ ರೀತಿಯ ಬಗ್ಗೆ ನಮ್ಮಲ್ಲೇ ಹುಟ್ಟಿಕೊಳ್ಳುವ ಈ ಡೌಟು ಅಷ್ಟು ಒಳ್ಳೆಯದಲ್ಲ. ಮತ್ತು ಈ ಡೌಟು ಇದ್ದಷ್ಟು ದಿನ ನಮ್ಮ ಬದುಕನ್ನು ಬೇರೆಯವರೆದುರು ಸಮರ್ಥಿಸಿಕೊಳ್ಳಲಿಕ್ಕೂ ನಾವೊಂದಿಷ್ಟು ಯೋಚಿಸುವಂತಾಗುತ್ತದೆ.
ಅದೇ ನನ್ನ ನೆಚ್ಚಿನ ಕಾದಂಬರಿಕಾರರಾದ ಕೆ.ಟಿ.ಗಟ್ಟಿಯವರು ದಿನಕ್ಕೊಮ್ಮೆ ಅಲ್ಲದೇ ಹೋದರೂ ವಾರಕ್ಕೊಂದೆರಡು ದಿನ ಅರ್ಧರ್ಧ ಗಂಟೆ ಮಾತಿಗೆ ಸಿಕ್ಕರೂ ಸಾಕು, ನಾವು ಬದುಕುತ್ತಿರುವ ರೀತಿಯ ಬಗ್ಗೆ ನಮ್ಮಲ್ಲಿ ಕ್ಲಾರಿಟಿ ಮಾತ್ರವಲ್ಲ ಹೆಮ್ಮೆ ಕೂಡಾ ಆಗುತ್ತದೆ.
ಇವತ್ತು ನನ್ನ ನೆಚ್ಚಿನ ಮತ್ತು ನನ್ನ ಬರವಣಿಗೆಯ ಬದುಕಿಗೆ ಕಾರಣವಾದ ಕೆ.ಟಿ.ಗಟ್ಟಿ ಅವರನ್ನು ಅವರ ಮಂಗಳೂರಿನ ಮನೆಯಲ್ಲಿ ಮೊದಲ ಬಾರಿ ಭೇಟಿಯಾಗಿ, ಅವರೊಂದಿಗೆ ಸುಮಾರು ಒಂದೂವರೆ ಗಂಟೆ ಮಾತುಕತೆಯಾಡಿ ಹೊರಟ ಮೇಲೆ ನನಗೂ, ರಮಾಕಾಂತಿಗೂ ಹೀಗನ್ನಿಸಿತು.
ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲೊಬ್ಬರಾದ ಕೆ.ಟಿ.ಗಟ್ಟಿ ಅವರೊಂದಿಗೆ ಇವತ್ತು ಕಳೆದ ಕ್ಷಣಗಳು ಈ ಬದುಕಿನಲ್ಲಿ ಸದಾ ನೆನಪಿಡುವಂತಹದ್ದು. ಮತ್ತು ಈ ಬದುಕಿಗೆ ಸಾರ್ಥಕತೆಯನ್ನು ನೀಡುವಂತಹದ್ದು.
ಇಂತಹ ಕಾದಂಬರಿಕಾರರ ಕಾದಂಬರಿ ’ಅಂತರಂಗದ ಅತಿಥಿ’, ನಾನು ಕೆಲಸ ಮಾಡುತ್ತಿರುವ ‘ನಿಮ್ಮೆಲ್ಲರ ಮಾನಸ’ದಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ ಎನ್ನುವುದು ನನಗೂ ಹಾಗೂ ಮಾನಸಕ್ಕೂ ಬಹುದೊಡ್ಡ ಹೆಮ್ಮೆ.
ಅಂದಹಾಗೇ, ನಾನು ನನ್ನ ನೆಚ್ಚಿನ ಲೇಖಕರನ್ನು ಅವರ ಬರಹಗಳಲ್ಲೇ ಭೇಟಿಯಾಗಲು ಇಷ್ಟ ಪಡುತ್ತೇನೆಯೇ ಹೊರತು, ನೇರಾನೇರ ಅಲ್ಲ. ಯಾಕೆಂದರೆ ಅಚಾನಕ್ಕಾಗಿ ಭೇಟಿಯಾದ ಕೆಲವು ನೆಚ್ಚಿನ ಲೇಖಕರು ಬರೆಯುವಾಗ ಮುಖವಾಡ ಹಾಕಿಕೊಂಡಿರುತ್ತಾರೆ ಎನ್ನುವುದು ನನ್ನ ಅನುಭವಕ್ಕೆ ಬಂದು, ಯಾಕಾದರೂ ಇವರನ್ನು ಭೇಟಿಯಾದೆನೋ ಅನ್ನಿಸಿ, ಕೆಲವು ವರ್ಷಗಳ ಕಾಲ ಅವರ ಬರಹಗಳನ್ನೂ ಓದಲಾಗದ ಸ್ಥಿತಿ ನನ್ನದಾಗಿತ್ತು.
ಆದರೆ ಗಟ್ಟಿ ಅವರೆಂದರೆ ಗಟ್ಟಿಯೇ. ಅವರು ಬರೆದರು ಮತ್ತು ಬರೆದಿದ್ದನ್ನೇ ಇವತ್ತಿಗೂ ಬದುಕುತ್ತಿದ್ದಾರೆ. ಆದ್ದರಿಂದಲೇ ಗಟ್ಟಿ ದಂಪತಿಗಳ ಭೇಟಿ ಬದುಕಿಗೆ ಇನ್ನಿಲ್ಲದ ಖುಷಿಯನ್ನೂ ತುಂಬಿದೆ. ನನ್ನ ಬದುಕಿನ ಬಗ್ಗೆ ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ, ನಂಬಿಕೆ ಹಾಗೂ ಧೈರ್ಯವನ್ನೂ ತುಂಬಿದೆ.
ಭೇಟಿಯಾದ ಕೆಲವು ನೆಚ್ಚಿನ ಲೇಖಕರು ಬರೆಯುವಾಗ ಮುಖವಾಡ ಹಾಕಿಕೊಂಡಿರುತ್ತಾರೆ ಎನ್ನುವುದು ಸತ್ಯದ ಮಾತು. ಬರಹಗಾರ ಬದುಕಿದ್ದನೇ ಬರೆಯಬೇಕು, ಬರೆದದ್ದನ್ನೇ ಬದುಕು ಬೇಕು. ಧನ್ಯವಾದಗಳು ಗಣೇಶ ಕೋಡೂರ ಅವರಿಗೆ.