
ಡಾ. ಯು ಆರ್ ಅನಂತಮೂರ್ತಿಯವರಿಗೆ ೭೫ ತುಂಬಿ ೭೬. ಕನ್ನಡಕ್ಕೆ ಘನತೆ ತಂದುಕೊಟ್ಟ ಈ ಹಿರಿಯ ಸಾಹಿತಿ ೭೫ ಸಂವತ್ಸರ ಪೂರೈಸಿದ ಸಂಭ್ರಮದಲ್ಲಿ ಸಾಹಿತ್ಯಿಕ ವಲಯ ಮತ್ತು ಮಾಧ್ಯಮಗಳು ತಮ್ಮದೇ ಆದ ರೀತಿಯಲ್ಲಿ ಭಾಗಿಯಾಗುತ್ತಿವೆ. ಮೊನ್ನೆಯಷ್ಟೇ ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಅಭಿನವ, ಅನಂತಮೂರ್ತಿಯವರ ೨೫ ಭಾಷಣಗಳ ಆಡಿಯೊ ಸಿ.ಡಿ. ಹೊರತರುವ ಮೂಲಕ ಅವರ ೭೫ರ ಸಂಭ್ರಮವನ್ನು ಆಚರಿಸುವುದಾಗಿ ಪ್ರಕಟಿಸಿದೆ.
ಕನ್ನಡಪ್ರಭ ದಿನಪತ್ರಿಕೆ ಅನಂತಮೂರ್ತಿಯವರ “ಅವಸ್ಥೆ” ಕಾದಂಬರಿಯನ್ನು ದೈನಿಕ ಧಾರಾವಾಹಿಯಾಗಿ ಪ್ರಕಟಿಸುವ ಮೂಲಕ ಈ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುತ್ತಿದೆ. ಈಚೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮಹತ್ವವಿರುವ ಸಂಗತಿ ಮತ್ತು ಸಂದರ್ಭವನ್ನು ವಿಶೇಷವಾಗಿ ಉಪಚರಿಸಲು ತೊಡಗಿರುವ ಮಯೂರ ಮಾಸಿಕ, ಅನಂತಮೂರ್ತಿಯವರು ೭೬ಕ್ಕೆ ಕಾಲಿಡುತ್ತಿರುವ ಸಂದರ್ಭಕ್ಕೆಂದು ಡಿಸೆಂಬರ್ ಸಂಚಿಕೆಯ ಬಹುಪಾಲು ಪುಟಗಳನ್ನು ಮೀಸಲಿರಿಸಿದೆ.
“ಅನಂತಮೂರ್ತಿ-೭೬” ಈ ಸಲದ ಮಯೂರ ವಿಶೇಷ.
ಸಂಚಿಕೆಯಲ್ಲಿ ಲೇಖನಗಳ ಭಾಗವೆಲ್ಲ ಅನಂತಮೂರ್ತಿ ಅವರನ್ನು ಕುರಿತ ಬರಹಗಳಿಗಾಗಿಯೇ ಮೀಸಲಾಗಿದೆ. ಜಿ ರಾಜಶೇಖರ್, ಡಿ ಎಸ್ ನಾಗಭೂಷಣ್, ಎಸ್ ಆರ್ ವಿಜಯಶಂಕರ್, ಎಸ್ ಮಂಜುನಾಥ್ ಅಲ್ಲದೆ ಅನಂತಮೂರ್ತಿಯವರ ಪತ್ನಿ ಎಸ್ತರ್ ಮತ್ತು ಪುತ್ರ ಗುರುರಾಜ್ ಮೂರ್ತಿ ಈ ಭಾಗದಲ್ಲಿ ಬರೆದಿದ್ದಾರೆ. ಅನಂತಮೂರ್ತಿಯವರ ಒಂದು ಕಥೆ, ಎರಡು ಕವಿತೆಗಳನ್ನೂ ಸಂಚಿಕೆ ಒಳಗೊಂಡಿದೆ. ಇವೆಲ್ಲದರ ಜೊತೆಗೇ ಅನಂತಮೂರ್ತಿಯವರ ಜೊತೆ ಪಟ್ಟಾಭಿರಾಮ ಸೋಮಯಾಜಿ ನಡೆಸಿದ ಸಂದರ್ಶನವಿದೆ.
ಹೀಗೆ ಒಂದು ಸಂದರ್ಭದ ಮಹತ್ವವನ್ನು ಮನಗಂಡು, ಅದರ ಹಿನ್ನೆಲೆಯಲ್ಲಿ ಚರ್ಚೆಯ ವಾತಾವರಣ ಕಟ್ಟುವ ನಿಟ್ಟಿನಲ್ಲಿ ಪತ್ರಿಕೆಗಳು ಮಾಡಬೇಕಾದ ಕೆಲಸವನ್ನು ಕನ್ನಡಪ್ರಭ ಮತ್ತು ಮಯೂರ ಪ್ರೀತಿಯಿಂದ ನಿರ್ವಹಿಸಿವೆ. ಅಭಿನಂದನೀಯ ಕೆಲಸ.





0 Comments