ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಬರೆದ ಸೆಖೆಯ ಲಹರಿ

ಸೆಖೆಯ ಪ್ರವರಗಳು

– ಸ್ಮಿತಾ ಅಮೃತರಾಜ್

ಅಯ್ಯೋ..!ಎಂಥ ಸೆಖೆ ಮಾರಾಯ್ರೇ..ಯಾವಾಗ ಮಳೆ ಬರುತ್ತೋ ಏನೋ? ಇಷ್ಟೊಂದು ಸೆಖೆಯನ್ನ ಇಷ್ಟು ವರುಷದಲ್ಲಿ ಒಮ್ಮೆಯೂ ಅನುಭವಿಸಿರಲಿಕಿಲ್ಲಪ್ಪ..ಹೀಗಾದ್ರೆ ದಿನ ದೂಡೋದೇ ಕಷ್ಟವೇನೋ ಅನ್ನುತ್ತಾ ಬೈರಾಸಿನಿಂದ, ಸೀರೆಯ ಸೆರಗಿನಿಂದ, ಕಚರ್ೀಪಿನಿಂದ ಮುಖ ಕುತ್ತಿಗೆಯಿಂದ ಧಾರಾಕಾರವಾಗಿ ಸುರಿಯುವ ಬೆವರನ್ನು ಒರೆಸಿಕೊಳ್ಳುತ್ತಾ ಹೆಚ್ಚಿನವರು ಆತಂಕ ಪಡುತ್ತಾ ಅವಲತ್ತುಕೊಳ್ಳುತ್ತಾರೆ.ಬೇಸಿಗೆ ಕಾಲವೂ ಅದರ ಜೊತೆಗೆ ಹರಿದು ಬರುವ ಬೆವರ ಧಾರೆಯೂ ಪ್ರತೀ ವರ್ಷವೂ ಎಲ್ಲರ ಅನುಭವಕ್ಕೆ ಬಂದೇ ಇರುತ್ತದೆ. ಒಸರುವ ಉಪ್ಪುಪ್ಪು ಬೆವರನ್ನು ಶಪಿಸಿಕೊಳ್ಳುತ್ತಲೇ ಸೈರಿಸಿಕೊಂಡಿರುತ್ತಾರೆ.ಮತ್ತೊಂದು ಹೊಸ ಋತು ಅಡಿಯಿಟ್ಟಾಗ ಹಳತೆಲ್ಲಾ ಮರೆತಂತಾಗಿ,ಮತ್ತೆ ಬೇಸಿಗೆ ಪ್ರತ್ಯಕ್ಷ ಆದಾಕ್ಷಣ ಬೇಸಗೆಯಲ್ಲಿ ಬಳಸುವ ಔಪಚಾರಿಕ ಮಾತು ಇದೇ ಎಂಬಂತೆ ಅದನ್ನು ಪ್ರತೀ ಭಾರಿಯೂ ಬಳಸಲಾಗುತ್ತದೆ. ಹಾಗೆ ನೋಡಿದರೆ ನಮ್ಮದು ಕರಾವಳಿ ತೀರದ ಊರು.ಚಳಿ ಇರಲಿ,ಮಳೆ ಇರಲಿ,ಯಾವ ಕಾಲವೇ ಬರಲಿ ಅದರ ನಡುವೆಯೂ ಸೆಖೆ ತಟ್ಟುತ್ತಾ ಇರುವಾಗ ಇನ್ನು ಬೇಸಿಗೆ ಕಾಲ ಆರಂಭಗೊಂಡಾಗ ಸೆಖೆಯ ಪ್ರವರ ಮತ್ತೆ ಕೇಳಬೇಕೇ?
ಸೂರ್ಯನೇ ಖುದ್ದಾಗಿ ಇಳಿದು ಮನೆಯ ಚಾವಣಿಯಲ್ಲಿ ನೇತು ಹಾಕಿಕೊಂಡಂತೆ ಭಾಸವಾಗಿ ನಾವು ಗಾಬರಿಯಿಂದ ಹುಯಿಲಿಡುತ್ತೇವೆ.ಇನ್ನು ಬೇಸಿಗೆಯ ಜೊತೆಯಲ್ಲೇ ಅಮರಿಕೊಂಡು ಬರುವ ಮುಗಿಯಲಾರದಷ್ಟು ಮತ್ತು ಮುಗಿಸಲೇ ಬೇಕಾದ ತರಾವರಿ ಕೆಲಸಗಳು.ಉರಿ ಬಿಸಿಲಿಗೆ ಮೈ ಒಡ್ಡಿಕೊಳ್ಳುತ್ತಾ ಹಪ್ಪಳ, ಸಂಡಿಗೆ, ಅಂತ ಹೀಗೆ ಇನ್ನಿತರ ತಯಾರಿಗಳಿಗೆ ಸಿದ್ಧರಾಗುತ್ತಾ ಉಸ್ಸಪ್ಪಾ ಅಂತ ಹೈರಾಣಾಗುತ್ತೇವೆ.ಮುಂದೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಮೆಲ್ಲುವ ಈ ಕುರುಕುರು ತಿಂಡಿಗಳು ಅದೆಷ್ಟು ರುಚಿಯಾಗಿರುತ್ತವೆ ಅಂದರೆ ಬಹುಷ: ಇದಕ್ಕೆ ಕಾರಣ ಬೇರೆಯದೇ ಇದೆ.ಅ ಸೆಖೆಗೆ ಹಿಟ್ಟು ನಾದಿ,ಒತ್ತಿ ,ಹಪ್ಪಳ ಸಂಡಿಗೆಯನ್ನು ಉರಿವ ಸೂರ್ಯನಿಗೆ ಮುಖ ಮಾಡಿ ಚಾಪೆಯ ಮೇಲೆ ಹರವಿ ಹಾಕುವವರೆಗಿನ ಕಾಯಕ ಬರೇ ಸುಮ್ಮಗಲ್ಲ.ಅಷ್ಟು ಹೊತ್ತಿಗಾಗಲೇ ನಮ್ಮ ಶ್ರಮದ ಬೆವರು,ಅದರ ಜೊತೆಗೆ ಉಚಿತವಾಗಿ ಸುರಿಯುವ ಶೆಖೆಯ ಬೆವರು ಒಂದಿನಿತಾದರೂ ಇದಕ್ಕೆ ತಾಕದೇ ಇದ್ದೀತೇ?ಎಷ್ಟೇ ಮುಂಜಾಗರುಕತೆವಹಿಸಿಕೊಂಡರೂ ಕಣ್ತಪ್ಪಿನ ಪ್ರಮಾದದಿಂದ ಇವೆಲ್ಲಾ ಸಂಭವಿಸಿಬಿಡುತ್ತದೆಯೆಂಬುದನ್ನು ಪೂರ್ಣ ಪ್ರಮಾಣದಲ್ಲಿ ಅಲ್ಲಗಳೆಯುವಂತಿಲ್ಲ.ಈ ಕಾರಣದಿಂದಾಗಿ ತದನಂತರ ನಾವು ಸವಿಯುವ ಈ ತಿಂಡಿಗಳಿಗೆ ಮತ್ತೆ ವಿಶಿಷ್ಟವಾದ ರುಚಿ ದಕ್ಕದೇ ಇದ್ದೀತೇ?
ಇದಕ್ಕೆ ಇರಬೇಕು ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತು ಅಕ್ಷರಷ: ಸತ್ಯ ಅಂತ ಗೋಚರಿಸಿ ಸೆಖೆಗಾಲದ ಈ ತರಾತುರಿ ತಯಾರಿಗಳಿಗೂ ಅನ್ವಯಿಸಿ ಬಿಡುತ್ತದೆಯಲ್ಲವೇ?. ಇನ್ನು ಬೇಸಿಗೆಯ ಜೊತೆಗೇ ಅಂಟಿಕೊಂಡು ಹಿಂದಿನಿಂದ ಸರತಿಯ ಸಾಲಿನಂತೆ ಒಂದೊಂದಾಗಿ ಬರುವ ಹಬ್ಬ, ಜಾತ್ರೆ, ನೇಮ,ನಾಮಕರಣ,ಮದುವೆ..ಒಂದೇ ಎರಡೇ?.ಇಲ್ಲೂ ಒಂದೆಡೆ ಎಲ್ಲರೂ ಕಲೆತು ಮಾತಿಗೆ ಹಚ್ಚಿಕೊಂಡಾಗಲೂ ಸೆಕೆಯ ಬಿಟ್ಟರೆ ಬೇರೆ ಮಾತುಕತೆಗೆ ವಸ್ತುವೇ ಇಲ್ಲವೆಂಬಂತೆ ಚಡಪಡಿಸುವಂತಾಗುತ್ತದೆ.ಇಲ್ಲವೇ ಈ ಸುರಿವ ಹಾಳು ಬೆವರಿನ ದೆಸೆಯಿಂದಾಗಿ ಮಾತನಾಡಲು ಅಷ್ಟೊಂದು ಒಳ್ಳೆಯ ವಿಷಯಗಳಿದ್ದರೂ ಮಾತನಾಡಲು ಆಸಕ್ತಿಯೇ ಹೊರಟಂತಾಗುತ್ತದೆ.ಇನ್ನು ಮಾಡಲು ಕೆಲಸಗಳು ಗುಪ್ಪೆ ಗುಪ್ಪೆಯಾಗಿ ಒಂದೆಡೆ ಬಿದ್ದುಕೊಂಡಿದ್ದರೂ ಕೈ ಕಾಲುಗಳು ಬೆಳಗ್ಗೆ ಬೆಳಗ್ಗೆಯೇ ಸೋತು ಸೊಪ್ಪಾಗಿರುತ್ತದೆ.ಹಾಳು ಸೆಖೆಗೆ ಎಷ್ಟೊಂದು ಉದಾಸೀನ ಆವರಿಸಿಕೊಳ್ಳುತ್ತದೆ ಅಂದರೆ ಮತ್ತೆ ಮಾಡದೆ ನಿವರ್ಾಹವೇ ಇಲ್ಲವೆಂಬಂತಾದಾಗ,ಒಂದು ಕಡೆಯಿಂದ ಕೈ ಕಾಲು ಎಳೆದುಕೊಂಡು,ಮತ್ತೊಂದು ಕಡೆಯಿಂದ ಬೆವರನ್ನು ಚೀಟಿಕೊಂಡು ಹೇಗಾದರೂ ಮಾಡಿ ಕೆಲಸದ ಶಾಸ್ತ್ರ ಮಾಡಿ ಮುಗಿಸಿಬಿಡುತ್ತೇವೆ.

ಮೇಲೆ ಆಕಾಶಕ್ಕೆ ಮುಖ ಮಾಡಿ ನೋಡಿದರೆ ಮಂಕು ಕವಿದ ಆಗಸದಲ್ಲಿ ಮೋಡಗಳು ಏದುಸಿರು ಬಿಡುತ್ತಾ ಚಲಿಸುತ್ತಿವೆ.ಈ ಸೆಕೆ ಸೆಕೆ ಅಂತ ನಾವು ಬೊಬ್ಬಿಡುವ ಹೊತ್ತಲ್ಲೇ ಮತ್ತೊಂದು ಉಚಿತವಾಗಿ ನಮ್ಮ ದೇಹಕ್ಕೆ ಅಂಟಿಕೊಳ್ಳುವ ಉಡುಗೊರೆ ಅಂದರೆ ಬೆವರು ಸಾಲೆ.ಸುರಿಯುವ ಬೆವರೂ..ತುರಿಸುವ ಕಜ್ಜಿಯೂ..ಅಯ್ಯಮ್ಮಾ..ಈ ಯಾತನೆ ಯಾರಿಗೂ ಬರಕೂಡದು.ತುರಿಕೆಯ ನರಕವೂ,ತುರಿಸಿಕೊಳ್ಳುವಾಗಿನ ಸುಖವೂ,ತದನಂತರ ಉಲ್ಬಣಗೊಳ್ಳುವ ಬೆವರು ಕಜ್ಜಿಯೂ…!. ಬೆವರು ಗುಳ್ಳೆ ಬಂದರೆ ಅದರ ಸುದ್ದಿಗೆ ಹೋಗದೆ ಅಗಾಗ್ಗೆ ಉಗುರು ಮುಟ್ಟಿ ಉಪಚರಿಸದೆ ಇರುವುದೇ ಇದಕ್ಕೆ ಪರಿಹಾರೋಪಾಯ.ಇಂತಹ ಸಾಮಾನ್ಯ ತಿಳುವಳಿಕೆಗಳು ಎಲ್ಲರಿಗೂ ತಿಳಿದೇ ಇದ್ದರೂ ಇದನ್ನು ಶಿರಸಾವಹಿಸಿ ಪಾಲಿಸುವುದು ಅಷ್ಟೇ ತ್ರಾಸದಾಯಕವೆಂಬುದು ಬೆವರು ಕಜ್ಜಿಗೂ ಮತ್ತು ತುರಿಸಲು ಮುಂದೆ ಹೋಗುವ ಕೈಗಳಿಗೂ ಮಾತ್ರ ತಿಳಿದ ವಿಷಯ.
ಒಂದಷ್ಟು ವರುಷಗಳ ಹಿಂದಕ್ಕೆ ಜಾರಿದರೆ ಹಳ್ಳಿಯ ಎಲ್ಲಾ ಕಡೆಗಳಲ್ಲಿಯೂ ವಿದ್ಯುಚ್ಛಕ್ತಿಯ ಸೌಲಭ್ಯವಿರಲಿಲ್ಲ.ಇದ್ದ ಕಡೆಗಳಲ್ಲಿಯೂ ದಿನನಿತ್ಯ ಕರೆಂಟು ಇದ್ದೇ ಇರುತ್ತದೆಯೆಂಬ ಖಾತ್ರಿಯಿರಲಿಲ್ಲ.ಹಾಗಾಗಿ ಹಳ್ಳಿಯ ಮನೆಯ ಜಗಲಿಯಲ್ಲಿ ನೋಡಿದರೆ ಅಡಿಕೆ ಹಾಳೆಯಿಂದ ಮಾಡಿದ ಬೀಸಣಿಕೆಯೊಂದು ಇದ್ದೇ ಇರುತ್ತಿತ್ತು.ಹೊರಗಿನಿಂದ ಬಂದು ಜಗಲಿಯ ಮೇಲೆ ಉಸ್ಸಪ್ಪಾ ಅಂತ ಪವಡಿಸಿದವರೆಲ್ಲಾ ಮೊದಲು ಆ ಬೀಸಣಿಕೆಯನ್ನ ಎತ್ತಿ ಅದನ್ನು ಬೀಸಿ ತಂಪು ಮಾಡಿಕೊಳ್ಳುತ್ತಲೇ ಆಯಾಸ ಪರಿಹಾರ ಮಾಡಿಕೊಂಡು ಮತ್ತೆ ಉಳಿದ ಮಾತುಕತೆಗೆ ಅಡಿಯಿಡುತ್ತಿದ್ದದ್ದು.ಈಗ ಬೇಸಿಗೆಯಲ್ಲಿ ಕರೆಂಟು ಕೈ ಕೊಟ್ಟರೆ ಮುಗೀತು.ವಿದ್ಯುತ್ ತಂತಿಗೆ, ತಂತಿ ಕಂಬಕ್ಕೆ,ಕೆ.ಇ.ಬಿ.ಗೆ,ಒಟ್ಟಿನಲ್ಲಿ ಕಾಣದೇ ಹರಿದು ಬರುವ ವಿದ್ಯುತ್ ಕಾಂತಿಗೆ ಶಪಿಸುತ್ತಲೇ ಇನ್ನಷ್ಟೂ ಸೆಖೆಯ ಧಗೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.ದಿನದ ಇಪ್ಪತ್ತನಾಲ್ಕು ಗಂಟೆಯೂ ಪುರುಸೊತ್ತಿಲ್ಲದೆ ಗಿರ ಗಿರನೆ ತಿರುಗುವ ಫ್ಯಾನ್ ಮಾತ್ರ ಒಂದಷ್ಟು ಆರಾಮವಿಲ್ಲದೆ ಹೈರಾಣಾಗಿ ನಮಗೆ ಅದೆಷ್ಟು ಶಪಿಸುತ್ತಾ ತಿರುಗುತ್ತಿದೆಯೋ ಆ ದೇವನಿಗೇ ಗೊತ್ತು.
ಯಥಾಪ್ರಕಾರ ಹಾಜರಾಗುವ ಬೇಸಿಗೆ,ಅದರ ಜೊತೆಗೆ ಆವರಿಸಿಕೊಳ್ಳುವ ಸುಡುವ ಧಗೆ ಇದರಿಂದಾಗಿಯೇ ನಾವುಗಳು ಅದೆಷ್ಟೋ ಬದುಕಿನ ಸಹಜ ಪಾಠಗಳನ್ನು ಯಾವುದೇ ಗುರುವಿಲ್ಲದೆ ಕಲಿತು ಬಿಡುತ್ತಿದ್ದೆವೆಂಬುದು ಪಕ್ಕನೆ ನಮ್ಮ ಗಮನಕ್ಕೆ ಬರುವ ವಿಚಾರವಲ್ಲ.ಯಾಕೆಂದರೆ ಅಮ್ಮಂದಿರು ಬಟ್ಟೆ ತೊಳೆಯಲು ಹೊರಟಾಕ್ಷಣ ಮಕ್ಕಳೆಲ್ಲರೂ ಅಮ್ಮನೊಂದಿಗೆ ಬಾಲದಂತೆ ಅಂಟಿಕೊಂಡು ಬಿಡುತ್ತಾರೆ.ಹೊಳೆಯೋ,ಹಳ್ಳವೋ,ತೋಡೋ..ಆಕೆಯ ಕೆಲಸ ಮುಗಿಯುವವಲ್ಲಿವರೆಗೆ ಇವರುಗಳು ಸೆಖೆಯೆಂಬ ನೆವವೊಡ್ಡಿ ನೀರೊಳೊಗೆ ಬಿದ್ದುಕೊಂಡು,ಕಾಲು ಅಲ್ಲಾಡಿಸಿಕೊಂಡು ಆಟವಾಡುವಾಗಿನ ಯಾವುದೋ ಒಂದು ಕ್ಷಣದಲ್ಲಿ ಅಚಾನಕ್ಕಾಗಿ ಈಜು ಕಲಿತು ಬಿಡುತ್ತಾರೆ.ಯಾವುದೇ ಈಜು ತರಬೇತಿ ಕೇಂದ್ರಗಳಿಗೆ ಹೋಗದೇ ತಮ್ಮಷ್ಟಕ್ಕೆ ತಾವೇ ಲೀಲಾಜಾಲವಾಗಿ ಮೀನಿನಂತೆ ಈಜಲು ಕಲಿತದ್ದು ಸುಮ್ಮಗೆ ಸತಾಯಿಸಿದ ಸೆಖೆಯ ಪರಿಣಾಮವಲ್ಲದೆ ಮತ್ತಿನ್ನೇನು?.ಈಗಂತೂ ಮಕ್ಕಳಿಗೆ ಈಜು ಕಲಿಸಲೋಸುಗ ಗಂಟೆಗಿಷ್ಟೆಂಬಂತೆ ಬೆವರ ಹನಿ ಇಳಿಸಿ ಗಳಿಸಿದ ಹಣವನ್ನೆಲ್ಲಾ ವ್ಯಯಿಸುವಾಗ ಚಳಿಯೂರಿನಲ್ಲೂ ಬೆವರುಕ್ಕದೇ ಇದ್ದೀತೇ?.ಇನ್ನು ಕಾಡು ಮೇಡು ಸುತ್ತಿ ಸುಳಿದು ಮರಗಳ ಹತ್ತಿ ಗೊಟ್ಟೆ ಹಣ್ಣು,ಮಜ್ಜಿಗೆ ಹಣ್ಣು,ಕಕ್ಕಡೆಹಣ್ಣು..ಹೀಗೆ ಬಗೆ ಬಗೆಯ ಹಣ್ಣನ್ನು ಮೆಲ್ಲುತ್ತಾ ಸಾಗುವಾಗ ಚಾಳೆಗರಿಯನ್ನು ಗಿರಿಗಿಟ್ಟಿ ಕಡ್ಡಿ ಮಾಡಿಕೊಂಡು,ಅಡಿಕೆ ಹಾಳೆಯ ಮುಟ್ಟಾಳೆ ಮಾಡಿಕೊಂಡು ಅಥವಾ ಮತ್ಯಾವುದೋ ಸಲಕರಣೆಗಳನ್ನು ನಮ್ಮಷ್ಟಕ್ಕೆ ನಾವೇ ಕಲಿತು ಅದನ್ನು ತಯಾರಿಸಿಕೊಂಡು ಸಾಗುವ ಸುಖ ಈಗಿನ ಬೇಸಿಗೆ ಶಿಬಿರಗಳಲ್ಲಿ ದಕ್ಕೀತೇ?
ಇದು ಆಯಾಯ ಕಾಲದ ಅನಿವಾರ್ಯತೆಯ ಹೊಂದಾಣಿಕೆ ಆದ ಕಾರಣ ಸಹಜವಾಗಿ ಸಿಗದ ಖುಷಿಯನ್ನು ಈ ಮೂಲಕ ಹಣ ತೆತ್ತಾದರೂ ಕಲಿತು ದಕ್ಕಿಸಿಕೊಳ್ಳುವುದು ಕೂಡ ಈ ಕಾಲದ ಈ ಕ್ಷಣದ ಖುಷಿಯ ವಿಷಯವೇ ಅಂತ ಈ ಸುಡು ಬಿಸಿಲಲ್ಲಿ ತಂಪು ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳುವ ಸಂಗತಿಯೇ.ಆ ಬಸವಳಿವ ಸೆಖೆಗೆ ತೋಟದಿಂದ ತಂದ ಅಡಿಕೆ ಹಾಳೆಯನ್ನು ಅಚ್ಚುಕಟ್ಟಾಗಿ ಕತ್ತರಿಸಿ ತೊಳೆದು ,ಅಮ್ಮ ಮಾಡಿದ ಕುಚ್ಚಿಲಕ್ಕಿ ಗಂಜಿಯ ಜೊತೆಗೆ ಮಿಡಿ ಮಾವಿನ ಉಪ್ಪಿನಕಾಯಿ ಮತ್ತು ಕೆಂಪು ಚಟ್ನಿಯನ್ನು ಅಡಿಕೆ ಹಾಳೆಯಲ್ಲಿ ಬಡಿಸಿಕೊಂಡು ಊಟ ಮಾಡುವ ಖುಷಿ ಮತ್ತು ಸುಖ ಈಗಿನ ಫಳ ಫಳ ಮುಖ ಕಾಣುವಂತೆ ಹೊಳೆವ ಸ್ಟೀಲ್ ತಟ್ಟೆಯಲ್ಲಿ ಊಟ ಮಾಡುವುದರಲ್ಲಿ ಸಿಗಲಾರದೆಂಬುದು ಪ್ರತೀ ಬೇಸಿಗೆಯಲ್ಲೂ ಅನುಭವಕ್ಕೆ ಬರುವ ಸತ್ಯ.
ಚಳಿಯೋ,ಬಿಸಿಲೋ,ಮಳೆಯೋ ಹವಮಾನ ಯಾವುದೇ ಇರಲಿ ನಮ್ಮ ನೆಲ,ನಮ್ಮ ಜಲ,ನಮ್ಮ ಊರು ಇದರ ಬಗ್ಗೆ ಅವರದೇ ಆದ ಅಭಿಮಾನ ಇದ್ದೇ ಇರುತ್ತದೆ. ನನಗೂ ಅಷ್ಟೇ, ಸೆಖೆಗಾಲದಲ್ಲಿ ಎಷ್ಟೇ ಸೆಖೆ ಇರಲಿ ನಮ್ಮನ್ನು ಕೂರೋಕು,ನಿಲ್ಲೋಕು ಬಿಡದಂತೆ ಗೋಳು ಹುಯ್ದುಕೊಂಡರೂ ನನ್ನೂರು ಅಂದರೆ ನನಗೆ ಅಪಾರ ಪ್ರೀತಿ.ಇಲ್ಲಿರುವ ದೊಡ್ಡ ದೊಡ್ಡ ಬೆಟ್ಟಗಳು,ಮಲೆಗಳು,ನಡುವೆ ಹರಿಯುವ ಜಲಪಾತಗಳು,ತೋಡು,ನದಿ,ನಮ್ಮೂರ ತೀರಕ್ಕೆ ಅಂಟಿಕೊಂಡ ಅಗಾಧ ಸಮುದ್ರ.ಅದರಲ್ಲಿ ತೀರಕ್ಕೆ ಹಾಯುವ ತೆರೆಗಳು.ಸೆಖೆಯನ್ನು ತಣಿಸಲೆಂಬಂತೆ ಕಾನನದಿಂದ ಹಾದು ಬರುವ ತಂಪು ತಂಪು ಗಾಳಿ.ಎಷ್ಟು ಹಿತವೆನ್ನಿಸುತ್ತದೆ ಬದುಕು? ಪ್ರಿಯರೆನ್ನಿಸಿದವರನ್ನೆಲ್ಲಾ ನಮ್ಮೂರಿಗೆ ಕರೆಯುವುದೆಂದರೆ ನನಗೆ ಮತ್ತೂ ಪ್ರಿಯ.ಹಾಗಾಗಿ ಮದುವೆಯ ವಯಸ್ಸು ಮೀರಿದರೂ ಇನ್ನು ಮದುವೆಯಾಗದ ನನ್ನ ಪ್ರೀತಿಯ ಗೆಳತಿಯೊಬ್ಬಳಿಗೆ,ನನ್ನೂರಿನ ಕಡೆ ನಿನಗೊಂದು ಅನುರೂಪನಾದ ಗಂಡು ಹುಡುಕುವೆ.ನಮ್ಮೂರಿಗೆ ನೀ ಬಂದರೆ ನನಗೆ ಇನ್ನೂ ಸಂತೋಷ ಅಂದಾಗ,ಅವಳೋ ಏಕ್ ದಂ ಗರಂ ಆಗಿ,ದೊಡ್ಡ ನಮಸ್ಕಾರ ಮಾರಾಯ್ತಿ ನಿನಗೆ!.ನಾನು ಮದುವೆಯಾಗದೆ ಬೇಕಾದರೂ ಉಳಿದೇನು.. ಆದರೆ ಅಯ್ಯೋ..! ಬೆವರುಜ್ಜಿಕೊಂಡು ಮಾತ್ರ ಅರೆಕ್ಷಣವೂ ಇರಲಾರೆ.ಅದೆಂಥಾ ಸೆಖೆ!,ರೇಜಿಗೆ ಹುಟ್ಟಿಸುವ ಬೆವರು? ಸ್ವರ್ಗ ಸುಖ ಸಿಕ್ಕರೂ ನಿಮ್ಮೂರಿನ ಸೆಖೆ ಮಾತ್ರ ನನಗೆ ಬೇಡಪ್ಪಾ ಅಂದಾಗ ಪ್ರತ್ಯುತ್ತರ ಕೊಡಲಾಗದೇ ಅವಳ ಮಾತಿಗೆ ನಾನೇ ಬೆವೆತಂತಾಗಿ,ಒಂದೊಮ್ಮೆ ನಾನು ನನ್ನೂರ ಬಿಟ್ಟು ಬೇರೆ ಊರಿಗೆ ಮದುವೆಯಾಗಿ ಹೋಗಲಾರೆ ಅಂತ ಹೇಳುತ್ತಿದ್ದದ್ದು ಈಗ ನೆನಪಗಾಗಿ ನೇವರಿಸಿ ಈ ಉರಿವ ಧಗೆಯಲ್ಲೂ ಕೊಂಚ ತಂಪೆನ್ನಿಸಿ ಹಾಯೆನ್ನಿಸುತ್ತಿದೆ.
 

‍ಲೇಖಕರು G

28 May, 2015

5 Comments

  1. Soory Hardalli

    Good article. I remembered my childhood at Kundapura, which was 43 years ago. But still I hate to go to my native place, still those days remain in mind for ever.

  2. shwetha r prasad

    Ayyo seke tadilikke agta illla….

  3. Veda H

    Nice article.You remembered me my native. I am also missing my native.

  4. arathi ghatikar

    Very goid article 🙂

  5. ugamasrinivas

    excellent article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading