ತುಂಬಾ ಆತ್ಮೀಯವಾದ ಗೀತೆ. ಇದಕ್ಕೆ ಉಪಾಸನ ಮೋಹನ್್ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತೆಗೂ ಸಂಗೀತಕ್ಕೂ ತುಂಬಾ ಹೊಂದುತ್ತದೆ. ಮೋಹನ್ ಈ ಗೀತೆಯನ್ನು ಸಿಡಿ ರೂಪದಲ್ಲಿ ಹೊರತಂದಿದ್ದಾರೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕವಿಗಳ ಅನೇಕ ಕವಿತೆಗಳಿಗೆ ಹೊಸ ಟ್ಯೂನ್ ನೀಡುವ ಮೂಲಕ ಇಂದಿನ ಪೀಳಿಗೆಗೆ ಭಾವಗೀತೆಗಳ ರುಚಿ ತೋರಿಸಿದ್ದಾರೆ.
ಫಿಲಿಫ್ಸ್ ಕಂಪನಿಯಲ್ಲಿ ಕೈ ತುಂಬಾ ಸಂಬಳ ಪಡಯುತ್ತಿದ್ದರೂ ಸಂಗೀತದ ಆಕರ್ಷಣೆಯಿಂದ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡವರು. ಅವರೊಬ್ಬ ಭಾವಗೀತೆಗಳ ಪರಿಚಾರಕ ಎಂದರೆ ಉತ್ಪ್ರೇಕ್ಷೆಯಲ್ಲ.
ಮೋಹನ್ ಕೇವಲ ಸಂಗೀತ ಸಂಯೋಜಕ ಮಾತ್ರವಲ್ಲ ಒಬ್ಬ ಉತ್ತಮ ಗಾಯಕ ಕೂಡ. ಕವಿ ಬಿ.ಆರ್.ಲಕ್ಷ್ಮಣರಾಯರ ‘ಕೊಲ್ಲುವುದಾದರೆ ಕೊಂದು ಬಿಡು ಹೀಗೆ ಕಾಡಬೇಡ’ ಅವರಿಗೆ ಹೆಸರು ತಂದುಕೊಟ್ಟ ಗೀತೆ. ಲಘು ಸಂಗೀತ, ಭಾವಗೀತೆಗಳ ಬೆಳವಣಿಗೆಗೆ ಕಾರಣರಾದ ಮೈಸೂರು ಅನಂತಸ್ವಾಮಿ, ಕಾಳಿಂಗರಾಯರನ್ನು ಆರಾಧಿಸುವ ಮೋಹನ್ ಪ್ರತಿ ವರ್ಷ ನೂರಾರು ಮಕ್ಕಳಿಗೆ ಭಾವಗೀತೆ ಕಲಿಸುತ್ತಿದ್ದಾರೆ. ನೂರೈವೈತ್ತು ಮಕ್ಕಳನ್ನು ಒಂದೇ ವೇದಿಕೆಯಲ್ಲಿ (ಬೆಂಗಳೂರಿನ ಸಂಸ ಬಯಲು ರಂಗಮಂದಿರ, ಕಲಾಕ್ಷೇತ್ರದ ಹಿಂಭಾಗ)ಹಾಡಿಸಿ ದಾಖಲೆ ಸೃಷ್ಟಿಸಿದ್ದಾರೆ. ತಾವೇ ಸ್ಥಾಪಿಸಿರುವ ಉಪಾಸನೆ ಶಾಲೆಯ ಹೆಸರಲ್ಲಿ ಪ್ರತಿವರ್ಷ ಕಲಾವಿದರನ್ನು ಗೌರವಿಸಿ, ಪ್ರಶಸ್ತಿ ನೀಡಿ ಸನ್ಮಾನಿಸುತ್ತಾರೆ.
ಅಷ್ಟು ಸಾಲದೆಂಬಂತೆ ಪ್ರತಿ ತಿಂಗಳು ಸಂಗೀತಾಸಕ್ತರ ಮನೆಯಂಗಳದಲ್ಲಿ ಒಂದು ಸಂಜೆ ‘ಮನೆಯಂಗಳದಲ್ಲಿ ಭಾವಗೀತೆಗಳ ಗಾಯನ’ ನಡೆಸುತ್ತಾರೆ. ಈಗಾಗಲೇ 56ಕ್ಕೂ ಹೆಚ್ಚು ಮನೆಯಂಗಳದ ಕಾರ್ಯಕ್ರಮ ನೀಡಿದ್ದಾರೆ. 57ನೆಯದು ಬೆಂಗಳೂರಿನ ಬನಶಕರಿ ಮೂರನೇ ಹಂತದ ಸೀತಾ ಸರ್ಕಲ್ ಸಮೀಪದ ಮನೆಯಂಗಳದಲ್ಲಿ ನಡೆಯಲಿದೆ. ಸದಾ ಸಂಗೀತಕ್ಕಾಗಿ ಮೋಹನ್ ಅಹರ್ನಿಶವಾಗಿ ದುಡಿಯುತ್ತಿದ್ದಾರೆ.
‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಅಂತ ಅಂದು ಅನಂತ ಸ್ವಾಮಿ ಹಾಡಿದರೆ, ಇಂದು ಮೋಹನ್ ಯಾರು ಕೇಳಲಿ, ಬಿಡಲಿ ತಮ್ಮ ಸಂಗೀತ ಸರಸ್ವತಿ ಸೇವೆಯನ್ನು ಮುಂದುವರಿಸಿದ್ದಾರೆ. ಅವರಿಗೆ ಈಗ ಬೇಕಿರುವುದು ನಮ್ಮೆಲ್ಲರ ಪ್ರೀತಿಯ ಹಾರೈಕೆ. ಆಸಕ್ತಿಯಿದ್ದವರು ಮೋಹನ್ ಸಂಪರ್ಕಿಸಬಹುದು. ಸಂಖ್ಯೆ :9845338363
ಗಾಣಧಾಳು ಶ್ರೀಕಂಠ ಪತ್ರಕರ್ತ, ಪ್ರಜಾವಾಣಿ





0 Comments