ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಯ್ ರಾದ, ಹೀಗೇ ಅಲೆಯುತ್ತಿರಿ..

ಇದು ‘ಹೊಸ ರೀತಿಯ ಒಂದು ಪಯಣ’ ಎಂಬ ಟ್ಯಾಗ್ ಲೈನ್ ಹೊತ್ತೇ ಆರಂಭವಾದದ್ದು ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಪ್ರವಾಸ ಕಥನ. ಏಕೆಂದರೆ ಇದು ಪ್ರವಾಸ ಕಥನವಾಗಿರಲಿಲ್ಲ ಬದಲಿಗೆ ಬದುಕು ಕಲಿತ ಕಥನವಾಗಿತ್ತು.

ಇರಲಿ ಸತತವಾಗಿ ಒಂದು ತಿಂಗಳು ‘ಅವಧಿ’ಯಲ್ಲಿ ಬೆಳಕು ಕಂಡ ಈ ಸರಣಿ ಮುಕ್ತಾಯಗೊಂಡಿದೆ.

ಈ ಬಗ್ಗೆ ಶಮ ನಂದಿಬೆಟ್ಟ ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ 

ಈ ಪ್ರವಾಸ ಕಥನವನ್ನು ಈಗಲೂ ಓದಬಹುದು : ಇಲ್ಲಿ ಕ್ಲಿಕ್ಕಿಸಿ

shama nandibetta

ಶಮ ನಂದಿಬೆಟ್ಟ 

ನಿಮ್ಮ ಅಷ್ಟೂ ಹೆಜ್ಜೆಗಳ ಜತೆ ಓದಿನ ಹೆಜ್ಜೆ ಹಾಕಿದ್ದೇನೆ.

ಪ್ರತಿಯೊಂದಕ್ಕೂ ಕಾಮೆಂಟ್ ಮಾಡದಿದ್ದರೂ ಎಲ್ಲವೂ ನನ್ನನ್ನು ಹಿಡಿದಿಟ್ಟಿವೆ. ಸ್ವಭಾವತಃ ಅಲೆಮಾರಿ ಪ್ರವೃತ್ತಿಯ ನನಗೆ ಎರಡು ಪುಟ್ಟ ಕಿನ್ನರಿಗಳನ್ನು ಬಿಟ್ಟು ಅಲೆದಾಡುವದು ಆಗದ ಮಾತಾದರೂ ನನ್ನ ಕನಸುಗಳನ್ನು ಹೀಗೆ ಯಾರಾದರೂ ಬದುಕಿದಾಗ ಏನೋ ಅನೂಹ್ಯವಾದ ಖುಷಿ ಸಿಗುತ್ತದೆ ಮತ್ತು ನನ್ನ ಕನಸುಗಳನ್ನ ಜೀವಂತವಾಗಿಟ್ಟುಕೊಳ್ಳುವುದೂ ಸಾಧ್ಯವಾಗುತ್ತದೆ.

ನಿಮ್ಮ ಬರವಣಿಗೆಯಲ್ಲಿ ನಂಗೆ ಕಂಡಿದ್ದು ಸರಳತೆ. ಯಾವುದನ್ನೂ ತೋರುಗಾಣಿಕೆಗೆ ಬಿಂಬಿಸದೇ ಇದ್ದದ್ದು ಇದ್ದ ಹಾಗೆ ಹೇಳುವ ನೇರವಂತಿಕೆ, ಯಾರನ್ನೂ ಅನವಶ್ಯಕ ಹೊಗಳದೇ, ಎಷ್ಟು ಬೇಕೋ ಅಷ್ಟೇ ಟೀಕಿಸಿ, (ವಿಮರ್ಶಿಸಿ), ಅನುಭವಕ್ಕೆ ದಕ್ಕಿದ್ದರ ಜತೆಗೆ ಕಂಡುಕೊಂಡ ಅನುಭಾವಗಳನ್ನೂ ಬೆರೆಸಿ ಓದುಗನಿಗೆ footprints (1)ಕೊಟ್ಟಿದ್ದು ಆಪ್ತವೆನಿಸಿತು. ಶಬ್ದಗಳ ಆಡಂಬರವಿಲ್ಲ, ಏನೋ ಸಮಾಜ ಸೇವೆ ಮಾಡುತ್ತಿರುವೆನೆಂಬ ಅಹಂಕಾರವಿಲ್ಲ, ದಿಟ್ಟತನವಿದೆಯೆಂದು ಅದರ ಅನವಶ್ಯಕ ಬಳಕೆಯಿಲ್ಲ, ವಿನೀತತೆ ಎಲ್ಲೂ ದೌರ್ಬಲ್ಯವಾಗಿ ಕಾಣಿಸಿಲ್ಲ. ಸಂತನಂತೆ ಎಲ್ಲ ಬಿಟ್ಟು ಹೊರಟರೂ ಕೊಂಡಿ ಕಳಚಿಕೊಳ್ಳುವುದು ಆಗದ ಸಾಮಾನ್ಯ ಮನುಷ್ಯನಿಗೆ ಇರುವ ಅಷ್ಟೂ ತಲ್ಲಣಗಳು, ಆಸೆಗಳು, ಪ್ರೀತಿ, ವ್ಯಾಮೋಹದ ಕವಲುಗಳು, ರುಚಿಗೆ ತಕ್ಕಷ್ಟು ತುಂಟತನಗಳು ನಿಮ್ಮ ಬರವಣಿಗೆಯ ಸಮರಸ ಕಾಯ್ದುಕೊಂಡಿರುವುದರಲ್ಲಿ ಅನುಮಾನವೇ ಇಲ್ಲ.

ಯಾವುದೋ ಉದ್ದೇಶ ಇಟ್ಟುಕೊಂಡು ಹೊರಟ ಪಯಣವಾದರೂ ಬರಬರುತ್ತಾ ಯಾವುದಕ್ಕೂ ಅಂಟಿಕೊಳ್ಳದೇ ಬದುಕು ನಡೆಸಿದಂತೆ ಹಾದಿ ಸವೆಸುವಾಗ ಉದ್ದೇಶ ನೆರವೇರಿತಾ ಎಂಬುದನ್ನು ಅಳತೆ ಮಾಡುತ್ತ ಕೂತರೆ ಬಹಳಷ್ಟು ಸಲ ಕಾಡುವುದು ನಿರಾಸೆಯೇ. ಅದಾವುದೂ ಇಲ್ಲದಾಗ ನಡಿಗೆ ತನ್ನ ಗಮ್ಯವನ್ನು ತಾನೇ ಕಂಡುಕೊಳ್ಳುತ್ತದೆ, ಕಂಡುಕೊಳ್ಳಬೇಕು ಕೂಡಾ. ನದಿಯೊಂದು ತನ್ನ ಪಾತ್ರವನ್ನು ತಾನೇ ಕಂಡುಕೊಂಡು ಹರಿದು ಕಡಲ ಸೇರುವ ಹಾಗೇ. ನಿಮ್ಮ ಪಯಣ ಕೂಡ ಅದೇ ಥರ ತನ್ನ ದಡದ ಮೇಲಿನ ಎಲ್ಲರಿಗೂ ಎಲ್ಲಕ್ಕೂ ನೀರುಣಿಸಿ ಸಾಗುವ ನದಿಯಂತೆ ಭಾಸವಾಯಿತು.

ಹೀಗೆ ಅಲೆಯುತ್ತ against all the odds, ಜ್ಞಾನವನ್ನೇ ಆದರೂ ಹಂಚಿಕೊಳ್ಳುವುದು ಸುಲಭವಲ್ಲ. ಅದನ್ನು ಸಾಧಿಸಿದ್ದೀರಿ. ಶಾಲೆಗಳ ಸ್ಥಿತಿಗತಿಗಳಿಗೆ ಅನವಶ್ಯಕವಾಗಿ ಸರ್ಕಾರವನ್ನು ಹೊಗಳುವುದು/ತೆಗಳುವುದು ಎರಡೂ ಪ್ರಯೋಜನವಿಲ್ಲ. ಊರ ಮಂದಿ, ಜತೆಗೆ ಶಿಕ್ಷಕ ವೃಂದ ಮನಸ್ಸು ಮಾಡಿದರೆ ಎಂಥ ಮಗುವಲ್ಲೂ ಒಳ್ಳೆಯದನ್ನು ಬಿತ್ತಿ ಬೆಳೆಯಬಹುದು ಎನ್ನುವುದೇ ಕೊನೆಯ ಸತ್ಯ. ಸಮಸ್ಯೆಗಳ ಪರಿಹಾರದ ಮಾತನಾಡುತ್ತ ಇಂಥ ಸತ್ಯಗಳನ್ನು ಅನಾವರಣಗೊಳಿಸಿದ್ದೀರಿ.

ಈ ಇಡೀ ಕಥಾನಕವನ್ನು ಎಲ್ಲ ಶಾಲೆಗಳಿಗೂ ಕಳುಹಿಸಿದರೆ ಹೊಗಳಿಸಿಕೊಂಡವರು ಇನ್ನೂ ಹೆಚ್ಚು ಜವಾಬ್ದಾರಿಯಿಂದ, ತೆಗಳಿಸಿಕೊಂಡವರೂ ಇನ್ನಾದರೂ ಒಳ್ಳೆಯದು ಮಾಡಬೇಕೆಂಬ ಭಾವದಿಂದ ಕೆಲಸ ಮಾಡಬಹುದಾ ಅನ್ನೋ ಸಣ್ಣ ಆಸೆಯ ಭಾವವೊಂದು ನನ್ನೊಳಗೆ ಸುಳಿದದ್ದು ಹೌದು. ಬಹಳಷ್ಟು ಸಾರ್ತಿ ಇಂಥ ಕಥಾನಕಗಳು ಆತ್ಮರತಿಯಲ್ಲಿ ಕೊನೆಗೊಳ್ಳುವುದೇ ಹೆಚ್ಚು. ನೀವು ಆ ಅಪಾಯವನ್ನು ಗೆದ್ದಿದ್ದೀರಿ. Hats off to you.

avadhi-column-rahul bw-edited2ಅಂದ ಹಾಗೆ ಎರಡು ಕಂದಮ್ಮಗಳ ಅಮ್ಮನಾಗಿ ಬಸುರಿ ತಲ್ಲಣಗಳನ್ನ, ಆ ಸಮಯದಲ್ಲಿ ಸಾಂಗತ್ಯದ ಆಸೆ, ಅವಶ್ಯಕತೆ ಕೆಲವೊಮ್ಮೆ ಅನಿವಾರ್ಯತೆಗಳನ್ನು ಬಲ್ಲೆ. ನಿಮ್ಮ ಕನಸುಗಳಿಗೆ ಪೂಜಾ ಒತ್ತಾಸೆಯಾಗಿ ನಿಂತಿಲ್ಲವೇನೋ ಎಂಬ ಭಾವ ನಿಮ್ಮನ್ನು ಚೂರು ಕಾಡಿದ್ದರೂ ಇಷ್ಟು ಮಟ್ಟಿಗೆ ಬಿಟ್ಟು ಕೊಟ್ಟಿದ್ದು ತಳ್ಳಿ ಹಾಕುವ ಹಾಗಿಲ್ಲ. ನಿಮ್ಮ ಯಶಸ್ಸಿಗೆ ಆಕೆಯ ಪ್ರೀತಿ, ತಾಳ್ಮೆ ಕೂಡ ಕಾರಣವೇ ಎಂದುಕೊಂಡಿದ್ದೇನೆ. ಅಂಥ ಹುಡುಗಿ ಪೂಜಾಗೆ, ಕಂದನಿಗೆ ನನ್ನ ನಲ್ಮೆ. ಕಾಣದ ಕಡಲಿಗೆ ಹಂಬಲಿದ ಮನ ಕಂಡ ಕನಸಿಗೂ ಹಂಬಲಿಸುತ್ತದೆ. ನಿಮ್ಮ ಕಂದ ಅಂಥ ಕನಸಿನ ಮೂಟೆಯಾಗಲಿ. ನಿಮಗಿಂತ ಹೆಚ್ಚು ಸುತ್ತಿಲಿ, ಬೆಳೆಯಲಿ.

ಹೀಗೇ ಅಲೆಯುತ್ತಿರಿ, ಮತ್ತು ಬರೆಯುತ್ತಿರಿ. ನಾವು ಓದುತ್ತಿರುತ್ತೇವೆ ಮತ್ತು ಯಾವತ್ತೋ ಒಮ್ಮೆ ತಟ್ಟನೇ ಚಪ್ಪಲಿ ಮೆಟ್ಟಿಕೊಂಡು ಹೊರಡುತ್ತೇವೆ. ಅಂಥ ಪಯಣದಲ್ಲಿ ಯಾವತ್ತಾದರೂ ಭೇಟಿಯಾಗೋಣ.

‍ಲೇಖಕರು Admin

19 July, 2016

4 Comments

  1. Anonymous

    Thank u so much shama

    • Shama, Nandibetta

      Thank you. Sorry didn’t get your name.

  2. Bhagyachikkanna

    ಹಾ…. ಯಾವತ್ತಾದರೂ ಜೊತೆ ಜೊತೆಯಾಗಿ…

    • Shama, Nandibetta

      ಭಾಗ್ಯ ನಿಮ್ಮ ಹಾರೈಕೆ ನಿಜವಾಗಲಿ. Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading