-ಕವಿತಾ ವಿರೂಪಾಕ್ಷ
ಪ್ರೀತಿಯ ಸಾಕಿ…!
ನನ್ನ ಮೇಲೆ ನಿನಗೆ
ಅದೆಂತಹ ನಫರತ್ ಸಾಕಿ…
ನೋವುಗಳೆಲ್ಲಾ ಅವನಿಗೇ ಇರುವಂತೆ;
ದರ್ದುಗಳಿಗೆಲ್ಲಾ ಅವನೇ ವಾರಸುದಾರನಂತೆ..,
ಸದಾ..
ಕೇವಲ ಅವನನ್ನಷ್ಟೇ
ಸಂಭಾಳಿಸುತ್ತೀಯ…!
ಅವನ ನೋವು ತೊಳೆಯಲು
ಶರಾಬನ್ನು ಕೈಯಲ್ಲಿಡಿದು,
ಮೈಖಾನವನ್ನು ಸದಾ ತೆರೆದಿರುತ್ತೀಯಾ…?!
ಹೇಳೇ ಸಾಕಿ
ನಾನು ನಿನ್ನ ಕುಲವೇ ಅಲ್ಲವೇ..?
ನನಗೂ ನೋವುಗಳಿಲ್ಲವೇ..?
ನನಗೂ..,
ಹೇಳಲಾರದ ದರ್ದುಗಳಿಲ್ಲವೇ..??
ಕೇಳು..,
ಶರಾಬು ಸುರುವಿಕೊಂಡು
ವಾಸ್ತವವ ಕಳಚಿ
ಅಮಲಿನ ಜನ್ನತ್ ನಲ್ಲಿ ತೇಲಲು
ನಾನು ಅವನಲ್ಲ ಸಾಕಿ….
ವಾಸ್ತವಕ್ಕೆ ಚೂರೇ ಚೂರು
ಬೆನ್ನು ತಿರುಗಿದರೂ
ನನ್ನೆಲ್ಲಾ ಖಾಂದಾನ್ ಕತ್ತಲಾಗುವುದು ….!
ಸಾಕು ಸಾಕಿ…,
ಯಾವುದೇ ದುಃಖ
ದೂರುಗಳಿಲ್ಲದೆ ಬದುಕಿ ಬಿಡುವೆ.
ಗೆಳತಿಯಾಗಿ
ನನಗೂ ಯಾವುದಾದರೂ
ದವಾ ಕೊಟ್ಟುಬಿಡು…!
……….
………..
ಮತ್ತೇರಬಾರದು ಅಷ್ಟೆ…!!!






0 Comments