ಈ ಹೊತ್ತಿಗೆ ಕಥಾ ಸ್ಪರ್ಧೆಗಳ ಫಲಿತಾಂಶವನ್ನು ಘೋಷಿಸಲಾಗಿದ್ದು ಸಾಗರದವರಾದ ಅಕ್ಷಯ ಪಂಡಿತ್ ಅವರ ಅಪ್ರಕಟಿತ ಕಥಾಸಂಕಲನ, ‘ಬಯಲಲಿ ತೇಲುತ ತಾನು’, ೨೦೨೧ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ೧೦ ಸಾವಿರ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಅಕ್ಷಯ ಪಂಡಿತ್ ಪ್ರಸ್ತುತ ಬೆಂಗಳೂರಿನ ‘ನಾಸ್ಡ್ಯಾಕ್ (Nasdaq) ಸಾಫ್ಟ್ವೇರ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿಮರ್ಶಕ ಡಾ. ಓ.ಎಲ್ ನಾಗಭೂಷಣಸ್ವಾಮಿ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.
ಇದೇ ಸಮಯದಲ್ಲಿ ೨೬ರ ವಯೋಮಿತಿಯ ಕಥೆಗಾರರಿಗಾಗಿ ಈ ಹೊತ್ತಿಗೆಯು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ, ಈ ಬಾರಿ ಬಹುಮಾನಕ್ಕೆ ಯೋಗ್ಯವಾದ ಕಥೆಗಳು ಬಂದಿಲ್ಲದ ಕಾರಣ ಯಾವ ಕಥೆಗೂ ಬಹುಮಾನ ಕೊಡುತ್ತಿಲ್ಲ. ಪರ್ಯಾಯವಾಗಿ ‘ಈ ಹೊತ್ತಿಗೆ’ಯು ಮುಂದಿನ ದಿನಗಳಲ್ಲಿ ೨ ದಿನಗಳ ಆನ್ ಲೈನ್ ಕಥಾ ಕಮ್ಮಟವನ್ನೇರ್ಪಡಿಸಲಿದ್ದು, ಈ ವರ್ಷ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಗಾರರಿಗೆ ಉಚಿತ ಪ್ರವೇಶವನ್ನು ನೀಡುವ ಮೂಲಕ ಅವರೊಳಗಿನ ಕಥೆಗಾರರಿಗೆ ಸರಿಯಾದ ಮಾರ್ಗದರ್ಶನ ದೊರೆಯುವಂತೆ ಮಾಡಿ ಅವರುಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.
ಸೃಜನಶೀಲ ಸಾಹಿತಿ ಚಿದಂಬರ ನರೇಂದ್ರ ಅವರು ಈ ವಿಭಾಗದ ತೀರ್ಪುಗಾರರಾಗಿದ್ದರು.
ಇದೇ ಮೇ ೧ರಂದು, ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ನಡೆಯಲಿರುವ, ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಹೃತ್ಪೂರ್ವಕ ಅಭಿನಂದನೆಗಳು