‘ಅವಧಿ’ಯಲ್ಲಿ ‘ಏಲಾವನ’ ಅಂಕಣ ಬರೆಯುತ್ತಿದ್ದ ಕವಯತ್ರಿ ನಾಗಶ್ರೀ ಶ್ರೀರಕ್ಷಾ ಇನ್ನಿಲ್ಲ.
ತೀವ್ರ ಅನಾರೋಗ್ಯದ ನಂತರ ಅವರು ಇಂದು ಕೊನೆಯುಸಿರೆಳೆದರು.
ಇತ್ತೀಚಿಗೆ ತಾನೇ ಅವರ ‘ನಕ್ಷತ್ರ ಕವಿತೆಗಳು’ ಪ್ರಕಟವಾಗಿತ್ತು.
‘ಅವಧಿ’ಯಲ್ಲಿನ ಏಲಾವನ ಅಂಕಣ ಸಾಕಷ್ಟು ಜನಪ್ರಿಯವಾಗಿತ್ತು. ತಾವು ಕಂಡ ಲೋಕವನ್ನು, ವ್ಯಕ್ತಿಗಳನ್ನು ಬಿಚ್ಚಿಡುತ್ತಿದ್ದ ಅವರ ಬರವಣಿಗೆ ಕಾಡುವಂತಿತ್ತು.
ಅವರ ನಿಧನಕ್ಕೆ ಅವಧಿ ತೀವ್ರ ಶೋಕವನ್ನು ವ್ಯಕ್ತಪಡಿಸುತ್ತದೆ
೨೦೧೬ ಮೇ ೨೦ರಂದು ಪ್ರಕಟವಾದ ಅವರ ಹಾಡಬೇಡ ಸಂತನೇ ಏನು ಕೇಳಿಸುತ್ತಿಲ್ಲ ಕವಿತೆ ಅವರ ನೆನಪಿಗಾಗಿ..
ಹಾಡಬೇಡ ಸಂತನೇ
ಏನೂ ಕೇಳಿಸುತ್ತಿಲ್ಲ
ನಾನು ಇರುವುದು ಸುಳ್ಳು ಎನಿಸುತ್ತಿದೆ
ನಿನ್ನ ಹಾಡುವ ಧ್ವನಿಗಳು
ನನ್ನನ್ನು ಇಲ್ಲವಾಗಿಸಿದೆ
ಯಾವುದೋ ನೀರ ಆಳದಿಂದ,
ಆಕಾಶದ ಹೊಕ್ಕುಳಿಂದ ಮಿಂಚೊಂದು
ಸುಮ್ಮನೆ ಸುತ್ತ ಹರಡಿಕೊಂಡಿದೆ
ನಿನ್ನ ತರಾನಗಳು
ನನ್ನ ಸುಖದ ಕಣ್ಣೀರಲ್ಲಿ
ಹರಿಯುತಿದೆ
ಹಾಡಬೇಡ ಸಂತನೇ
ಏನೂ ಕೇಳಿಸುತಿಲ್ಲ
ಮಲಗಿರುವೆ ನಿನ್ನ ಮಾಯದ ಮಡಿಲಲ್ಲಿ
ಸಾಯುವ ಕಡೆಯ ಘಳಿಗೆಯ
ಸುಖದ ಕೊನೆಯಲ್ಲಾದರೂ
ನಿಲ್ಲಿಸಿಬಿಡು
ಹಾಡಬೇಡ ಗಂಧರ್ವನೇ
ಬೆಟ್ಟದ ಕೆಳಗೆ
ಯಾವುದೋ ನದಿಯ ಸುಳಿಯ ಒಳಹೊಕ್ಕಿರುವೆ
ನಿಲ್ಲಿಸು ಒಮ್ಮೆ
ದುಃಖದ ಕೊನೆಯ ತುಂಡೊಂದು
ಉಳಿದು ಹೋಗಿದೆ
ಮತ್ತೆ ಬೇಡ
ಬೇಡ ಈ ಲೋಕದ ಪ್ರೇಮದೆಳೆಗಳು
ಇಲ್ಲೇ ಮುಗಿದು ಬಿಡಲಿ ಎಲ್ಲವೂ
ಕರಗಿ ಹೋಗಿರುವೆ
ನಟ್ಟ ನಡುವೆ ಒಂದು ಕಡೆ
ಸಣ್ಣ ಬೆಳಕಾಗಿಸು
ನಾನು ಇರುವ ಭ್ರಮೆಯನ್ನೇ
ಕಳಚಿಬಿಡು
ಎಂ ಎನ್ ವ್ಯಾಸ ರಾವ್ ಅವರು ಕೂಡಾ ಇಂದೇ ನಿಧನರಾಗಿರುವುದು ಇನ್ನಷ್ಟೂ ಆಘಾತಕಾರಿ!
ಸುದ್ಧಿ ಕೇಳಿ ಬಹಳ ಬೇಜಾರಾಯಿತು. ಅವರ ನಕ್ಷತ್ರ ಕವಿತೆಗಳು ಸಂಕಲನ ತುಂಬಾ ಚೆನ್ನಾಗಿದೆ. ಬಹಳಷ್ಟು ಭರವಸೆ ಇಟ್ಟಿದ್ದ ಬರಹಗಾರ್ತಿ. RIP Nagashri