
ಅನಂತ ಕುಣಿಗಲ್
ರಾಮಾಯಣ ಮತ್ತು ಮಹಾಭಾರತ ಕಾವ್ಯಗಳನ್ನು ಓದುವಾಗ ನಮಗೆ ಸಿಗುವ ಒಂದೊಂದು ಪಾತ್ರಗಳ ದೃಷ್ಟಿಕೋನದಿಂದ ಕಾವ್ಯವನ್ನು ಅವಲೋಕಿಸಿದಾಗ, ಈ ಕಾವ್ಯಗಳು ರಚನೆ ಮಾಡಿದವರ ದೃಷ್ಟಿಕೋನಕ್ಕಿಂತ ಓದುಗನಿಗೆ ಭಿನ್ನವಾಗಿಯೇ ಕಾಣತೊಡಗುತ್ತವೆ ಮತ್ತು ಕಾಡುತ್ತವೆ ಕೂಡ.
ಬಿ.ವಿ ಕಾರಂತರ ಸಂಗೀತ ನಾಟಕ ಗೋಕುಲ ನಿರ್ಗಮನದ ನಂತರ ನೋಡಿದ ಅದ್ಭುತ ಸಂಗೀತ ನಾಟಕ ಶ್ರೀಪಾದ ಭಟ್ ಸರ್ ಅವರ ನಿರ್ದೇಶನದ ವಾಲ್ಮೀಕಿ ರಾಮಾಯಣದ ಭಾಗವಾದ “ಅರಣ್ಯಕಾಂಡ”
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಈ ನಾಟಕ ಪ್ರೇಕ್ಷಕರಿಗೆ ಎಲ್ಲಿಯೂ ನೀರಸವಾಗದಂತೆ, ಆಯಾಸವಾಗದಂತೆ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ಆರಂಭ ಮತ್ತು ಮಧ್ಯಂತರ ನಮ್ಮನ್ನು ಕಾದು ಕೊನೆವರೆಗೂ ನಾಟಕ ನೋಡುವಂತೆ ಮಾಡುತ್ತವೆ. ಅಂತ್ಯ ಥಟ್ಟನೆ ನಿಂತುಬಿಡುತ್ತದೆ ಅಂತ ಅನಿಸುತ್ತದೆ. ಈ ನಾಟಕ ನೋಡಿದ ಮೇಲೆ “ಅಯೋಧ್ಯಕಾಂಡ”ವನ್ನು ನೋಡಲೇಬೇಕು ಅಂತ ಅನ್ನಿಸಿದ್ದಿದೆ.

ಶ್ರೀಪಾದ ಭಟ್ ಸರ್ ಅವರ ನಿರ್ದೇಶನದ ಪ್ರತಿಯೊಂದು ನಾಟಕಗಳಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಅವರು ನಟರನ್ನು ಆಯ್ಕೆ ಮಾಡಿಕೊಳ್ಳುವ ಪರಿಯೇ ಚಂದ. ನಟರಲ್ಲಿರುವ ಸಾಮರ್ಥ್ಯತೆಯನ್ನು ಎತ್ತಿ ತೋರಿಸುವುದು ಅವರ ನಿರ್ದೇಶನದ ಪ್ರಮುಖ ಕೈಚಳಕ. ನಾಟಕ ಹೇಗೆ ಇರಲಿ, ಆ ನಾಟಕವನ್ನು ಜನರಿಗೆ ಸೂಕ್ಷ್ಮವಾಗಿ ತಲುಪಿಸುವಂತಹ ಕೆಲಸಗಳನ್ನು ಬಹಳ ಹಿಂದಿನಿಂದಲೂ ಶ್ರೀಪಾದ ಸರ್ ಅವರು ಮಾಡುತ್ತಾ ಬಂದಿದ್ದಾರೆ. ಅವರ ಮಾಧವಿ ನಾಟಕ ನೋಡಿ ಕಳೆದು ಹೋಗಿದ್ದ ನನಗೆ ಅರಣ್ಯಕಾಂಡವು ಕೂಡ ಒಂದು ಅಚ್ಚರಿ ಪ್ರಯೋಗ ಅನ್ನಿಸಿತು. ಈ ನಾಟಕವನ್ನು ಸಂಗೀತ ನಾಟಕವನ್ನಾಗಿ ಮಾಡಿದ್ದುರಿಂದಲೇ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಎಲ್ಲ ನಟರು ಕೂಡ ತಮ್ಮ ಸಾಮರ್ಥ್ಯವನ್ನು ಮೀರಿ ನಟಿಸಿದ್ದಾರೆ. ಸಂಗೀತದ ಬಗ್ಗೆ ಬೇರೆ ಮಾತಿಲ್ಲ! ಅನುಷ್ ಅಣ್ಣ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾನೆ. ಬೆಳಕಿನ ವಿನ್ಯಾಸ, ವಸ್ತ್ರಾಭರಣ ವಿನ್ಯಾಸ ಎಲ್ಲವೂ ಕೂಡ ನಾಟಕಕ್ಕೆ ಶೇಕಡ ನೂರರಷ್ಟು ಹೊಂದಾಣಿಕೆಯಾಗಿದೆ. ಎಲ್ಲಿಯೂ ಆಭಾಸವಾಗದಂತೆ ಪ್ರೇಕ್ಷಕನಿಗೆ ಅಡಚಣೆಯಾಗದಂತೆ ಯಾವುದೂ ಹೆಚ್ಚು ಯಾವುದೂ ಕಮ್ಮಿ ಆಗದಂತೆ ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸಿದ್ದಾರೆ. ಈ ಶ್ರೇಯಸ್ಸು ಇಡೀ ತಂಡಕ್ಕೆ ತಲುಪಬೇಕು.
ಹೇಳಲೇಬೇಕಾದ ಮಾತೆಂದರೆ, ಶ್ರೀಪಾದ ಭಟ್ ಸರ್ ಅವರು ನಟನಿಗೂ ಪಾತ್ರಕ್ಕೂ ಜಿದ್ಧಾಜಿದ್ದಿ ತಂದಿಡುತ್ತಾರೆ. ಆ ಜಿದ್ದಾಜಿದ್ದಿಯಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ ಎಂದು ಹೇಳುವುದು ಪ್ರೇಕ್ಷಕರಿಗೆ ಕಷ್ಟ. ಸಮಾಜದಲ್ಲಿನ ಬಹಳಷ್ಟು ಸೂಕ್ಷ್ಮ ವಿಚಾರಗಳನ್ನು ನಾಟಕದ ಒಳಗೆ ಅಳವಡಿಸಿಕೊಂಡು ಹೇಳಬೇಕಾದ್ದನ್ನು ಹೇಳುವ ರೀತಿಯಲ್ಲಿ ಹೇಳಿ ಸುಮ್ಮನಾಗಿಬಿಡುತ್ತಾರೆ. ಪೌರಾಣಿಕ ಕಥಾವಸ್ತುವೊಂದನ್ನ ಸಮಕಾಲಿನ ವಿಚಾರಗಳಿಗೆ ಅಳವಡಿಸುವುದು ಬಹಳ ಕಷ್ಟದ ಕೆಲಸ. ಅಂತಹ ಕೆಲಸವನ್ನು ಶ್ರೀಪಾದ ಸರ್ ಅವರು ಜಾಗರೂಕತೆಯಿಂದ ನಿರ್ವಹಿಸಿದ್ದಾರೆ. ಅವರ ಪರಿಕಲ್ಪನೆ ನನ್ನ ಶರಣು.








0 Comments