
ಸಿ.ಎಸ್.ದ್ವಾರಕಾನಾಥ್
ಜನಕವಿ ಗದ್ದರ್ ಬರೆದು ಹಾಡಿದ ಹಾಡೊಂದು ನೆನಪಾಗುತ್ತಿದೆ.. ಅದರ ಸಾಲುಗಳು ಮರೆತುಹೋಗಿವೆ ಆದರೆ ಅದು ದ್ವನಿಸಿದ ಅರ್ಥಗಳು ನನ್ನೆದೆಯಲ್ಲಿವೆ. “ಅನ್ನಾ.. ಪೋಲಿಸನ್ನ..” ಎಂದು ಆರಂಭವಾಗುವ ಹಾಡು ಪೋಲೀಸರು ಪ್ರತಿಕ್ಷಣ ಅನುಭವಿಸುವ ಅವಮಾನ.ಕ್ರೌರ್ಯ, ನೋವು, ಅಸಹಾಯಕತೆಗಳನ್ನು ಪದರಪದರವಾಗಿ ಅನಾವರಣಗೊಳಿಸುತ್ತದೆ..
ಆಗ ಇದೇ ಗುಂಗಿನಲ್ಲಿದ್ದ ನನಗೆ ಮೇಷ್ಟ್ರು(ಲಂಕೇಶ್) ಪೋಲೀಸ್ ಆರ್ಡರ್ಲಿಗಳ ಬಗ್ಗೆ ವರದಿ ಮಾಡಲು ಹೇಳಿದ್ದರು.. ನಾನು ಪೋಲಿಸ್ ಆರ್ಡರ್ಲಿ ಗಳು ದೊಡ್ಡಧಿಕಾರಿಗಳ ಮನೆಯಲ್ಲಿ ಪಡುವ ಪಡಿಪಾಟಲುಗಳ ಬಗ್ಗೆ ‘ಲಂಕೇಶ್ ಪತ್ರಿಕೆ’ ಯಲ್ಲಿ ಒಂದು ಸುದೀರ್ಘ ವರದಿ ಮಾಡಿದ್ದೆ. ಇದಕ್ಕೆ ಎಲ್ಲಾ ವಿವರ ಒದಗಿಸಿದವರು
ಬಿ.ಕೆ.ಶಿವರಾಂರವರು, ಬಹುಷಃ ಪೋಲಿಸರ ನೋವುಗಳ ಬಗ್ಗೆ ಬಂದ ಮೊದಲ ವಿಸ್ತೃತ ಬರಹವಿದಿರಬಹುದು.. ಆಗಿನ ಅನೇಕ ಮಂದಿ ಮಾನವೀಯ ಪೋಲಿಸ್ ಅಧಿಕಾರಿಗಳು ಇದಕ್ಕೆ ಸ್ಪಂದಿಸಿದ್ದು ನೆನಪಿದೆ.
ಇದರ ನಂತರವೂ ನಾನು ಪೋಲೀಸರ ಸ್ಥಿತಿಗತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇನೆ.. ಟ್ರಾಫಿಕ್ ನಲ್ಲಿ ದಿನವಿಡೀ ಕಪ್ಪು ಹೊಗೆ ಉಸಿರಾಡುವುದು.. ಕರ್ಪ್ಯು, ಗಲಭೆ ಸಂದರ್ಭಗಳಲ್ಲಿ ಅನ್ನ ನೀರಿಲ್ಲದೆ ಬೀದಿಯಲ್ಲೇ ಬಿಸಿಲು, ಮಳೆ, ಬಿರುಗಾಳಿಯಲ್ಲೇ ಬಿದ್ದಿರುವುದು.. ಸದಾ ಹಂತ ಹಂತದ ದೊಡ್ಡದಿಕಾರಿಗಳ ಬೂಟಿನಡಿ ನಲಗುವುದು.. ಸ್ಲಂಗಿಂತಲೂ ಕಡೆಯದಾದ ‘ಕ್ವಾರ್ಟಸ್’ ಗಳಲ್ಲಿ ಪ್ರಾಣಿಗಳಂತೆ ಬದುಕುವುದು..
‘ಕನಿಷ್ಟ ಪೇದೆ’ ಎಂದು ನಗೆಪಾಟಲಿಗೆ ಈಡಾಗುವುದು.. ಎಲ್ಲೋ ಪಡೆಯುವ ಪುಡಿಗಾಸನ್ನೇ ದೊಡ್ಡ ಲಂಚಗಾರನಂತೆ ಅಪಾದಿಸುವ ಸಮಾಜದ ಮುಂದೆ ತಲೆಬಾಗಿ ನಿಲ್ಲುವುದು.. ಅವರಿಗಾಗುವ ಎಲ್ಲಾ ನೋವು, ಆಕ್ರೋಶಗಳನ್ನು ನುಂಗಿಕೊಂಡು ದನಿ ಎತ್ತದಂತೆ ಬದುಕುವುದನ್ನು ಕಂಡಿದ್ದೇನೆ..
ನಾನು ಕಂಡಂತೆ ಕಳೆದ ನಲವತ್ತು ವರ್ಷಗಳಲ್ಲಿ ಇವರ ಬದುಕಿನಲ್ಲಿ ಯಾವ ಬದಲಾವಣೆಗಳೂ ಆಗಿಲ್ಲ.. ಪುಣ್ಯಾತ್ಮ ದೇವರಾಜ ಅರಸರು ಇವರಿಗೆ ಚಡ್ಡಿ ತೊಲಗಿಸಿ ಪ್ಯಾಂಟ್ ಕೊಡಿಸಿದ್ದನ್ನು ಬಿಟ್ಟರೆ..
ಇವರ ಅಸಹಾಯಕತೆ ಕಂಡು ಯಾರೂ ಇವರಿಗಾಗಿ ಪ್ರತಿಭಟಿಸಲಿಲ್ಲ.. ಇವರ ನೋವುಗಳಿಗೆ ಸ್ಪಂದಿಸಲಿಲ್ಲ.. ಕಡೆಗೆ ಇವರೇ ಪ್ರತಿಭಟಿಸಲು ಮುಂದಾದಾಗ ‘ರಾಜಕೀಯ ಪ್ರೇರಿತ’ ಎನ್ನುತಿದ್ದಾರೆ..! ನನಗೆ ಅರ್ಥವಾಗುತ್ತಿಲ್ಲ..ಇಲ್ಲಿ ನಡೆಯುವ ಯಾವ ಪ್ರತಿಭಟನೆಗಳು, ಹೋರಾಟಗಳು ರಾಜಕೀಯಗೊಂಡಿಲ್ಲ ದಯವಿಟ್ಟು ಹೇಳಿ..?
ಪೋಲೀಸರ ಸಮಸ್ಯೆಗಳಿಗೆ ಅನೇಕ ವರ್ಷಗಳಿಂದ ಸ್ಪಂದಿಸದೆ ಪೋಲೀಸರನ್ನು ಪ್ರತಿಭಟಿಸಲು ಪ್ರೇರೇಪಿಸಿದವರು ಯಾರು..? ಅವರನ್ನು ಕಡೆಗೆ ಬೀದಿಗಿಳಿಯುವಂತೆ ಮಾಡಿದವರ್ಯಾರು..? ಈಗ ಅವರ ಪ್ರತಿಭಟನೆಯ ಕಾರಣಗಳನ್ನರಿತು ಅವನ್ನು ಪರಿಹರಿಸಲು ಯತ್ನಿಸದೆ.. ಎಸ್ಮಾಗಳನ್ನು ಹೇರಿ ಭಯೋತ್ಪಾದನೆ ಸೃಷ್ಟಿಸುತ್ತಿರುವವರು ಯಾರು..?
ಗದ್ದರ್ ಹೇಳುವಂತೆ ಅವರು ಅನ್ನಕ್ಕಾಗಿ ಪೋಲಿಸ್ ಉಡುಗೆ ತೊಟ್ಟ ಬಡ ಕೂಲಿಕಾರ್ಮಿಕರಷ್ಟೆ.. ಅವರು ತಳಸಮುದಾಯಗಳ ಪ್ರತಿನಿಧಿಗಳು..
ಯಾರ ಏನೇ ಹೇಳಲಿ ನಾನು ಅವರೊಂದಿಗೆ ನಿಲ್ಲುತ್ತೇನೆ.





nija sir edu nurakke nurarashtu satya. avaru kruravagi enadaru nadedu kondaru endare adu meladikarigala adikaradarpadinda matra.