-ಅಪಾರ
ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?
*
ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು
*
ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ

ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ
*
ಎಷ್ಟೋ ಹೊತ್ತು
ಬರೀ ಸೂರ್ಯಕಾಂತಿ ಹೂವನೇ
ನೋಡಿದ ಬಳಿಕ ಕಂಡ
ಹಳದಿ ಚಿಟ್ಟೆ
ಯಾತಕೋ ಸರಕ್ಕನೆ
ನೀನು ತಿರುಗಿದಾಗ
ಕಂಡ ನುಣುಪು ಬಿಳಿ ಹೊಟ್ಟೆ
*
ಮುಸ್ಸಂಜೆ ಹೊತ್ತಲ್ಲಿ
ಕಣ್ಣಿಂದ ಒಳತೂರಿದ
ಚಿಟ್ಟೆ ನೀನು
ಈ ನಡು
ರಾತ್ರಿ ವೇಳೆ ಮೈತುಂಬಿ
ಫಡಫಡಿಸುವೆ ಏನು?
*

ಮಾತು ಕತೆ ಒಂದೂ ಬೇಡ
ಸುಮ್ಮನೆ ಬಂದು ಕೂಡು
ಮಿಸುಕಾಡದೆ ಮಧುವ
ಹೀರೊ ಚಿಟ್ಟೆಯ
ಒಮ್ಮೆ ನೋಡು
*
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು
ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು
ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ
*
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ ‘ಎಚ್ಚರ’ ಎಂದು
ತೋಳು ಮುಟ್ಟಿ ಕಂಪಿಸಿದೆ
ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು
*

ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ
*
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?
*
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ
*

ಬಟನ್ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ
*
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ
*
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ…
ನಿಮಗೆ ಇವೂ ಇಷ್ಟವಾಗಬಹುದು…





ತುಂಬಾ ಚೆನ್ನಾಗಿವೆ. ಮತ್ತೊಂದು ‘ಪುಟ್ಟ ಪುಸ್ತಕ’ ಬರುವ ತಯಾರಿಯಲ್ಲಿದೆಯೇ?
ಸಖತ್ತಾಗಿವೆ ಅಪಾರ
ಯಾರೋ ಕೀ ಮೇಹಫೀಲ್ ನಮ್ದು ಒಂದು
ನಿನ್ನ ಕಾಯುವುದಕ್ಕಿಂತ
ಬೇರೆ ಸುಖವೆಲ್ಲಿಯದು ಗೆಳತಿ
ನೀ ಬಂದ ಮೇಲೆ
ನಮಗೆಲ್ಲಿಯ ವಿಶ್ರಾಂತಿ.
-ಶೆಟ್ಟರು
ಅಪಾರ,
ಬಹಳ ಖುಶಿಯಿಂದ ಮತ್ತೆ ಓದಿಕೊಂಡೆ.
ಕವಿತೆಗಳು ಹೀಗಿರಬೇಕು.
ಸರಳವಾಗಿ ಹರಿದುಹೋಗಬೇಕು.
ತಡವರಿಸದ ಹಾಗೆ.
ಏನೂ ಹೇಳದೆಯೆ ಏನೆಲ್ಲ ಹೇಳಬೇಕು.
ಅಂಗಿಯ ಮೇಲಿರದೆ ಕಾಡುವ
ತುಟಿಯ ಮುದ್ರೆಯ ಹಾಗೆ.
hanigalu ista aaadavu…
vaara vaara beredu odugarannu khushi padisi…
halavara haleya premaprasanga nenapaaguvante maadi…avaru hani odutaa onderadu kambani udurisuvantaagali…
’ಅಪಾರ’ ಪ್ರತಿಭೆ ಇದೆ ಇವರಲ್ಲಿ. ಕಥೆ ಕೂಡ ಚೆನ್ನಾಗಿ ಬರೀತಾರೆ.
🙂
ms
very nice
wonderful!
ನೇರ ನೇರ ಕವಿತೆಗಳು ಯಾವತ್ತೂ ಚಂದ ಚಂದ.
ಆಪ್ತತೆ ಮತ್ತು ಆರ್ದ್ರತೆಯನ್ನು ಜೊತೆ ಜೊತೆಗೆ ತರುವ “ಹನಿ”ಗಳು ಇವು……. ಅಪಾರ ಹೀಗೆ ಬರೀತಾ ಇರಿ.
— ಸಂತೋಷ್ ಅನಂತಪುರ
ನವ್ಯದ ಹೆಸರಿನಲ್ಲಿ ಏನೇನೋ ಬರೆದು (ಅಥವಾ ಗೀಚಿ ಬಿಸಾಕಿ), ಓದುಗರ ಕೊರೆವ, ಪ್ರಾಣ ತಿನ್ನುವ, ಅರ್ಥಮಾಡಿಕೊಳ್ಳಲು ಮ್ಯೂಚೂವಲ್ ಫಂಡ್ ಗಳ ಬ್ರೋಷರ್ ಗಳಷ್ಟೇ ಕಠಿಣವಾದ ಕವಿತೆಗಳ ಮಧ್ಯದಲ್ಲಿ ಅಪಾರ ಮಾತ್ರ ತುಂಬಾ ಡಿಫರೆಂಟ್ ಆಗಿ ನಿಲ್ಲುತ್ತಾರೆ. ತುಂತುಂತುಂತುಂತುಂಬಾಬಾಬಾಬಾ ಚೆನ್ನಾಗಿದೆ ಕವಿತೆಗಳು ಅಪಾರ. ಕೀಪ್ ರೈಟಿಂಗ್….ಸುಫೋಷ್ ಎಸ್. ನಿಗಳೆ
male bandre kavite haniyagutta?
padyagalantu lovely…
-alemari
ಕೂಡಿ ಕಳಕೊಂಡವನ ಬಡತನದ ಗಳಿಗೆಗಳು ನೆನಪಿಸಿದ್ದು ಏನನ್ನು? ಎಂದೋ ಸಂದುಹೋದ ಕಾಲದ ಹೆಜ್ಜೆಗುರುತುಗಳನ್ನು, ನಖಕ್ಷತಗಳನ್ನು, ಫಳಕ್ಕನೆ ಮರೆಯಾದ ಕಂಗಳನ್ನು, ಅವಳ ಕಂಠದಿಂದ ಹೊರಟು ದೇಶಕಾಲದಲ್ಲಿ ಕಣ್ಮರೆಯಾದರೂ ನನ್ನಲ್ಲೇ ಉಳಿದಿರುವ ಶಿಶುನಾಳರ ಹಾವು ತುಳಿದೇನೇ ಮಾನಿನಿ ಹಾಡನ್ನು.
ಎಲವೋ ಕುಂಟಿನಿ ಗೋಪಾಲಕೃಷ್ಣನೇ, ಇದನ್ನು ಓದು. ನೀನೂ ವಿರಹದಿಂದ ಪರಿತಪಿಸು. ಈ ಮುಂಜಾನೆ ಇದೇ ನಿನಗೆ ಹಿಡಿಶಾಪ.
This is Really Gud…
ಅಂಗಿಯ ಮೇಲಿರದೇ ಕಾಡುವ ತುಟಿಯ ಮುದ್ರೆ… ಸಿಗದೇ ಹೋದ ಪ್ರೇಮಿಯ ನೆನಪು ನಿರಂತರ ಮಧುರ ಯಾತನೆಯೇ ಹೌದು…
ಎಷ್ಟೊಂದು ಸಲೀಸಾಗಿ ಹೊಳೆದಿತ್ತು ಹೆಸರದು ಅಂದು ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು – ಹೀಗೆಲ್ಲ ಕೇಳಿದರೆ ಏನೆಂದು ಹೇಳುವುದು ?
ಯಾವ ನೆಪವೂ ಇಲ್ಲದೆ ತಬ್ಬಿ ಮನವ ಮುಟ್ಟುವ ಹಂಬಲ ಮಾತ್ರ ಉಳಿದೇ ಹೋಯ್ತು ಎಂದರೆ ಕಣ್ಣು ಹನಿಗೂಡದೇ ಅಪಾರ ?
ಏನಿಲ್ಲ.. ಏನಿದೆ ಇದರಲ್ಲಿ ಎಂದರೆ ಹೇಳುವುದು ಕಷ್ಟ.. ಹೀಗೆ ಆಗಾಗ ಬರೆಯಲು ನಿಮಗೇನು ಕಷ್ಟವೋ ಅರಿಯೆ..
ಅಂದ ಹಾಗೆ ಜೋಗಿಯವರು ಕುಂಟಿನಿಯವರಿಗೆ ಮಾತ್ರ ಹೇಳಿದ್ದು ಯಾಕೆ ? ನಾವೆಲ್ಲಾ ಮನುಷ್ಯರ ಹಾಗೆ ಕಾಣುತ್ತಿಲ್ಲವೋ ? ಎಂಬುದನ್ನು ಕೇಳಿ ಹೇಳುವಿರಾ ಪ್ಲೀಸ್..?
ಅಪಾರ ಸರ್..ಹನಿಗಳು ಚೆನ್ನಾಗಿವೆ. ವಂದನೆಗಳು
“ಎಲವೋ ಕುಂಟಿನಿ ಗೋಪಾಲಕೃಷ್ಣನೇ, ಇದನ್ನು ಓದು. ನೀನೂ ವಿರಹದಿಂದ ಪರಿತಪಿಸು. ಈ ಮುಂಜಾನೆ ಇದೇ ನಿನಗೆ ಹಿಡಿಶಾಪ…”
ಜೋಗಿ ಸರ್..ಕುಂಟಿನಿ ಸರ್ ಇದನ್ನು ಓದಿದ್ದಾರೆ. ಹರಿಪ್ರಸಾದ್ ಹೊಟೇಲ್ ನಲ್ಲಿ ಪರಿತಪಿಸುತ್ತಾ ಮಸಾಲೆ ದೋಸೆ ಮೆಲ್ಲುತ್ತಿದ್ದಾರೆ.!!!!:)))))
ಯಾರದು ನೆನಪಾಯಿತು ನಿಮಗೆ?!! ಹೆಹೆಹೆಹ!
-ಚಿತ್ರಾ
ಕವಿತೆಯ ನೇರವಂತಿಕೆ…
ಬಹಳವಾಗಿ ಇಷ್ಟವಾಗುತ್ತದೆ…
ಚಂದದ ಕವನಕ್ಕೆ ಅಭಿನಂದನೆಗಳು…