ಸುರೇಂದ್ರನಾಥ್
ನಾನೆಷ್ಟು ಸರ್ವಾಧಿಕಾರಿಯಾಗಿದ್ದೆನೆಂದರೆ
ನನ್ನ ಮಾತಿಗೆ ಉತ್ತರಗಳೇ ಬರುತ್ತಿರಲಿಲ್ಲ
ಬರೇ ಪ್ರತಿಧ್ವನಿಗಳು ಬರುತ್ತಿದ್ದವು.
—
ಆಲದ ಮರದ ತುಂಬಾ ಬೆಂಕಿಹುಳುಗಳು
ಆಷಾಢದ ರಾತ್ರಿ
ತೆರೆಯುತ್ತವೆ ಮುಚ್ಚುತ್ತವೆ ಏಕ ಕಾಲಕ್ಕೆ
ಮೊದಲೇ ತಾಲೀಮು ಮಾಡಿದ ಹಾಗೆ
ಹೇಗೆ ಗೊತ್ತು ಅವಕ್ಕೆ ಒಂದರ ಮನಸ್ಸು ಇನ್ನೊಂದಕ್ಕೆ.
—
ಮಾಡಿನ ಹನಿಗಳಿಗೆ ಗೊತ್ತಿದೆ ಮಳೆ ನಿಂತಿರುವ ವಿಷಯ
ಏನೂ ಮಾಡುವಂತಿಲ್ಲ
ಪರಿಮಳಕ್ಕೆ ಗೊತ್ತಿದೆ ಹೂ ಬಾಡುತ್ತಿರುವ ವಿಷಯ
ಏನೂ ಮಾಡುವಂತಿಲ್ಲ
—
ಕಬ್ಬು ಕಲ್ಲಂಗಡಿಹಣ್ಣು ಖರಬೂಜ
ಧವಸ ಧಾನ್ಯ ಲಾರಿಗಳಲ್ಲಿ ಅಥವ ಎತ್ತಿನ ಗಾಡಿಗಳಲ್ಲಿ
ಮಂಡಿಗೆ ಬಂದಾಗ
ಕೇವಲ ಇವೇ ಬಂದಿರೋದಿಲ್ಲ
ಕೆಸರು ಬಂದಿರುತ್ತೆ ಬೆವರು ಬಂದಿರುತ್ತೆ
ಹೊಲದ ಪರಿಮಳ ಬಂದಿರುತ್ತೆ
—
ಒಂದು ಹೆಣ್ಣಿನ ಲಾವಣ್ಯ ತಿಳಿಯುವುದಕ್ಕೆ
ಅವಳು ಅಂಗಳ ದಾಟಿದರೆ ಸಾಕು
ಬೀಳುವ ನಕ್ಷತ್ರ ಹಿಡಿಯುವುದಕ್ಕೆ.
ಕೆ ವಿ ತಿರುಮಲೇಶರ ಅಕ್ಷಯ ಕಾವ್ಯ ಓದುತ್ತಿದ್ದೇನೆ. ರಾತ್ರಿಗಳಲ್ಲೂ ಬೆಳಗು ಕಾಣುತ್ತಿದ್ದೇನೆ. ಪದಗಳ ಸಡಗರಕ್ಕೆ ರೋಮಾಂಚಿತನಾಗುತ್ತಿದ್ದೇನೆ. ಮೊಗೆದಷ್ಟೂ ಬರುತ್ತಿದೆ. ಒಳ್ಳೆಯದನ್ನು ಆರಿಸಿ ಬರೆದುಕೊಳ್ಳಲು ತೆರೆದಿಟ್ಟ ಪುಸ್ತಕ ಮುಗಿದು ಹೋಗಿದೆ, ಅಕ್ಷಯ ಪಾತ್ರೆ ಕಾಲು ಕೂಡ ಮುಗಿದಿಲ್ಲ. ಈಗ ಜೇಬು ತುಂಬಿಸಿ ಕೊಂಡು ಆರಾಮಾಗಿದ್ದೇನೆ, ಬೇಕೆಂದಾಗೆಲ್ಲಾ ಹೆಕ್ಕಿ ರುಚಿನೋಡುತ್ತಿದ್ದೇನೆ.
ಪ್ರಿಯ ಸುರೇಂದ್ರನಾಥ್
ಯಾರೂ ಓದುವುದಿಲ್ಲ ಎಂದುಕೊಂಡಿದ್ದೆ; ನೀವೊಬ್ಬರಾದರೂ ಓದಿದಿರಲ್ಲ, ಬರೆಯುವ ಸೌಜನ್ಯವನ್ನೂ ತೋರಿಸಿದಿರಿ. ಕನ್ನಡ ಸಂಸ್ಕೃತಿ ಇನ್ನೂ ಉಳಿದಿದೆಯೆಂದು ಅರ್ಥ.
ಥ್ಯಾಂಕ್ಸ್!
ಕೆ. ವಿ. ತಿರುಮಲೇಶ್
ಹೈದರಾಬಾದ್
ನನಗೆ ಖಂಡಿತಾ ಓದಬೇಕೆನಿಸುತ್ತೆ. ಈ ಮುಂಬಯಿಯಲ್ಲಿ ಕೂತು ಪುಸ್ತಕ ಹೇಗೆ ಪಡೆಯಲಿ? ಇದು ಎಲ್ಲಿ ಸಿಗುತ್ತೆ? ಅಂಕಿತದಲ್ಲಿ ಸಿಗಬಹುದೇ