ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂಸೆಗಿಂತ ಅನೈತಿಕತೆಯೇ ಮಾನವೀಯವೇನೋ…….?

ಪರ್ದಾ ಹಿಂದಿನ ಕತ್ತಲ ಕಥೆ – ‘ಗದ್ದಾಮ’

– ಡಾ ಅಶೋಕ್ ಕೆ ಆರ್

ಹಿಂಗ್ಯಾಕೆ

ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ. ಕಮಲ್ ನಿರ್ದೇಶನದ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಸ್ವತಿಯಾಗಿ ಕಾವ್ಯ ಮಾಧವನ್ ನೈಜವಾಗಿ ಅಭಿನಯಿಸಿದ್ದಾರೆ. ಅಪರಿಚಿತ ನಾಡು ಹುಟ್ಟಿಸುವ ಅಷ್ಟೂ ಭಯವನ್ನು ಅವರ ಕಣ್ಣುಗಳಲ್ಲೇ ಕಾಣಬಹುದು. ಪ್ರೀತಿಯ ಗಂಡ ನದಿಯಲ್ಲಿ ಮುಳುಗಿಹೋಗುತ್ತಿದ್ದ ಮಕ್ಕಳನ್ನುಳಿಸಲು ಹೋಗಿ ಸಾವಿಗೀಡಾದಾಗ ಅಸ್ವತಿಗೆ ಉಳಿದಿದ್ದು ಮನೆಯಲ್ಲಿನ ಸಾಲ – ಕಷ್ಟಗಳು ಮಾತ್ರ. ಸಾಲ ತೀರಿಸುವ ಸಲುವಾಗಿ ಸೌದಿಗೆ ತೆರಳುತ್ತಾಳೆ. ಸೌದಿಯ ವಿಮಾನ ನಿಲ್ದಾಣದಲ್ಲಿ ಪರಿಚಿತಳಾದ ಮುಸ್ಲಿಮಳೊಬ್ಬಳು ಹಣೆಯ ತಿಲಕ ಅಳಿಸುವಂತೆ ಸಲಹೆ ನೀಡಿ ತಲೆಯ ಮೇಲೆ ಹೊದ್ದುಕೊಳ್ಳಲು ಕಪ್ಪು ವಸ್ತ್ರವನ್ನು ನೀಡುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ಅನ್ಯಧರ್ಮೀಯ ವಿಚಾರಗಳಿಗೆ ಸೌದಿಯಂಥ ಧರ್ಮಾಧಾರಿತ ದೇಶದ ಅಸಹನೀಯ ಅಭಿಪ್ರಾಯಗಳು ಇದೊಂದೇ ದೃಶ್ಯದಲ್ಲಿ ವಿವರಿಸಲ್ಪಟ್ಟಿದೆ. ಅಸ್ವತಿಯ ಊರಿನವನಾದ ಉಸ್ಮಾನ್ ತಾನು ಕೆಲಸ ಮಾಡುವ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಇಂಡೋನೇಷ್ಯಾದ ಮುಸ್ಲಿಂ ಯುವತಿಯೊಬ್ಬಳು ಕೆಲಸದಲ್ಲಿದ್ದಾಳೆ. ಅಸ್ವತಿಯ ಕಷ್ಟಗಳು ನಿಧಾನಕ್ಕೆ ಆರಂಭವಾಗುತ್ತದೆ, ಆ ಮನೆಯವರ ಕ್ರೌರ್ಯಭರಿತ ಮನಸ್ಸುಗಳನ್ನು ತೆರೆಯಲ್ಪಡುತ್ತದೆ. ದೂರದ ದೇಶದಲ್ಲಿ ದೈಹಿಕ ಅಗತ್ಯಗಳಿಗಾಗಿ ಉಸ್ಮಾನ್ ಇಂಡೋನೇಷ್ಯಾದ ಯುವತಿಯೊಡನೆ ಸೇರುತ್ತಿರುತ್ತಾನೆ. ಈ ವಿಷಯ ಮನೆಯವರಿಗೆ ತಿಳಿದು ಉಸ್ಮಾನನನ್ನು ಓಡಿಸಿ, ಇಂಡೋನೇಷ್ಯಾ ಯುವತಿಗೆ ಸಾಯುವಂತೆ ಬಡಿಯುತ್ತಾರೆ. ಇವರು ನೀಡುವ ಹಿಂಸೆಗಿಂತ ಅನೈತಿಕತೆಯೇ ಮಾನವೀಯವೇನೋ? ಇಂಡೋನೇಷ್ಯಾ ಯುವತಿಗೆ ಮನೆಯಿಂದ ಓಡಿಹೋಗಲು ಸಹಾಯ ಮಾಡಿದ ನಂತರ ಮನೆಯವರ ಅಷ್ಟೂ ಕೋಪ ಅಸ್ವತಿಯ ಮೇಲೆ ತಿರುಗುತ್ತದೆ. ಅಲ್ಲಿಂದ ಓಡಿಹೋಗಿ ನಾನಾ ಕಷ್ಟಗಳನ್ನನುಭವಿಸಿ ಜೈಲುವಾಸವನ್ನೂ ಕಂಡು ರಜಾಕಿನ ನೆರವಿನಿಂದ ಕೊನೆಗೆ ಪಾರಾಗುತ್ತಾಳೆ. ಇದು ಕೇವಲ ಹಿಂಸೆಯ ಚಿತ್ರವಲ್ಲ,ಅಮಾನವೀಯತೆಯ ಮರುಭೂಮಿಯಲ್ಲೂ ಅಲ್ಲಲ್ಲಿ ಮಾನವೀಯ ಓಯಸಸ್ಸುಗಳಿವೆ. ‘ಅನಾಥ ಭಾರತೀಯ ‘ ಹೆಣಗಳನ್ನು ಗುರುತಿಸಿ ಮನೆಗೆ ಮುಟ್ಟಿಸುವ ಪ್ರಯತ್ನ ಮಾಡುವ ರಜಾಕನ ಪಾತ್ರ ಮೆಚ್ಚುಗೆಗೆ ಅರ್ಹ. ರಜಾಕನ ಮುಖಾಂತರ ಅಕ್ರಮ ವಲಸೆಯ ಬಗ್ಗೆ, ರಜಾಕನಿಂದ ವರದಿ ಪಡೆದು ‘ರೋಚಕ ಕಥೆ’ಗಳನ್ನಾಗಿಸುವ ಎಸಿ ರೂಮಿನ ಪತ್ರಕರ್ತನ ಬಗ್ಗೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು. ಎಲ್ಲರಿಗೂ ನೆರವು ನೀಡುವ ಧಾವಂತದಲ್ಲಿ ತನ್ನ ಪಾಸ್ ಪೋರ್ಟ್ ನವೀಕರಿಸುವುದನ್ನೇ ಮರೆತು ಬಿಟ್ಟ ರಜಾಕನಿಗೆ ತನ್ನ ತಾಯಿಯ ಅಂತ್ಯಕ್ರಿಯೆಗೇ ಭಾರತಕ್ಕೆ ಮರಳಲಾಗುವುದಿಲ್ಲ!     ಸೌದಿ ಅರೇಬಿಯಾವನ್ನು ಆದರ್ಶ ದೇಶವೆಂಬಂತೆ ನೋಡುವ ಮುಸ್ಲಿಮರು ಮತ್ತು ಭಾರತವನ್ನು ಹಿಂದೂ ದೇಶವಾಗಿ ಮಾಡುವ ಸಂಕಲ್ಪ ತೊಡುವ ಹಿಂದೂಗಳಿಬ್ಬರೂ ನೋಡಲೇಬೇಕಾದ ಚಿತ್ರ ‘ಗದ್ದಾಮ’      ]]>

‍ಲೇಖಕರು G

2 September, 2012

1 Comment

  1. Nagesh

    ಸೌದಿ ಅರೇಬಿಯಾವನ್ನು ಆದರ್ಶ ದೇಶವೆಂಬಂತೆ ನೋಡುವ ಮುಸ್ಲಿಮರು ಮತ್ತು ಭಾರತವನ್ನು ಹಿಂದೂ ದೇಶವಾಗಿ ಮಾಡುವ ಸಂಕಲ್ಪ ತೊಡುವ ಹಿಂದೂಗಳಿಬ್ಬರೂ ನೋಡಲೇಬೇಕಾದ ಚಿತ್ರ ‘ಗದ್ದಾಮ’
    good lines….!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading