
ಗುಂಡಣ್ಣ ಚಿಕ್ಕಮಗಳೂರು
ತೊಟ್ಟವಾಡಿ ನಂಜುಂಡಸ್ವಾಮಿ – ಪ್ರೀತಿಯಿಂದ ತೋನಂ. ನಮ್ಮ ರಂಗಭೂಮಿಯ ವೈದ್ಯರು ಎಂದೇ ಹೆಸರು ಮಾಡಿದ್ದವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದ್ದವರು. ರಂಗಭೂಮಿಯ ನೂರಾರು ಕಲಾವಿದರು ವೈದ್ಯಕೀಯ ನೆರವು ಬಯಸಿ ಬರುವಂತಹವರಿಗೆ ಇವರ ಸಹಾಯ ಹಸ್ತ ದೊರಕುತಿತ್ತು.
ವಿಕ್ಟೋರಿಯಾ ಆಸ್ಪತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರೇ ಅಧಿಕೃತ ಸಂಘಟಕರಾಗಿದ್ದರು; ಅಂತೆಯೇ ರಂಗಭೂಮಿಗೆ, ಕಲಾಕ್ಷೇತ್ರ ಆವರಣದಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿ, ರಂಗಕಲಾವಿದರಿಗೆ ಆತ್ಮೀಯರಾಗಿದ್ದರು.
ಡಾ. ಸಿ.ಎನ್. ಮಂಜುನಾಥ್, ಡಾ. ಜಿ.ಟಿ.ಸುಭಾಷ್ ಅಂತಹ ಸಾಕಷ್ಟು ರಾಷ್ಟ್ರ ಮಟ್ಟದ ನುರಿತ , ತಜ್ಞ ವೈದ್ಯರುಗಳ ಒಡನಾಡಿಯಾಗಿದ್ದ ತೋನಂ, ಇಂತಹ ಖ್ಯಾತಿಯ ವೈದ್ಯರುಗಳ ಉತ್ಸುವಾರಿಯ ಚಿಕಿತ್ಸೆ ಯನ್ನು ರಂಗ ಕಲಾವಿದರಿಗೆ ದೊರಕಿಸಿಕೊಟ್ಟಿದ್ದರು. ಶ್ರೀ. ಡಿ.ಕೆ.ಚೌಟ, ಸಿಜಿಕೆ, ಮುಖ್ಯಮಂತ್ರಿ ಚಂದ್ರು, ಚೆನ್ನಪ್ಪಣ್ಣ, ಶ್ರೀನಿವಾಸ ತಾವರಗೆರೆ, ಅಶೋಕ ಬಾದರದಿನ್ನಿ, ಭಾಸ್ಕರರಾವ್ ,ಗುಡಿಹಳ್ಳಿ ನಾಗರಾಜ್, ಮುಂತಾದ ನೂರಾರು ಹೆಸರುಗಳನ್ನು ಪಟ್ಟಿ ಮಾಡಬಹುದು, ತೋನಂ ಅವರಿಂದ ವೈದ್ಯಕೀಯ ನೆರವು ಪಡೆದವರನ್ನು.

ಚೌಟ ಅವರ ನಿಧನದ ನಂತರ ಅವರು ಸ್ವಲ್ಪ ಕುಗ್ಗಿದ್ದರು. ಅವರ ಅಗಲುವಿಕೆ ಅವರಿಗೆ ತೀರಾ ಆಘಾತವಾಗಿತು. ಪ್ರತಿದಿನ ಅವರ ನೆನಪಿನಲ್ಲೆ ಸಾಕಷ್ಟು ಮಾತಾಡುತಿದ್ದರು… ನಾಟಕಕಾರ, ರಂಗ ಸಂಘಟಕ ತೋನಂ ಅವರು. ರಂಗ ಪಂಚಮಿ, ರಂಗ ಚೇತನ ರಂಗ ತಂಡಗಳ ಚಟುವಟಿಕೆ ತೋನಂ ಅವರ ಸಾರಥ್ಯದಲ್ಲೇ ನಡೆಯುತಿತ್ತು.
ದಕ್ಷಿಣ ವಲಯ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಸದಸ್ಯರಾಗಿ ಹಲವಾರು ರಂಗ ಸಂಘಟನೆಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆರ್ಥಿಕ ನೆರವನ್ನು ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಪ್ಪತ್ತೆರಡರ ತೋನಂ, ಮಾದಾರ ಚೆನ್ನಯ್ಯ,ಫಾಲ್ಗುಣಿ, ಜಾತಿಯೆಂಬ ಮಾಯೆಯೊಳು,ಕೊಂಡಿ ಮುಳ್ಳುಗಳು,ಹಬ್ಬ ಮತ್ತು ಬಲಿ, ಅರಿವಿನಂಗಳ ಮುಂತಾದ ನಾಟಕಗಳನ್ನು ರಚಿಸಿದ್ದರು.
ಹಾಗೆಯೇ, ಚೌಟರ ಕುರಿತು, ಡಾ. ಸಿ.ಎನ್. ಮಂಜುನಾಥ್ ಅವರ ಕುರಿತು ಸಮಗ್ರ ಬದುಕು- ಬರಹಗಳ ಸಂಪುಟ ಮತ್ತು ಅಭಿನಂದನಾ ಗ್ರಂಥಗಳನ್ನೂ ತಮ್ಮ ಟ್ರಸ್ಟ್ ನ ವತಿಯಿಂದ ಪ್ರಕಟಿಸಿದ್ದರು. ಗಂಗಾಧರ್ ಅವರ ಹುಳಿಯಾರ್ ನಲ್ಲಿ, ಚೌಟರ ಮಂಜೇಶ್ವರ ಮತ್ತು ಧರ್ಭೆಯಲ್ಲಿ , ಸಾಣೆಹಳ್ಳಿಯ ಶ್ರೀ ಮಠದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು, ನಾಟಕ- ಚಿತ್ರೋತ್ಸವಗಳನ್ನು ಆಯೋಜಿಸಿದ್ದ ಖ್ಯಾತಿ ಮತ್ತು ಶ್ರೇಯಸ್ಸು ನಂಜುಂಡಸ್ವಾಮಿ ಅವರಿಗೆ ಸೇರಬೇಕು.

ರಂಗ ಚೇತನ ಟ್ರಸ್ಟ್ ನಿಂದ ಪ್ರತಿ ವರುಷ ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ ಗಣ್ಯ ಮಹನೀಯರಿಗೆ ಸನ್ಮಾನ ಗೌರವಗಳನ್ನು ಮಾಡಿದ್ದಾರೆ. ಸಿಜಿಕೆ ಅಗಲಿಕೆಯ ನಂತರ ಸಿಜಿಕೆ ಹೆಸರಿನಲ್ಲಿ ಪ್ರಶಸ್ತಿ ಗೌರವಗಳನ್ನು ರಾಜ್ಯದ ಹಲವು ಜಿಲ್ಲೆಗಳ ರಂಗ ಪ್ರತಿಭೆಗಳಿಗೆ ಪ್ರಥಮವಾಗಿ ಕೊಟ್ಟ ರಂಗ ಆತ್ಮೀಯರು ತೋನಂ ಅವರು.
ಬೆಂಗಳೂರು ರಂಗ ಕಲಾವಿದರ ವಿವಿದ್ದೋದೇಶ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದ ತೋನಂ ಪ್ರತಿ ವರುಷ ಅಕ್ಟೋಬರ್ 2 ರಂದು ವೈದ್ಯಕೀಯ ಶಿಬಿರವನ್ನು ಆಯೋಜಿಸುವುದರಲ್ಲಿ ವಿಶೇಷ ಆಸಕ್ತಿ ವಹಿಸುತಿದ್ದರು.
ಹೀಗೆ ಹಲವು ರೀತಿಯ ರಂಗ ಸಂಘಟಕ ಕಾರ್ಯಕ್ರಮಗಳನ್ನು ತೀವ್ರ ಆಸಕ್ತಿಯಿಂದ ನಿರ್ವಹಿಸುತಿದ್ದ ತೋನಂ ಇನ್ನು ನಮಗೆ ಸಿಗುವುದಿಲ್ಲ ಎನ್ನುವ ವಾಸ್ತವ ಕಲ್ಪನೆಗೂ ಮೀರಿದ್ದು… ನನಗೆ ಹಿರಿಯಣ್ಣನ ರೂಪದಲ್ಲಿದ್ದ ತೋನಂ, ಮತ್ತೆ ನಮಗೆಲ್ಲರಿಗೂ ದೊರಕುವ ಹಾಗೆ ಆಗಲಿ ಎಂದು ಈಗಲೂ ಕನವರಿಸುತ್ತೇನೆ.






ಉತ್ತಮ ವ್ಯಕ್ತಿ ಪರಿಚಯ