ಈಕ್ಷಿತ ಸತ್ಯನಾರಾಯಣ
ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಮಂತ್ರಿಗಳು ಆಗಮಿಸಿದ್ದ ಸಮಾರಂಭದಲ್ಲಿ ಮಂದಣ್ಣನೂ ಇದ್ದ ಸ್ಕೌಟ್ಸ್ ತಂಡದವರು ಬಾರಿಸಿದ ಡ್ರಮ್ ಸೌಂಡಿನಿಂದ, ತಾಲ್ಲೂಕ್ ಕಛೇರಿ ಕಟ್ಟಡದಲ್ಲಿ ಕಟ್ಟಿದ್ದ ಹೆಜ್ಜೇನುಗಳು ಕೆರಳಿ ಅಲ್ಲಿ ಬಂದಿದ್ದವರ ಮೇಲೆಲ್ಲಾ ಎರಗಿ ಕಚ್ಚಿ ರಂಪಾಟ ಮಾಡುವ ದೃಶ್ಯ ಅದು.
ಇಂತಹ ಒಂದು ಸನ್ನಿವೇಶ ಸೃಷ್ಟಿಗೆ ಯಾವುದಾದರೂ ಒಂದು ಘಟನೆ ತೇಜಸ್ವಿಯವರಿಗೆ ಸ್ಫೂರ್ತಿಯಾಗಿತ್ತೇ? ಹೌದು ಅನ್ನಿಸುತ್ತದೆ, ಕುವೆಂಪು ಅವರು ಕುಲಪತಿಗಳಾಗಿದ್ದಾಗ ಶಿವಮೊಗ್ಗದ ಕಾಲೆಜಿನಲ್ಲಿ ನಡೆದ ಘಟನೆಯೊಂದು ಕಾರಣವಾಗಿರಬಹುದು.
ಕುಲಪತಿಯಾಗಿ ಶಿವಮೊಗ್ಗ ಕಾಲೇಜಿನಲ್ಲಿ ನಡೆದ ಎನ್.ಸಿ.ಸಿ. ಕಾರ್ಯಕ್ರಮವೋಂದರಲ್ಲಿ ಭಾಗವಹಿಸಿದ್ದರು. ಅವರ ಡ್ರೈವರ್, ಮೈದಾನದ ತುದಿಯಲ್ಲಿದ್ದ ಮರದ ಕೆಳಗೆ ಕಾರು ನಿಲ್ಲಿಸಿ ನಿಂತುಕೊಂಡಿದ್ದ. ಆ ಮರದ ತುದಿಯಲ್ಲಿ ಹೆಜ್ಜೇನುಗಳ ಗೂಡುಗಳಿದ್ದವು. ಎನ್.ಸಿ.ಸಿ.ಯವರು ಡ್ರಮ್ ಭಾರಿಸುತ್ತಾ ಕವಾಯಿತು ನಡೆಸಲಾರಂಭಿಸಿದಾಗ, ಹೆಜ್ಜೆನುಗಳು ಕೆರಳಿ ಜನಗಳ ಮೇಲೆ ಎರಗುತ್ತವೆ. ಮುಖ್ಯವಾಗಿ ಮರದ ಕೆಳಗೆ ಕಾರು ನಿಲ್ಲಿಸಿಕೊಂಡು ನಿಂತಿದ್ದ ಡ್ರೈವರನ ಮೇಲೆ ತೀವ್ರಧಾಳಿ ನೆಡಸುತ್ತವೆ. ಈ ಘಟನೆಯನ್ನು ಕುವೆಂಪು ಅವರು ಮನೆಯಲ್ಲಿ ಹೇಳಿದ್ದರು ಅನ್ನಿಸುತ್ತದೆ.
ಈ ವಿಷಯವನ್ನು ತಾರಿಣಿಯವರ ‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಕುವೆಂಪು ಕುಲಪತಿಗಳಾಗಿದ್ದಾಗ ತೇಜಸ್ವಿ ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು. ಕರ್ವಾಲೋ ಬರೆದಿರಲಿಲ್ಲ. ತಂದೆಯವರಿಂದ ಕೇಳಿದ್ದ ಈ ಘಟನೆ ಕರ್ವಾಲೊ ಬರೆಯುವಾಗ ಕಲಾತ್ಮಕವಾಗಿ ಹೊರಹೊಮ್ಮಿದೆ ಅನ್ನಿಸುತ್ತದೆ. ಇಲ್ಲಿ ಡ್ರೈವರ್ ಆಸ್ಪತ್ರೆ ಸೇರುತ್ತಾನೆ. ಅಲ್ಲಿ ಮಂತ್ರಿಯೊಬ್ಬರು ಆಸ್ಪತ್ರೆ ಸೇರುತ್ತಾನೆ ಅಷ್ಟೆ!
0 ಪ್ರತಿಕ್ರಿಯೆಗಳು