-ಉದಯಕುಮಾರ ಹಬ್ಬು
ಕಳೆದು ಹೋದದ್ದೇನು?
ಹುಡುಕಿಕೊಂಡು ಹೊರಟಿದ್ದೆ
ಕಳೆದುಕೊಂಡದ್ದನ್ನು ಹುಡುಕಿಕೊಂಡು.
ಅಸಲು ಕಳೆದುಕೊಂಡದ್ದೇನು? ಎಲ್ಲಿ
ಹುಡುಕಲಿ ಇದನು? ‘ಕೇಳಿದ ಒಬ್ಬ
ಹುಡುಕುತ್ತಿರುವುದು ಏನು?’ ‘ಗೊತ್ತಿಲ್ಲ’ ಎಂದೆ
‘ಹುಚ್ಚು! ತಲೆ ಕೆಟ್ಟಿದೆ! ‘ ಎಂದು ನಕ್ಕು ಹೊರಟ
ಅರೆ! ಅರೆ! ನನ್ನಂತೆ ಕಂಡ ಅವನು ನಾನೆ?
ವಿಕ್ರಮನಂತೆ ಅರಳಿ ಮರದ ಬೇತಾಳ ಹೆಗಲ ಮೇಲೆ
ನೇತಾಡುತ್ತಿದ್ದ ವೇತಾಳ ನಾನಲ್ಲವೆ?
ನನ್ನ ವೇತಾಳ ಹೇಳಿತೊಂದ ಕಥೆಯ!
ಆಕಾಶದಲಿ ಹೊರಟು ನಡೆದಿದ್ದ ಯಾತ್ರಿಕ
ನೂರಾರು ನಕ್ಷತ್ರಗಳ ಸರ ಮಾಲೆ ಹೆಣೆದು
ಅವಳ ಕೊರಳಿಗೆ ತೊಡಿಸಿದ.
ಅವಳಿಗೆ ಸಂತೋಷವಾದಂತೆ ಕಾಣಲಿಲ್ಲ.
ಅವಳು ಏನಕ್ಕೆ ದುಃಖಿ? ನೆಮ್ಮದಿ ಇಲ್ಲ? ಹೇಳು.
ಉತ್ತರಿಸದಿದ್ದರೆ ನಿನ್ನ ತಲೆ ನೂರು ಹೋಳು”
ಎಲ್ಲಿದೆ ಉತ್ತರ? ಒಳಗೆ ಹುಡುಕಿದೆ; ತಡಕಾಡಿದೆ
ಅಲ್ಲಿ ನಂದಾದೀಪವೊಂದುರಿಯುತ್ತಿತ್ತು.
ಒಳಗೆ ಬೆಳಕ ಕಂಡೆ
ಉತ್ತರಿಸಿದೆ: ನೀರು ನೆಲದಡಿಯಲ್ಲಿದೆ
ಅಗೆದರೆ ಆಳದಿ ಸಿಗುವುದು ಗಂಗಾಜಲ.”
ವೇತಾಳ ಗಹಗಹಿಸಿ ನಕ್ಕಿತು
ನಕ್ಕಿದ್ದು ನಾನೆ? ವೇತಾಳವೆ?






0 Comments