ಚಿತ್ತ ಕದಡಿದ ನೀರು…
ಡಾ. ಪ್ರೇಮಲತ ಬಿ.
ಬೆಳ್ಳಂಬೆಳಗು ನಸುನಕ್ಕು
ಮತ್ತೆ ಬಂದಿಹೆನೆಂಬ ಹೊತ್ತಲ್ಲಿ
ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ
ವರ್ತಮಾನವ ಕದಡದಿರಿ
ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ
ನೋವು ನಲಿವುಗಳ ಚಿತ್ತಾರದ ರಂಗೋಲಿ
ಹಾಲುಕ್ಕಿ ಹರಿದ ಬದುಕಿನಲಿ
ಒಂದೊಂದೇ ಪಾರಿಜಾತಗಳು ಜಾರಿ ಉದುರಿ
ಭೂತದ ನೆರಳುಗಳಿಗೆ ಇಂದು
ಹೊಸರೆಕ್ಕೆ ಕಟ್ಟಿ
ಅಗಲಿಕೆಯ ನೋವು, ವಿರಹದ ಕಾವು
ತುಂಬಿಹ ಬೆಂಗಾಡಿನ
ಮಾಯೆ ಮರುಳಿಗೆ ಹೊತ್ತೊಯ್ಯದಿರಿ
ಬರಗಾಲದ ಬಿರು ಬಿಸಿಲಿಗೆ
ನಿಡುಸುಯ್ದ ಈ ಇಹಕ್ಕೆ
ಮರಳಿ ಅರಳುವ ಬಯಕೆ
ನೀರು ಹುಯ್ಯುವವರಿಲ್ಲ
ಒಂಟಿ ಮರಕ್ಕೆ
ಸಂಜೆ ಗಾಳಿಯ ಹಿತ
ಆಳಕ್ಕೆ ಇರಿದ ಕೆಂಪಿನಲಿ
ಮನಸ್ಸರಳಿ ಹಿತವಾಗಿ ನರಳುತ್ತದೆ
ಅವನೆದೆ ಕಾವಿನಲಿ ಕರಗುತ್ತದೆ
ಸೆಟೆದ ನರನಾಡಿಗಳು ಅದುರಿ
ಹಗುರಾಗಿ ಬಿಡುತ್ತವೆ
ಕೂಡಿ ಕಳೆದುಹೋಗುವ ತವಕದಲಿ
ಕಣ್ಣೆವೆ ಭಾರವಾಗುವ ಹೊತ್ತಲ್ಲಿ
ನಿಮ್ಮ ಒತ್ತಾಸೆಯಿರಲಿ ನನಗೆ
ನನ್ನ ಬಿಡದಿರಿ,ಬಿಡದೆ ಕಾಡದಿರಿ
ಅಣಕಿಸದಿರಿ ನೆನಪುಗಳೆ,
ಕ್ಷಣಭಂಗುರದ ಬದುಕಿನಲಿ
ಜೀವಮುಪ್ಪಿನ ಬಿಸುಪಿನಲಿ
ಬದುಕು -ಚಿತ್ತ ಕದಡಿದ ನೀರು … !
0 ಪ್ರತಿಕ್ರಿಯೆಗಳು