‘ಹೊಸ ತಲೆಮಾರಿನ ತಲ್ಲಣ’ ರಹಮತ್ ತರೀಕೆರೆ ಕನ್ನಡ ವಿಶ್ವ ವಿದ್ಯಾಲಯಕ್ಕೆ ಸಂಪಾದಿಸಿದ ಪುಸ್ತಕ. ಇಲ್ಲಿ ಕನ್ನಡದ ಹೊಸತಲೆಮಾರಿನ ಲೇಖಕರು ತಮ್ಮ ಬರೆಹದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಮಹಿಳಾ ಬರಹ ಲೋಕದ ಅನುಭವವನ್ನು ಅರಿಯುವ ನಿಟ್ಟಿನಲ್ಲಿ ಡಾ ವಿನಯಾ ಹಾಗೂ ದು ಸರಸ್ವತಿ ಅವರ ಅನುಭವವನ್ನು ಇಲ್ಲಿ ಮಂಡಿಸಲಾಗಿದೆ.
ಬರವಣಿಗೆ: ನಿರಾಳವಾಗುವ ಪ್ರಕ್ರಿಯೆ
-ದು. ಸರಸ್ವತಿ
ನಾನು ಕನ್ನಡ ಸಾಹಿತ್ಯವನ್ನು ಕ್ರಮಬದ್ಧವಾಗಿ ಅಭ್ಯಸಿಸಿದವಳಲ್ಲ. ಇಷ್ಟವಾಗುವಂತಹದನ್ನು ಓದಿದವಳು. ಕಥೆ ಕಾದಂಬರಿಗಳು ಕವನಕ್ಕಿಂತ ನನಗೆ ಹೆಚ್ಚು ಪ್ರಿಯ. ಕುವೆಂಪು ಕಾರಂತರಿಂದಲೇ ನನ್ನ ಓದು ಪ್ರಾರಂಭವಾದದ್ದು. ಬರವಣಿಗೆ ನನಗೆ ಅನಿವಾರ್ಯ ನೀಗಿಕೊಳ್ಳೊಕೆ. ನಾನು ಬರೆಯಲೇಬೇಕು. ಬರೆಯೋವಾಗ್ಲೂ ನಾನು ಫಾರಂ ಮತ್ತು ಸ್ಟ್ರಕ್ಚರ್ ಬಗ್ಗೆ ಯೋಚಿಸದೆ ಹೇಳಲೇಬೇಕೆನ್ನಿಸಿದ್ದನ್ನು ಬರೆಯುತ್ತೇನೆ. ಅದು “ಅಡ್ಡವಾದರೆ ಗದ್ಯ, ಉದ್ದವಾದರೆ ಪದ್ಯ”. ಬರವಣಿಗೆ ನನಗೊಂದು ಕಾರಿಕೊಂಡು ನಿರಾಳವಾಗುವ ಪ್ರಕ್ರಿಯೆ. ನಿರಾಳವಾಗುವುದರಿಂದ ಹೊಸ ಚೈತನ್ಯ ಪಡೀತೀನಿ. ಮೂಲಭೂತವಾಗಿ ನಾನೊಬ್ಬಳು ಆಕ್ಟಿವಿಸ್ಟ್. ಮಹಿಳಾ ಚಳುವಳಿಯೊಂದಗಿನ ಅನುಭವ, ದಲಿತ ಚಳುವಳಿಯೊಂದಿಗಿನ ನನ್ನ ಸಂಪರ್ಕ ಹಾಗೂ ಪ್ರಭಾವ ಮತ್ತು ನಾನೇ ದಲಿತಳಾಗಿರುವುದು, ನನಗೆ ಬದುಕಿನ ಬಗ್ಗೆ ಬೇರೆ ಬೇರೆ ಇನ್ಸೈಟ್ ಕೊಟ್ಟಿದೆ.
ಸಾಹಿತ್ಯ ಸೃಷ್ಟಿಸುವವರಿಗೆ ನಿರಾಶಾದಾಯಕ ವಾತಾವರಣವಿದೆಯೆಂದು ನನಗನಿಸುವುದಿಲ್ಲ. ಸದ್ಯದ ಸಾಮಾಜಿಕ. ಆರ್ಥಿಕ ಹಾಗೂ ರಾಜಕೀಯ ವಾತಾವರಣವು ಸಾಹಿತ್ಯ ಸೃಷ್ಟಿಗೆ ತುಂಬಾ ಪೊಟೆನ್ಶಿಯಲ್ ಆಗಿದೆ. ಆದರೆ ಸೃಷ್ಟಿಯಾದ ಸಾಹಿತ್ಯವನ್ನು ಓದುವ ಚರ್ಚಿಸುವ ಕೊರತೆಯಿದೆ ಎನಿಸುತ್ತದೆ.
ಚಳುವಳಿಗಳೆಲ್ಲ ಸ್ಥಗಿತಗೊಂಡಿವೆ ಎನ್ನುವುದು ಸರಿಯಲ್ಲವೇನೋ. ಬೇರೆ ಬೇರೆ ರೀತಿಯಲ್ಲಿ ಹಲವಾರು ಚಳುವಳಿಗಳು ಸಕ್ರಿಯವಾಗಿವೆ. ಉದಾಹರಣೆಗೆ. ಅತ್ಯಂತ ಹೀನ ನಗಣ್ಯ ಎಂದು ಎನಿಸಿಕೊಂಡ ವೇಶಾವೃತ್ತಿಯಲ್ಲಿನ ಹೆಂಗಸರು, ಹಿಜಡಾಗಳು ಮತ್ತು ಕಕ್ಕಸು ಬಳಿಯುವ ಜಾಡಮಾಲಿಗಳು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ, ಆತ್ಮ ಗೌರವಕ್ಕಾಗಿ ಹೋರಾಡುತ್ತಿದ್ದಾರೆ. ಈ ಚಳುವಳಿಗಳು ನಮ್ಮ ಮುಂದೆ ತೆರೆದಿಡುವ ಸತ್ಯಗಳು ನಮ್ಮ ಮೌಲ್ಯಗಳ ಬುಡವನ್ನೆ ಅಲ್ಲಾಡಿಸುವಂಥವು. ಇದು ಯಾವ ಸಾಹಿತಿಗಾದರೂ ಸಾಹಿತ್ಯ ರಚನೆಗೆ ಸವಾಲಾಗಬದುದು, ಸ್ಫೂರ್ತಿಯಾಗಲೂಬಹುದು. ಯಾವುದೇ ಚಳುವಳಿಯಾಗಲೀ ಆಯಾ ಕಾಲದ ತುರ್ತಿಗೆ, ಅಗತ್ಯಕ್ಕೆ ನಿರಂತರವಾಗಿ ಸ್ಪಂದಿಸುತ್ತಿದ್ದಾಗ ಮಾತ್ರ ಜೀವಂತವಾಗಬಲ್ಲದು.
ಒಂದು ಹಂತ ದಾಟಿದ ಮೇಲೆ ತನ್ನ ಐಡಿಂಟಿಟಿಯನ್ನು ಮೀರಿ ಹರಡಿಕೊಳ್ಳುತ್ತಾ ಹೋಗಬೇಕು. ದಲಿತ ಚಳುವಳಿಗೆ ವರ್ಗ ಹೋರಾಟ, ದಲಿತರೊಳಗೆ ಇರುವ ಸಾಮಾಜಿಕ ಅಸಮಾನತೆ, ವರ್ಗ ಹೋರಾಟಕ್ಕೆ ಜಾತಿ ಪ್ರಶ್ನೆ ಮತ್ತು ಇವೆರಡಕ್ಕೂ ಲಿಂಗ ಪ್ರಶ್ನೆಯೂ ಮುಖ್ಯವಾಗಬೇಕು.
ಇವೆಲ್ಲದರ ಆಚೆಯೂ ಸೂಕ್ಷ್ಮವಾಗಿರುವ ಹೊಳಹುಗಳತ್ತ ಗಮನಿಸುವ ಸೂಕ್ಷ್ಮತೆಯೂ ಇರಬೇಕೆಂದೆನಿಸುತ್ತದೆ. ಉದಾಹರಣೆಗೆ ಲಿಂಗದ ಪ್ರಶ್ನೆಯನ್ನು ಹಿಜಡಾಗಳ ಕಾಂಟೆಸ್ಟಿನಲ್ಲಿ ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದು. ಸಾಹಿತ್ಯದಲ್ಲೂ ಜಾತಿ, ವರ್ಗ, ಲಿಂಗ, ಲೈಂಗಿಕತೆಯಂತಹವುಗಳು ರಿಪ್ಲೆಕ್ಟ್ ಆಗಬೇಕೆಂದೆನಿಸುತ್ತದೆ. ಇದಕ್ಕೆ ಎಲ್ಲ ಬರಹಗಾರರು ಚಳುವಳಿಯಲ್ಲಿ ಭಾಗಿಯಾಗಲೇಬೇಕೆಂದೇನು ಇಲ್ಲ. ಗ್ರಹಿಸುವ ಸೂಕ್ಷಂತೆ ಮುಖ್ಯವಾಗಬೇಕು. ಈ ಸೂಕ್ಷ್ಮತೆ ನಮ್ಮನ್ನೇ ನಾವು ಸಂಘರ್ಷಕ್ಕೆ ಒಡ್ಡಿಕೊಳ್ಳುವ ಪ್ರಕ್ರಿಯೆಗೂ ಕಾರಣವಾಗಬಲ್ಲದು.
ಇನ್ನು ಸಾಹಿತ್ಯ ಪ್ರಕಾರಗಳ ಕುರಿತು ಹೇಳಬೇಕೆಂದರೆ, ಆ ಬಗ್ಗೆ ನನಗೆ ತಿಳುವಳಿಕೆ ಕಡಿಮೆ ಎನ್ನುವುದು ಸೂಕ್ತವೇನೊ. ತಾತ್ವಿಕ ನಿಲುವಿನ ಬಗ್ಗೆ ಹೇಳಬೇಕೆಂದರೆ, ಯಾವುದೊ ಒಂದು ನಿಲುವು ಬದುಕಿನ ಎಲ್ಲ ಸತ್ಯಗಳನ್ನು ಹಿಡಿದಿಡಲಾರದೆಂದೆನಿಸುತ್ತದೆ. ಅದ್ದರಿಂದ ನಿಲುವುಗಳು ಅಷ್ಟೆ ವಿಶಾಲವಾಗಿರಬೇಕೆನಿಸುತ್ತದೆ. ಅಂತಹ ನಿಲುವೊಂದು ಸಾಧ್ಯವಾಗುವುದಾದರೆ ಬರವಣಿಗೆಯೇ ನಿರರ್ಥಕವೆನಿಸಿ ಬಿಡಬಹುದೇನೊ?
ಮಹಾಕಾವ್ಯಗಳಂತಹ ಬದುಕುಗಳನ್ನು ಕಂಡಾಗ, ಕಾಗದ ಪೆನ್ನು ಕೆಳಗಿಟ್ಟು ಶರಣೆಂದು ಬಿಡಬೇಕೆಂದು ಎಷ್ಟೋ ಸಾರಿ ಅನ್ನಿಸಿದೆ. ಬರವಣಿಗೆ ನಮ್ಮನ್ನೇ ಸಂಘರ್ಷಕ್ಕೊಡ್ಡಿ ಯಾವುದೋ ಒಂದು ಇನ್ ಸೈಟ್ ಕೊಡಬಲ್ಲವಾದರೆ, ಯಾವ ವಾತಾವರಣವಾದರೂ ಬರಹಗಾರರಿಗೆ ಸ್ಥಗಿತವೆನಿಸಲಾರದೇನೊ?
"ಅಡ್ಡವಾದರೆ ಗದ್ಯ, ಉದ್ದವಾದರೆ ಪದ್ಯ"
ನಿಮಗೆ ಇವೂ ಇಷ್ಟವಾಗಬಹುದು…



Nice write-up.
~Meera.
Du. sarasraswathi-yavarannu bahala hatthiradidna ballavalaagi..avara baduku-baraha yavathigoo heege nera, sarala haagu..vishaalatheya choukattininda koodiddu..aneka horatagalalli yele mareya kayante hinde nintu chaitanya thumbaballavaru. haagaagi..avara taatvika-nirammalatheya hindina bisupu..kooda..anthaha prakriyeyindale bandaddu. sharanu nimma kanavarikeya , antaraalada thuditakke..moukika-baravaNige yeradarallu managalige hatthiravaguva nimma nadavalike heege innashtu jana-mana thalupali..wishes