ಸದಾಶಿವ ಸೊರಟೂರ್
ನೀನು ಎದುರುದಾಗಲೆಲ್ಲಾ
ಲೇಖನ ಚಿಹ್ನೆಗಳ ಸಮೇತ ಓದಿಕೊಂಡೆ
ಮತ್ತು
ನಿನ್ನನ್ನು ಅನುವಾದಿಸಿಕೊಳ್ಳದೆ
ಇರಲಾಗಲಿಲ್ಲ..
ಅನಿಸುತ್ತಿತ್ತು ನನಗೆ
ಅಲ್ಲಲ್ಲಿ ಕೆಲವು ಸಾಲುಗಳನು
ಯಾರೊ ಅಳಿಸಿರಬಹುದೆಂದು
ಹೊಡೆದು ಹಾಕಿ
ಕೊಂದಿರಬಹುದೆಂದು
ಪದಗಳ ಕಾಲು ಮುರಿದು ಹಾಕಿರಬಹುದೆಂದು
ಕೊನೆಯ ಶಬ್ದಗಳು ನಿನ್ನಿಂದ
ತಪ್ಪಿಸಿಕೊಂಡಿರಬಹುದೆಂದು..
ಆದರೂ ಅಂದಾಜು ಹಿಡಿದು ಇಷ್ಟಿಷ್ಟೆ
ತರ್ಜುಮೆ ಮಾಡಿದೆ
ಅಲ್ಲಲ್ಲಿ ಸಾಲು ಖಾಲಿ ಉಳಿದ
ಶೋಚನೀಯ ಪದ್ಯ
ಎದೆಯಲಿ ಉಳಿದಿದ್ದ ಆ ಸಾಲು ಮತ್ತು
ಆ ನಾಲ್ಕು ಹನಿ ಕಣ್ಣೀರಂತೂ
ಪಟ್ಟು ಹಿಡಿದಿವೆ
ಅರ್ಥ ಬಿಟ್ಟು ಕೊಡದೆ..
ಬರೆದು ಬರೆದು ಅಳಿಸಿ ಹಾಕಿದ್ದೆ ಬಂತು
ಉಹೂಂ
ಪೆನ್ನು ಕೆಳಗಿಟ್ಟೆ!
ಇಲ್ಲಿ ಯಾರಿಗೆ ಯಾರೂ ಅರ್ಥವಾಗುವುದಿಲ್ಲ
ಎಲ್ಲರೊಳಗೊಂದು ಅಳಿಸಿಹೋದ
ಸಾಲೊಂದಿರುವಾಗ..
ಯಾರ ನೋವು ಯಾರಿಗೂ ತಿಳಿಯುವುದಿಲ್ಲ
ನೋವಿಗೊಂದು ಪದವೇ
ಇಲ್ಲದಿರುವಾಗ..!
0 ಪ್ರತಿಕ್ರಿಯೆಗಳು