ಅರಿವು
-ಮನು ಗುರುಸ್ವಾಮಿ
ಅಣ್ಣ, ಕಾಯಕತತ್ವದ ಮಹತ್ವ
ತೆರೆದಿಟ್ಟಾಗ,
ಶರಣರು ಹೌದೌದೆಂದರು
ತಪ್ಪೆನ್ನಲಿಲ್ಲ!
ವಚನ ಕ್ರಾಂತಿಗೆ
ಅರಿವಿನ ಜ್ಯೋತಿಗೆ
ಬತ್ತಿಯನ್ನಿಟ್ಟು
ತೈಲವನ್ನೆರೆದಾಗ
ಬಿಜ್ಜಳನಂತ ಬಿಜ್ಜಳನೇ
ತಲೆದೂಗಿದನು
ಬೇಡೆನ್ನಲಿಲ್ಲ!
ದಯೆ, ಧರ್ಮದ ಪದಕ್ಕೆ
ಅರ್ಥ ಕಟ್ಟಿ
ಅನುಭವ ಮಂಟಪದಲ್ಲಿ
ದಯವೇ ಧರ್ಮದ
ಮೂಲವೆಂದಾಗ
ಶೂನ್ಯ ಸಿಂಹಾಸನಧಿಪತಿ
ಅಲ್ಲಮನೂ
ಚಕಾರವೆತ್ತಲಿಲ್ಲ!
ಆದರಿಂದು
ಬಸವತತ್ವದ ಬಗ್ಗೆ
ಊರ ಮಂದಿ ನೂರು
ಮಾತನಾಡಿದರೂ
ಸಾಮರಸ್ಯದ ಸತ್ವ
ಯಾರಲ್ಲೂ
ಮೈಗೂಡಲಿಲ್ಲ!
ಅಣ್ಣ, ಇಂದಿಗೂ ಜೀವಂತ
ಎಲ್ಲಿ?!
ನಿಮ್ಮೆದೆಯಾಳದಿ
ಅಡಗಿ ಕೂತ
ಮನುಷ್ಯತ್ವದಲ್ಲಿ
ಮೈ ಮುರಿದು ದುಡಿವ
ಕಾಯಕತ್ವದಲ್ಲಿ!
ಡಾಂಭಿಕತೆಯನ್ನ ವಿರೋಧಿಸಿ
ನಿಂತ ಅಣ್ಣನಿಗೆ ನಾವು
ಡಾಂಭಿಕ ಭಕ್ತರಾಗುವುದು ಬೇಡ!
ಈ ಅರಿವೇ ನಮಗೆ
ಸತ್ಯದ ದಾರಿ ನೋಡ!






0 Comments