ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣಿನ ಒಳಗಣ್ಣಿನ ಆಳ ಹಿಡಿದಿಟ್ಟ ಚಿತ್ರ ಪ್ರದರ್ಶನ – ಸೌಮ್ಯ ಬರೀತಾರೆ

ಸಾತ್ವಿಕ ಪ್ರತಿರೋಧ ಮತ್ತು ಕಲಾವಿದರ ಕುಂಚದ ಆಕ್ರೋಶ

ಸೌಮ್ಯಾ ಕೆ  ಆರ್

ಇದೇ ಸೋಮವಾರದಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಯುವ ಪ್ರತಿಭಾನ್ವಿತ ಚಿತ್ರ ಕಲಾವಿದರು ತಮ್ಮ ಕುಂಚದಲ್ಲಿ ಮೂಡಿಸಿದ ವಿವಿಧ ಚಿತ್ರಾರಗಳ ಪ್ರದರ್ಶನ ಆರಂಭವಾಗಿದೆ. ಅವುಗಳನ್ನು ನೋಡಲು ಹೋದ ನನಗೆ ನಿಜಕ್ಕು ಆಶ್ಚರ್ಯ. ಕಾರಣ ಅವು ಕೇವಲ ಚಿತ್ರಗಳಾಗಿ ಉಳಿದಿರಲಿಲ್ಲ. ಜೊತೆಗೆ ಒಬ್ಬ ಪುರುಷ ಕಲಾವಿದರೂ ಕೂಡ ತನ್ನ ಕಲ್ಪನೆಯ ಕಣ್ಣುಗಳನ್ನೂ ಮೀರಿ ಹೆಣ್ಣಿನ ಒಳಗಣ್ಣಿನ ಆಳಕ್ಕೆ ಇಳಿಯಬಲ್ಲ. ಜೊತೆಗೆ ಹೆಣ್ಣನ್ನು ಕೇವಲ ಹೊರ ನೋಟದಿಂದ ನೋಡಿದರೆ ಸಾಲದು. ಅವಳ ಆಂತರ್ಯದಲ್ಲಿ ಇನ್ನೊಂದು ನೆಲೆಯ ತುಡಿತ, ಆಸೆ, ಆಕ್ಷಾಂಕ್ಷೆ, ಸತ್ಯ ಅಡಗಿರುತ್ತದೆ. ಅದನ್ನು ಹುಡುಕುವ ಅಥವಾ ಪರಿಗಣಿಸುವ ಮನಸ್ಸು ಶೇ.60 ರಷ್ಟು ಮಂದಿಗೆ ಇಲ್ಲ ಎನ್ನುವುದನ್ನು ಆ ಚಿತ್ರಕಲೆಗಳು ಸ್ವಚ್ಛಂದವಾಗಿ ಸಾರಿ ಹೇಳುತ್ತಿದ್ದವು. ಹೆಣ್ಣು ಇಂದು ಎಷ್ಟೇ ಸಾಧನೆ ಮಾಡಿದ್ದಾಳೆ ಎಂದು ಹೇಳಿಕೊಂಡರೂ ಅವಳ ಬದುಕು ನಿಜಕ್ಕೂ ಮುಳ್ಳಬೇಲಿ. ಅತ್ತ ಧರಿ ಇತ್ತಪುಲಿ ಎನ್ನುವ ಹಾಗೆ ಹೆಣ್ಣಿನ ಸುತ್ತ ಒಂದಲ್ಲಾ ಒಂದು ರೀತಿಯ ಗೋಡೆಗಳು, ಸಂಕೋಲೆಗಳು ಸುತ್ತುವರಿದೇ ಇರುತ್ತವೆ. ಅವಳು ಏನನ್ನೇ ಆದರೂ ಸ್ವತಂತ್ರ್ಯವಾಗಿ ಮಾಡ ಹೊರಟರೆಂದು ಅವುಗಳಿಗೆ ಪುರುಷಾಧಿಪತ್ಯದ ಸರ್ಪಗಾವಲು ಇದ್ದೇ ಇರುತ್ತದೆ. ಅವಳ ಆ ನೆಲೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳಬೇಕು. ಜೊತೆಗೆ ಪ್ರದರ್ಶನ ಮಾಡಬೇಕು. ಅದಿಲ್ಲದಿದ್ದರೆ ಬೇರೆ ದಾರಿಗಳೇ ಅವಳಿಗೆ ಇಲ್ಲ. ಹೆಣ್ಣಿಗೆ ಯಾವುದೇ ಸರಳ, ಸುಸೂತ್ರವಾದ ದಾರಿಗಳಿಲ್ಲ.. ಬಾಲ್ಯದಲ್ಲೇ ಅಪ್ಪನ ಆಸರೆ, ಹರೆಯದಲ್ಲಿ ಪ್ರಿಯಕರ ಅಥವಾ ಗಂಡನ ಆಸರೆ ಮುಪ್ಪಿನ ಕಾಲದಲ್ಲಿ ಮೊಮ್ಮಕ್ಕಳ ಆಸರೆ ಬೇಕು ಎನ್ನುವಂಥ ಸ್ಥಿತಿ ನಿರ್ಮಿಸಲಾಗಿದೆ. ಒಂದು ರೀತಿ ಅವಳ ಮೇಲೆ ನಿತ್ಯ ಹದ್ದಿನ ಕಣ್ಣು.

ಹೆಣ್ಣಿಗೆ ಇಂಥ ಆಧುನಿಕ ಜಗತ್ತಿನಲ್ಲೂ ಕೂಡ ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಾಗಿದೆ. ಒಂದು ತನಗೆ ಇಷ್ಟವಾದ ಬಟ್ಟೆ ತೊಡುವುದರಿಂದ ಮೊದಲ್ಕೊಂಡು ಅವಳ ಆಗುಹೋಗುಗಳ ಬಗೆಗಿನ ಇಡೀ ಸ್ವಾತಂತ್ರ್ಯವನ್ನು ಸದ್ದಿಲ್ಲದೆ ಕಿತ್ತುಕೊಳ್ಳಲಾಗುತ್ತಿದೆ. ಒಂದು ಕಡೆ ಹೆಣ್ಣನ್ನು ದೇವತೆಗೆ ಹೋಲಿಸುತ್ತಲೇ ಇನ್ನೊಂದು ಕಡೆಗೆ ಪೊಲೀಸ್ ವ್ಯವಸ್ತೆಯಿಂದ ಮೊದಲ್ಗೊಂಡು ಎಲ್ಲ ವ್ಯವಸ್ಥೆಗಳೂ ಪುರುಷಪ್ರಧಾನವಾಗಿಯೇ ಇವೆ. ಮಹಿಳೆ ತನಗೆ ಅನ್ಯಾಯವಾಗಿದೆ ಎಂದು ಯಾವುದೆ ವ್ಯವಸ್ಥೆಯ ಅಡಿ ನ್ಯಾಯಕ್ಕೆ ಮೊರೆ ಹೋದರೆ ಅವಳನ್ನು ನೋಡುವ ದೃಷ್ಟಿಯೇ ಬದಲಾಗುತ್ತಿದೆ. ಅಂದರೆ ಹೆಣ್ಣು ತನ್ನ ಆಂತರ್ಯದಲ್ಲಿರುವ ಯಾವುದನ್ನೂ ಹೇಳಿಕೊಳ್ಳಬಾರದು ಎನ್ನುವಂಥ ಸ್ಥಿತಿಯನ್ನು ಸುವ್ಯವಸ್ಥಿತವಾಗಿ ಸೃಷ್ಟಿ ಮಾಡಲಾಗಿದೆ. ಆ ಮಟ್ಟಿಗೆ ಪುರುಷ ಪ್ರಧಾನ ವ್ಯವಸ್ಥೆ ಎಲ್ಲವನ್ನು ತನ್ನ ಕಪಿಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಂಡಿದೆ.

ಹೆಣ್ಣಿನ ಮನಸ್ಸು ಒಂದು ಹೂವಿನ ರೀತಿ. ಅದನ್ನು ತನ್ನಷ್ಟಕ್ಕೆ ತಾನೇ ಸ್ವಚ್ಛಂದವಾಗಿ ಅರಳಿದರೆ ಚೆಂದ. ಆದರೆ ಅದನ್ನು ಅರಿಯದೆ ಬಲವಂತವಾಗಿ ಎಲ್ಲವನ್ನು ಅವಳ ಮೇಲೆ ಹೇರಲಾಗುತ್ತಿದೆ. ನಿತ್ಯ ಅನುಕ್ಷಣವೂ ಇಂಥ ಪ್ರಯತ್ನಗಳಿಂದಾಗಿಯೇ ಹೆಣ್ಣಿಗೆ ಕೇವಲ ಸ್ವಂತಿಕೆಯನ್ನು ಕಳೆದುಕೊಂಡು ಬದುಕುತ್ತಿದ್ದಾಳೆ. ಹೆಣ್ಣು ಎಂದರೆ ಕೇವಲ ಹೆಣ್ಣಲ್ಲ. ಅವಳಲ್ಲಿರುವ ತಾಯ್ತನ ನೆಲ, ಜಲ, ಗಾಳಿ, ಪರಿಸರ ಪ್ರತಿ ಉಸಿರಿನಲ್ಲೂ ಇದೆ. ಆದರೆ ಅದನ್ನು ಅರಿಯುವ ಕೆಲಸವಾಗಿಲ್ಲ ಅಷ್ಟೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವುದನ್ನು ಪರಾಮರ್ಶೆ ಮಾಡುವ ಹಕ್ಕು ಯೋಗ್ಯತೆ ಎರಡೂ ಕೂಡ ಪ್ರತಿಯೊಬ್ಬ ಹೆಣ್ಣಿಗೆ ಇದೆ. ಅದು ಅವಳ ಜನ್ಮಸಿದ್ಧ ಹಕ್ಕು. ಆದರೆ ಅದನ್ನು ಇತ್ತೀಚಿನ ದಿನಗಳಲ್ಲಿ ಇಲ್ಲಸಲ್ಲದ ಆರೋಪಗಳಿಂದಾಗಿ ಹೆಣ್ಣಿನಲ್ಲಿರುವ ತಾಯ್ತವನ್ನೇ ಸರ್ವನಾಶ ಮಾಡಲಾಗುತ್ತಿದೆ.
ಜಾಗತೀಕರಣ ಕೇವಲ ಸಾಮಾಜಿಕ ಜೀವನದ ಮೇಲಲ್ಲ ಹೆಣ್ಣಿನ ಬದುಕಿನ ಮೇಲೂ ಆಳವಾಗಿ ಪರಿಣಾಮವನ್ನು ಬೀರಿದೆ. ರಾಜಕೀಯ, ಸಾಮಾಜಿ, ಆರ್ಥಿಕ ಹಾಗೂ ಖಾಸಗಿ ನೆಲೆಯಲ್ಲಿಯೂ ಹೆಣ್ಣಿನ ಬದುಕಿಗೆ ಒಳ ಏಟುಗಳು ಬಿದ್ದಿವೆ. ಆ ಮೂಲಕ ಹೆಣ್ಣಿನ ಬದುಕಿನ ಸ್ವಾತಂತ್ರ್ಯವನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿದೆ. ಹೀಗಾಗಿ ಅಂತಿಮವಾಗಿ ಮುಪ್ಪಿನಲ್ಲೂ ಕೂಡ ಮಹಿಳೆಗೆ ಸ್ವಾತಂತ್ರ್ಯ ಇಲ್ಲದಾಗಿದೆ. ಈ ಕಾರಣಕ್ಕಾಗಿ ಮಹಿಳೆಯರು ದೂರು ನೀಡಲು ಹೋದರೆ ಅವರನ್ನು ಠಾಣೆಯಲ್ಲಿ ಸ್ವಾಗತಿಸುವ ರೀತಿಯೇ ಬೇರೆಯಾಗಿರುತ್ತದೆ. ಜೊತೆಗೆ ಅಲ್ಲೂ ಕೂಡ ಅವಳು ದೌರ್ಜನ್ಯಕ್ಕೆ ಒಳಗಾದರೆ ಆಶ್ಚರ್ಯವಿಲ್ಲ. ಕಾನೂನು ಕೂಡ ಆ ರೀತಿ ಧರಿದ್ರ ವ್ಯವಸ್ಥೆಯಲ್ಲಿ ಸಿಲುಕಿಕೊಂಡಿದೆ. ಅಪರಾಧಿಗಳ ಪರವಾಗಿಯೇ ಕೂನೂನು ಕೂಡ ಕಣ್ಣುಮುಚ್ಚಿ ಕುಳಿತಿರುತ್ತದೆ ಎನ್ನುವುದನ್ನು ಅಲ್ಲಿನ ಎಲ್ಲ ಚಿತ್ರಗಳು ಎಳೆ ಎಳೆಯಾಗಿ ಬಿಚ್ಚಿ ಹೇಳುತ್ತಿದ್ದವು.

ಸಮಾಜ ಕ್ರೌರ್ಯ, ಕಾಮದ ಸೆಳೆತಕ್ಕೆ ಸಿಕ್ಕಿ ನರಳುತ್ತಿದೆ. ಅದರ ಪರಿಣಾಮ ಮಾತ್ರ ನಿತ್ಯ ಹೆಣ್ಣಿನ ಮೇಲಾಗುತ್ತಿದೆ. ಇಂಥ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳು ಹೆಣ್ಣು ನಿತ್ಯ ಹರಸಾಹಸ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನೂ ಚಿತ್ರ ಕಲಾವಿಧರಾದ ಕುಮಾರ್ ಸೇರಿದಂತೆ ಸುಮಾರು ಮೂರ್ನಾಲ್ಕು ಮಂದಿ ಕಲಾವಿದರು ತಮ್ಮ ಕಲಾ ಕುಂಚದಲ್ಲಿ ಅರಳಿಸಿದ್ದರು. ಸಾವಿರ ಧ್ವನಿಗಳು ಹೇಳಬಹುದಾದ ಬಗೆ ಬಗೆ ಧ್ವನಿಗಳನ್ನು ಅವರು ಕೇವಲ ಒಂದೊಂದು ಚಿತ್ರದಲ್ಲೂ ಸವಿಸ್ತಾರವಾಗಿ ಬಿಡಿಸಿಟ್ಟಿದ್ದರು. ಸಮಾಜ ವ್ಯವಸ್ಥೆಗೆ ಅದು ಚಾಟಿ ಬೀಸಿದಂತಿತ್ತು. ನಿತ್ಯ ಸಮಾಜದಲ್ಲಿ ಹಾಸು ಹೊಕ್ಕು ಹೋಗುತ್ತಿರುವ ಅತ್ಯಾಚಾರ, ಹತ್ಯಾಚಾರ, ಕೊಲೆ, ಸುಲಿಗೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆಗುವ ದೌರ್ಜನ್ಯಗಳು, ಸಂಬಂಧಗಳ ಪಾವಿತ್ರ್ಯಯನ್ನೂ ಲೆಕ್ಕಿಸ ನಡೆಸುವ ದೌರ್ಜನ್ಯಗಳನ್ನು ಹತ್ತಿಕ್ಕಲು ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಸಮಾಜ ಪ್ರತಿ ಸ್ಥರದಲ್ಲು ಇಂಥ ಜಾಗೃತಿಯ ಪ್ರಯತ್ನಗಳು ಆಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಸಾತ್ವಿಕ ಪ್ರತಿರೋಧವನ್ನು ವ್ಯಕ್ತಪಡಿಸಬೇಕು. ಆಗ ಮಾತ್ರ ಕಲ್ಲು ಹೃದಯಗಳನ್ನು ಕರಗಿಸಿ ಹೂವಾಗಿಸಬಹುದು. ಇಲ್ಲದೆ ಹೋದರೆ ಎಲ್ಲರೂ ಇಲ್ಲಿ ಮೂಕ ಪ್ರೇಕ್ಷಕರಾಗಬೇಕು. ಅದರಿ ದುಷ್ಪರಿಣಾಮ ನಾಳೆ ಎಲ್ಲ ವಲಯ, ಹಂತಗಳನ್ನೂ ವ್ಯಾಪಿಸಿಕೊಳ್ಳುತ್ತದೆ ಎಚ್ಚರವಿರಲಿ.
 

‍ಲೇಖಕರು G

21 August, 2014

2 Comments

  1. ರಮೇಶ್ ಹಿರೇಜಂಬೂರು

    ಇಡೀ ಲೇಖನ ತುಂಬಾ ಚೆನ್ನಾಗಿದೆ. ಒಬ್ಬ ಕಲಾವಿದನಾದವನು ಏನೇನೋ ಕೆಲಸಕ್ಕೆ ಬಾರದ ವಿಚಾರಗಳನ್ನು ತನ್ನ ಕಲಾ ಕುಂಚದಲ್ಲಿ ಅಡಗಿಸಿಡುವುದಕ್ಕಿಂತ್ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ ಅಂಥ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಸ್ಪಂದಿಸುವುದು ತುಂಬಾ ಮುಖ್ಯ ಅಂಥ ಕೆಲಸವನ್ನು ಕಲಾವಿದರು ಮಾಡಿದ್ದಾರೆ. ಸೌಮ್ಯಾ ಅವರ “ಸಮಾಜ ಕ್ರೌರ್ಯ, ಕಾಮದ ಸೆಳೆತಕ್ಕೆ ಸಿಕ್ಕಿ ನರಳುತ್ತಿದೆ. ಅದರ ಪರಿಣಾಮ ಮಾತ್ರ ನಿತ್ಯ ಹೆಣ್ಣಿನ ಮೇಲಾಗುತ್ತಿದೆ. ಇಂಥ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳು ಹೆಣ್ಣು ನಿತ್ಯ ಹರಸಾಹಸ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಸಮಾಜದಲ್ಲಿ ಹಾಸು ಹೊಕ್ಕು ಹೋಗುತ್ತಿರುವ ಅತ್ಯಾಚಾರ, ಹತ್ಯಾಚಾರ, ಕೊಲೆ, ಸುಲಿಗೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆಗುವ ದೌರ್ಜನ್ಯಗಳು, ಸಂಬಂಧಗಳ ಪಾವಿತ್ರ್ಯಯನ್ನೂ ಲೆಕ್ಕಿಸ ನಡೆಸುವ ದೌರ್ಜನ್ಯಗಳನ್ನು ಹತ್ತಿಕ್ಕಲು ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಸಮಾಜ ಪ್ರತಿ ಸ್ಥರದಲ್ಲು ಇಂಥ ಜಾಗೃತಿಯ ಪ್ರಯತ್ನಗಳು ಆಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಸಾತ್ವಿಕ ಪ್ರತಿರೋಧವನ್ನು ವ್ಯಕ್ತಪಡಿಸಬೇಕು” ಎನ್ನುವ ಮಾತು ನಿಜಕ್ಕೂ ವಾಸ್ತವ ಹಾಗೂ ಸತ್ಯ… ನಿಮ್ಮ ಬರವಣಿಗೆ ಹೀಗೇ ಮುಂದುವರಿಯಲಿ…
    -ರಮೇಶ್ ಹಿರೇಜಂಬೂರು

  2. D.Ravivarma

    ಸಮಾಜ ಕ್ರೌರ್ಯ, ಕಾಮದ ಸೆಳೆತಕ್ಕೆ ಸಿಕ್ಕಿ ನರಳುತ್ತಿದೆ. ಅದರ ಪರಿಣಾಮ ಮಾತ್ರ ನಿತ್ಯ ಹೆಣ್ಣಿನ ಮೇಲಾಗುತ್ತಿದೆ. ಇಂಥ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳು ಹೆಣ್ಣು ನಿತ್ಯ ಹರಸಾಹಸ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನೂ ಚಿತ್ರ ಕಲಾವಿಧರಾದ ಕುಮಾರ್ ಸೇರಿದಂತೆ ಸುಮಾರು ಮೂರ್ನಾಲ್ಕು ಮಂದಿ ಕಲಾವಿದರು ತಮ್ಮ ಕಲಾ ಕುಂಚದಲ್ಲಿ ಅರಳಿಸಿದ್ದರು. ಸಾವಿರ ಧ್ವನಿಗಳು ಹೇಳಬಹುದಾದ ಬಗೆ ಬಗೆ ಧ್ವನಿಗಳನ್ನು ಅವರು ಕೇವಲ ಒಂದೊಂದು ಚಿತ್ರದಲ್ಲೂ ಸವಿಸ್ತಾರವಾಗಿ ಬಿಡಿಸಿಟ್ಟಿದ್ದರು. ಸಮಾಜ ವ್ಯವಸ್ಥೆಗೆ ಅದು ಚಾಟಿ ಬೀಸಿದಂತಿತ್ತು. ನಿತ್ಯ ಸಮಾಜದಲ್ಲಿ ಹಾಸು ಹೊಕ್ಕು ಹೋಗುತ್ತಿರುವ ಅತ್ಯಾಚಾರ, ಹತ್ಯಾಚಾರ, ಕೊಲೆ, ಸುಲಿಗೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆಗುವ ದೌರ್ಜನ್ಯಗಳು, ಸಂಬಂಧಗಳ ಪಾವಿತ್ರ್ಯಯನ್ನೂ ಲೆಕ್ಕಿಸ ನಡೆಸುವ ದೌರ್ಜನ್ಯಗಳನ್ನು ಹತ್ತಿಕ್ಕಲು ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಸಮಾಜ ಪ್ರತಿ ಸ್ಥರದಲ್ಲು ಇಂಥ ಜಾಗೃತಿಯ ಪ್ರಯತ್ನಗಳು ಆಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಸಾತ್ವಿಕ ಪ್ರತಿರೋಧವನ್ನು ವ್ಯಕ್ತಪಡಿಸಬೇಕು. ಆಗ ಮಾತ್ರ ಕಲ್ಲು ಹೃದಯಗಳನ್ನು ಕರಗಿಸಿ ಹೂವಾಗಿಸಬಹುದು. ಇಲ್ಲದೆ ಹೋದರೆ ಎಲ್ಲರೂ ಇಲ್ಲಿ ಮೂಕ ಪ್ರೇಕ್ಷಕರಾಗಬೇಕು. ಅದರಿ ದುಷ್ಪರಿಣಾಮ ನಾಳೆ ಎಲ್ಲ ವಲಯ, ಹಂತಗಳನ್ನೂ ವ್ಯಾಪಿಸಿಕೊಳ್ಳುತ್ತದೆ ಎಚ್ಚರವಿರಲಿ.
    mana tattuva manakaaduva baraha..haagu vastava chintane…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading