ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಧ ಯುಗದ ಸರದಾರರು..

-ನಾ ದಿವಾಕರ

ನಿಮಗರ್ಥವಾಗದು…

ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿ
ಸಂಭ್ರಮಿಸುತ್ತೀರಿ
ನಮ್ಮತ್ತ ನೋಡುವುದೂ ಇಲ್ಲ
ಏಕೆಂದು ಹೇಳುವಿರಾ ?

ನಮಗೆ ಹಣತೆ ಹಚ್ಚುವುದು
ಮುಸ್ಸಂಜೆ ಮೋಂಬತ್ತಿ ಹಿಡಿಯುವುದು
ನಿತ್ಯ ಕಾಯಕವಾಗಿದೆ
ಏಕೆಂದು ಅರ್ಥವಾಗಿದೆಯೇ ?

ನಮ್ಮ ಪ್ರಣತಿಯ ಬೆಳಕಿನಲಿ
ಮಡುಗಟ್ಟಿದ ವೇದನೆಗಳಡಗಿವೆ
ಬಲಿಪೀಠಗಳ ಛಾಯೆಯಿದೆ
ಏಕಿರಬಹುದು ತಿಳಿಸುವಿರಾ ?

ನಮ್ಮ ಹಣತೆಗಳು ಸಾಲುಗಟ್ಟುವುದಿಲ್ಲ
ನೊಂದ ಹೃದಯಗಳು
ಮೌನ ಸರಪಳಿಗಳಾಗುತ್ತವೆ
ಏಕೆಂದು ಊಹಿಸಬಲ್ಲಿರಾ ?

ದಮನಿತರ ಯಾತನೆಗಳ ಕೊಳ
ನಮ್ಮ ಹಣತೆಗಳ ತೈಲ
ಮನುಜ ಸೂಕ್ಷ್ಮತೆಯೇ ಬತ್ತಿಗಳು
ಏಕಿರಬಹುದು ಯೋಚಿಸಬಲ್ಲಿರಾ ?

ನಿಮ್ಮ ಹಣತೆಗಳಿಗೆ ಕಥನಗಳಿವೆ
ನಮ್ಮ ದೀಪಗಳ ಅವಳಿಗೆ
ವರ್ತಮಾನದ ದುರಂತಗಳಿವೆ
ಕಾರಣ ಹೇಳಬಲ್ಲಿರಾ ?

ಉರಿದ ಜೀವಗಳೇ ನಮ್ಮ ಹಣತೆ
ಹರಿದ ನೆತ್ತರೇ ತೈಲ
ನಿಮ್ಮ ಅಂಧಕಾರವ ನೀಗಿಸಲು
ನಮ್ಮ ಬತ್ತಿಯ ಬೆಳಕು
ಬೆಂದ ಹೆಣ್ಕುಲದ ಭಾವನೆಗಳು
ಸರಪಳಿಯ ಕೊಂಡಿಗಳು
ಸಂಕೋಲೆಗಳ ಕಿತ್ತೊಗೆಯಲು
ಸಂವೇದನೆಯ ಹೆಗಲುಗಳು
ಈಗಲಾದರೂ ಅರ್ಥವಾಯಿತೇ ?

ಆಗದು ಬಿಡಿ,,, ನೀವು,,,
ಅಂಧ ಯುಗದ ಸರದಾರರು
ದೌರ್ಜನ್ಯಗಳ ಸೂತ್ರಧಾರರು
ಸುಡುವ ಸಂಸ್ಕೃತಿಯ
ವಾರಸುದಾರರು
ಅಂಧಕಾರದ ಪಾಪಕೂಪಗಳ
ಸಾಮ್ರಾಟರು
ಹೇಗೆ ಅರ್ಥವಾದೀತು
ನಮ್ಮ ನಾಡಿಮಿಡಿತ ಜೀವತುಡಿತ
ಅರ್ಥವಾಗದು ಬಿಡಿ ! 

‍ಲೇಖಕರು Admin

30 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading