ಮಲ್ಲಿಕಾರ್ಜುನ್ ತಳವಾರ್
“ಸಾವು ಕೇಳಿಕೊಂಡು ಬರುವುದಿಲ್ಲ” ಅಂತಾರೆ. ಅದು ನೂರಕ್ಕೆ ನೂರರಷ್ಟು ನಿಜ ಅನ್ನಿಸಿದ್ದು ನಿನ್ನೆ “ಕಲಾಭವನ್ ಮಣಿ” ಎಂಬ ಅದ್ಭುತ ನಟ, ನಿರ್ದೇಶಕ, ಗಾಯಕ ಈ ಭೂಮಿಯೊಂದಿಗಿನ ನಂಟು ಕಡಿದುಕೊಂಡಾಗ. ಕಲ್ಲು ಬಂಡೆಯ ಹಾಗೇ ಗಟ್ಟಿಮುಟ್ಟಾಗಿದ್ದ ನನ್ನ ಪ್ರೀತಿಯ ನಟ ಈಗಿದ್ರು, ಈಗಿಲ್ಲ ಎಂಬಂತೆ ತೊರೆದು ಹೋಗಿಬಿಟ್ಟರು.
ನಿಮಗೆ ಗೊತ್ತಿದೆಯೋ ಇಲ್ಲವೋ. ಕನ್ನಡದ ಇವತ್ತಿನ ಬಹುಬೇಡಿಕೆಯ ಖಳನಟ ರವಿಶಂಕರ್ ಹೆಚ್ಚು ಕಡಿಮೆ ದಶಕದ ಹಿಂದೆ ಕನ್ನಡದಲ್ಲೊಂದು ಚಿತ್ರ ನಿರ್ದೇಶಿಸಿದ್ದರು. ಮಾಲಾಶ್ರೀ ಹಿರೋಯಿಸಂ ಮೆರೆದಿದ್ದ ಅದರಲ್ಲಿ ಅಪ್ಪಟ ದೇಶಿ ಕಲಾವಿದರಾದ ರಘುವರನ್ ಹಾಗೂ ಕಲಾಭವನ್ ಮಣಿ ಖಳರಾಗಿ ಆರ್ಭಟಿಸಿದ್ದರು. ಆದರೆ “ಮಾರಿಗುಡಿ” ಹೆಸರಿನ ಖಳ ಪಾತ್ರದಲ್ಲಿ ಅತ್ಯಂತ ವಿಶಿಷ್ಟ ಮ್ಯಾನರಿಸಂ ಮೂಲಕ ದುರ್ಗಿ ಸಿನಿಮಾ ಆವರಿಸಿದ್ದು ಮಾತ್ರ ಇದೇ ಮಣಿ. ಕೇರಳದ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿರುವ ಮಣಿ, ಅನ್ಯಭಾಷಾ ಚಿತ್ರರಂಗದಲ್ಲೂ ಪರಿಚಿತರು. ಕಪ್ಪು ಶಿಲೆಯೊಂದು ಮನುಷ್ಯನಾಕಾರ ತಾಳಿದೆಯೇನೋ ಎಂಬತ್ತಿದ್ದ ಮಣಿ ಅಪರೂಪದ ಚಿತ್ರಗಳನ್ನು ಕೊಟ್ಟು ಹೋದರು.
ದುರ್ಗಿ ಅನ್ನೋ ಒಂದೇ ಒಂದು ಕನ್ನಡ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಕಲಾಭವನ್ ಬದುಕಿದ್ದರೆ ಇನ್ನಷ್ಟು ನಗು ಕೊಡುತ್ತಿದ್ದರು. ಲುಂಗಿ ಎತ್ತಿ ಕಟ್ಟಿ, ತುಟಿಕಚ್ಚಿ ಮಾರಿಗುಡಿ..! ಎಂದು ಮಾತಿಗೊಮ್ಮೆ ಅವರು ಹೊಡೆದ ಡೈಲಾಗು ಇವತ್ತಿಗೂ ಫೇಮಸ್ಸು. ಮೊದಲೇ ಹೊತ್ತಿ ಉರಿಯುತ್ತಿರುವ ಈ ಬಾಡಕೋ ಜಗತ್ತಿಗೆ ಕಲೆಯ ಮೂಲಕ ಸಾಂತ್ವನ ಹೇಳುವ ಅವರಾದರೂ ಇರಬೇಕಿತ್ತು ಅನ್ನಿಸೋದು ಸಹಜವೆ.
ಮೊದಲಿನಿಂದಲೂ ನನಗೆ ಖಳನಟರೆಂದರೆ ಎಲ್ಲಿಲ್ಲದ ಅಕ್ಕರೆ, ಅಭಿಮಾನ. ಎಲ್ಲರ ಕೈಯಲ್ಲಿ ಬೈಯಿಸಿಕೊಂಡರೂ ಅವರು ಮೆಚ್ಚುಗೆ ಮೀರಿದ ಕಲಾವಿದರು ಅನ್ನೋ ಭಾವನೆ ನಂಗೆ ಮೊದಲಿನಿಂದಲೂ ಇದೆ.
ಇಷ್ಟೆಲ್ಲ ಬರೆದ ಮೇಲೂ ನಿಮಗೆ ಕಲಾಭವನ್ ಮಣಿ ಮುಖ ಅಸ್ಪಷ್ಟವಾದರೆ ಶಂಕರ್ ನಿರ್ದೇಶನದ “ರೊಬೋಟ್” ಸಿನಿಮಾ ನೆನಪಿಸಿಕೊಳ್ಳಿ. ಅದರಲ್ಲಿ ಐಶ್ವರ್ಯ ರೈ ಗೆ ಎಳೆನೀರು ಕೊಚ್ಚಿ ಕೊಡುವ ನೆಪದಲ್ಲಿ ಆಕೆಯ ಮೇಲೆ ಎಗರಿ ಬೀಳುವ ಬತ್ತಲೆ ಕಪ್ಪು ಮೈ ಪಾತ್ರವೊಂದಿದೆ. ಅದೇ ಈ ಕಲಾಭವನ್ ಪುಲಿ. ನೂರಾರು ಸಲ ನೆನಪಿನ ಕೋಟೆಗೆ ಲಗ್ಗೆ ಇಡುತ್ತಿದ್ದ ಮಣಿ ಇನ್ನು ಶಾಶ್ವತ ನೆನಪು ಮಾತ್ರ.
ಹೋಗಿಬನ್ನಿ ನಿಮ್ಮ ಆತ್ಮಕ್ಕೆ ಶಾಂತಿ ಸಿಕ್ಕೇ ಸಿಗತ್ತೆ. ಏಕೆಂದರೆ ತಾವು ಮೆಚ್ಚುಗೆ ಮೀರಿ ಬದುಕಿದವರು. ಬರೀ ನಲಿವನ್ಮೆ ಕೊಟ್ಟವರು. ಕಡೇಪಕ್ಷ ತಮ್ಮ ಸಿನಿಮಾ ಮೂಲಕವಾದರೂ.
Summer in Bethlehem. Film nalli. Kalabhavan Mani. Avismaraneeya abhinaya neediddaru. Avara athmakke Shanti doreyali
Kalabhuvan mani nimma atmakke shanthi sigali, aa kutumbakke dukha barisuva shakthi barali